ಬೆಂಗಳೂರು: ಮಂಗಳೂರಿನ ಕಂಕನಾಡಿ ಬಳಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಶಾರೀಕ್ ಆರೋಗ್ಯ ಸ್ಥಿತಿ ಸುಧಾರಣೆಗೊಂಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆತನನ್ನು ವಶಕ್ಕೆ ಪಡೆಯಲು ಮುಂದಾಗಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಮಂಗಳೂರಿನ ಕಂಕನಾಡಿ ಬಳಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಶಾರೀಕ್ ಗಂಭೀರವಾಗಿ ಗಾಯಗೊಂಡಿದ್ದ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶಂಕಿತ ಉಗ್ರ ಶಾರೀಕ್ಗೆ ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೇ.25ರಷ್ಟು ಈತನ ದೇಹದ ಅಂಗಾಂಗಗಳು ಸುಟ್ಟು ಹೋಗಿದ್ದವು. ಮುಖ ಮತ್ತು ಬಲಗೈಗೆ ಹೆಚ್ಚಿನ ಗಾಯವಾಗಿತ್ತು. ಇದೀಗ ದಿನ ಕಳೆದಂತೆ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ಆತನನ್ನು ವಶಕ್ಕೆ ಪಡೆಯಲು ಎನ್ಐಎ ಸಜ್ಜಾಗಿದೆ.
ಕಳೆದ ಒಂದು ತಿಂಗಳಿನಿಂದ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ಚಿಕಿತ್ಸಾ ವಿಭಾಗದ ವಿಶೇಷ ವಾರ್ಡ್ನಲ್ಲಿರುವ ಶಾರೀಕ್ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿರುವುದರಿಂದ ಯಾವುದೇ ಸಂದರ್ಭದಲ್ಲಿ ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
24 ವರ್ಷದ ಈತ ಈಗಾಗಲೇ ಮೂರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದು, ಈಗ ಮಂಗಳೂರು ಸ್ಫೋಟ ಪ್ರಕರಣದಲ್ಲೂ ಎ1 ಆರೋಪಿಯಾಗಿದ್ದಾನೆ. ಈತ ಐಸಿಸ್ ಸೇರುವ ಉದ್ದೇಶ ಹೊಂದಿದ್ದ. ಇದರ ಭಾಗವಾಗಿ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದ. ಕರ್ನಾಟಕ ಮಾತ್ರವಲ್ಲದೆ, ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲೂ ಈತ ಸಂಚರಿಸಿದ್ದ ಮಾಹಿತಿಯನ್ನು ಈಗಾಗಲೇ ಎನ್ಐಎ ತನಿಖಾ ತಂಡ ಕಲೆ ಹಾಕಿದೆ.
ಮುಂದಿನ ವಾರ ಡಿಸ್ಚಾರ್ಜ್!: ಸದ್ಯ ಈತ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಎನ್ಐಎ ಅಧಿಕಾರಿಗಳ ತಂಡ ಆತನನ್ನು ವಶಕ್ಕೆ ಪಡೆಯಲಿದ್ದು, ಪ್ರಕರಣ ಸಂಬಂಧ ತೀವ್ರ ತನಿಖೆಗೆ ಒಳಪಡಿಸಲಿದೆ. ಈಗಾಗಲೇ ಚಿಕಿತ್ಸೆಯ ಜತೆ ಜತೆಗೆ ಕೆಲವೊಂದು ವಿಚಾರಣೆ ನಡೆಸಿರುವ ಎನ್ಐಎ ಅಧಿಕಾರಿಗಳ ತಂಡ ಮುಂದಿನ ವಾರವೇ ಶಾರೀಕ್ನನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ವಶಕ್ಕೆ ಪಡೆಯಲಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ನ.19ರಂದು ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದ್ದ ಸ್ಫೋಟದ ಸ್ಥಳದಲ್ಲಿ 5 ಲೀಟರ್ ಕುಕ್ಕರ್, 9 ವೋಲ್ಟ್ನ 3 ಬ್ಯಾಟರಿಗಳು, ಡ್ಯಾಮೇಜ್ಡ್ ಸರ್ಕಿಟ್ ಸೇರಿ ಎಲೆಕ್ಟ್ರಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ದೊಡ್ಡ ಪ್ರಮಾಣದ ಸಂಚು ರೂಪಿಸಿರುವುದು ಬಯಲಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಶಾರೀಕ್ನನ್ನು ಡಿ.16ರಂದು ರಾತ್ರಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕರೆತಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ.19ರಂದು ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯುತ್ತಿದ್ದಾಗ ಸ್ಫೋಟಗೊಂಡಿತ್ತು. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರ ಮಾಡಲಾಗಿತ್ತು.
ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್ಗಳೂ ಕ್ಲೋಸ್; ಎಲ್ಲಿ, ಯಾಕೆ?