ರಾಜ್ಕೋಟ್: ಸ್ಥಳೀಯ ಸರ್ ಟಿ ಹಾಸ್ಪಿಟಲ್ನ ಡಾಕ್ಟರ್ಗಳಿಗೆ ಶುಕ್ರವಾರ ಬೆಳಗ್ಗೆ ಅತ್ಯಂತ ಕಠಿಣ ಸವಾಲನ್ನು ಎದುರಿಸಬೇಕಾದ ಪ್ರಸಂಗ ಬಂತು. ಒಂದು ವರ್ಷದ ಬಾಲಕಿಯ ತಲೆ ಕುಕ್ಕರ್ ಒಳಗೆ ಸಿಲುಕಿಕೊಂಡಿದ್ದು, ಯಾವುದೇ ಹಾನಿಯಾಗದಂತೆ ಕುಕ್ಕರನ್ನು ಬೇರ್ಪಡಿಸುವ ಸವಾಲದು. ಹೆಲ್ಮೆಟ್ನಂತೆ ಕುಕ್ಕರ್ ಆ ಪುಟ್ಟ ಬಾಲಕಿಯ ತಲೆಯನ್ನು ಗಟ್ಟಿಯಾಗಿ ಕಚ್ಚಿಕೊಂಡಿತ್ತು.
ಪ್ರಿಯಾನ್ಶಿ ವಾಲಾ ಎಂಬುದು ಆ ಪುಟಾಣಿಯ ಹೆಸರು. ಕುಕ್ಕರ್ ಹಿಡ್ಕೊಂಡು ಆಟ ಆಡ್ತಿರುವಾಗ ಅದು ತಲೆಮೇಲೆ ಕವುಚಿತ್ತು ಎಂಬುದು ಆಕೆಯ ಪಾಲಕರ ಹೇಳಿಕೆ. ತಲೆಗೆ ಏಟಾಗದಂತೆ ಆ ಕುಕ್ಕರನ್ನು ಬೇರ್ಪಡಿಸುವ ಸವಾಲು ಡಾಕ್ಟರ್ಗಳ ಹೆಗಲೇರಿತ್ತು. ಆದರೆ, ಆ ಕುಕ್ಕರನ್ನು ಆ ಪುಟ್ಟ ತಲೆಯಿಂದ ಬೇರ್ಪಡಿಸಿದ್ದು ಮಾತ್ರ ಪಾತ್ರೆ-ಪಗಡೆ ವ್ಯಾಪಾರಿ. ಅದೂ ಈ ಡಾಕ್ಟರ್ಗಳ ನಿಗಾದಲ್ಲಿ..!
ಇದನ್ನೂ ಓದಿ: ಕಥೆಯಲ್ಲ-ಜೀವನ: ಅನಾರೋಗ್ಯಪೀಡಿತ ಪೋಲಿಸಪ್ಪನ ನೋವಿನ ಕಥೆ-ವ್ಯಥೆ
ಸರ್ ಟಿ ಹಾಸ್ಪಿಟಲ್ ಆಡಳಿತಾಧಿಕಾರಿ ಹಾರ್ದಿಕ್ ಗಠಾಣಿ ಈ ಕುರಿತು ಪ್ರತಿಕ್ರಿಯಿಸಿದ್ದು, ಮಗುವಿನ ತಲೆಯಿಂದ ಕುಕ್ಕರ್ ಬೇರ್ಪಡಿಸಲು ನಾವು ಸ್ಥಳೀಯ ಪಾತ್ರೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾತನನ್ನುಕರೆಯಿಸಿಕೊಂಡೆವು. ಆತ ಕಟ್ಟರ್ ತೆಗೆದುಕೊಂಡು ಬಂದಿದ್ದ. ನಿಧಾನವಾಗಿ ಜಾಗರೂಕತೆಯಿಂದ ಆತ ಅದನ್ನು ಮಗುವಿನ ತಲೆಯಿಂದ ಬೇರ್ಪಡಿಸಿದ. ಆದಾಗ್ಯೂ, ಹಣೆಯ ಭಾಗದಲ್ಲಿ ತರಚು ಗಾಯಗಳಾದವು. ಅದಕ್ಕೆ ನಾವು ಚಿಕಿತ್ಸೆ ನೀಡಿದ್ವಿ. ಉಳಿದಂತೆ ಯಾವುದೇ ತೊಂದರೆ ಇಲ್ಲ. ಆಕೆಯ ಆರೋಗ್ಯಸ್ಥಿತಿ ನೋಡಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡ್ತೇವೆ ಎಂದಿದ್ದಾರೆ. (ಏಜೆನ್ಸೀಸ್)