ನವದೆಹಲಿ: ‘ಪ್ರಧಾನಮಂತ್ರಿಯವರೇ ಕೇಳಿ.. ನೀವು ನಮ್ಮನ್ನು ಎಳೆದು ಹೊರಹಾಕಬಹುದು, ಆದರೆ ನಿಮ್ಮನ್ನು ಇಂಡಿಯಾನೇ ಹೊರಹಾಕುತ್ತೆ..’
– ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೃಣಮೂಲ ಕಾಂಗ್ರೆಸ್ನ ನಾಯಕರು ಹೀಗೊಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಈ ವಾಗ್ದಾಳಿ ನಡೆಸಿದ್ದಾರೆ.
ಟಿಎಂಸಿ ನಾಯಕರ ನಿಯೋಗವು ಇಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿಯಾಗಲು ಅವಕಾಶ ಕೋರಿ ಸಮಯ ನಿಗದಿ ಮಾಡಿಕೊಂಡಿದ್ದರು. ಆರು ಗಂಟೆಗೆ ಭೇಟಿ ಎಂದು ಸಮಯ ನಿಗದಿ ಆಗಿದ್ದು, ಬಳಿಕ 7.30ರ ಸುಮಾರಿಗೆ ಇಂದು ಭೇಟಿ ಸಾಧ್ಯವಿಲ್ಲ ಎಂದಿದ್ದರು.
ಆಗ ನಿಯೋಗದಲ್ಲಿದ್ದ ಸದಸ್ಯರು ಕೃಷಿಭವನದಲ್ಲೇ ಧರಣಿ ಕುಳಿತರು. ಆಗ ದೆಹಲಿ ಪೊಲೀಸರು ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಸಂಸದರನ್ನು ಕೃಷಿ ಭವನದಿಂದ ಎಳೆದು ಹೊರಹಾಕಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧ ಮೊಯಿತ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಸಚಿವರ ಸಂದರ್ಶನಕ್ಕೆ ಅಪಾಯಿಂಟ್ಮೆಂಟ್ ಪಡೆದ ಬಳಿಕವೂ ಜಗತ್ತಿನಲ್ಲೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸಂಸದರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಮೂರು ಗಂಟೆ ಕಾಯಿಸಿ ಸಂದರ್ಶನಕ್ಕೆ ನಿರಾಕರಿಸಿದ್ದಾರೆ ಎಂದು ಆಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಪ್ರಧಾನಿ ಮತ್ತು ಗೃಹ ಸಚಿವರ ಹೆಸರನ್ನು ಉಲ್ಲೇಖಿಸಿ ಶೇಮ್ ಶೇಮ್ ಎಂದು ಕೂಗಿದ್ದಾರೆ.
Listen up @narendramodi – you can drag us out but the truth won’t go away- you have illegally withheld thousands of crores of MNREGA funds from the poot of West Bengal.
— Mahua Moitra (@MahuaMoitra) October 3, 2023
INDIA will throw you out come 2024. pic.twitter.com/qYA9BgnZWI
ಅಲ್ಲದೇ ಪ್ರಧಾನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮೊಯಿತ್ರಾ, ನೀವು ನಮ್ಮನ್ನು ಹೊರಗೆ ಎಳೆದು ಹಾಕಬಹುದು, ಆದರೆ ಸತ್ಯ ದೂರವಾಗುವುದಿಲ್ಲ. ಪಶ್ಚಿಮಬಂಗಾಳಕ್ಕೆ ಸೇರಿದ ಸಾವಿರಾರು ಕೋಟಿ ರೂ. ಎಂನರೇಗಾ ಅನುದಾನವನ್ನು ನೀವು ಕಾನೂನುಬಾಹಿರವಾಗಿ ತಡೆಹಿಡಿದಿದ್ದೀರಿ ಎಂದರು. ಜತೆಗೆ, ನಿಮ್ಮನ್ನು 2024ರಲ್ಲಿ ‘ಇಂಡಿಯಾ’ ಹೊರಹಾಕಲಿದೆ ಎಂದೂ ಕೂಗಿದರು.