ಒಂದೆರೆಡು ತಿಂಗಳ ಹಿಂದೆ ಆಂಧ್ರದಲ್ಲಿ ನಡೆದ ಘಟನೆಯೊಂದು ನೆನಪಿರಬಹುದು. ನಾಗೇಶ್ ಎಂಬ ಟೀಸ್ಟಾಲ್ ವ್ಯಾಪಾರಿಯು, ಕರೊನಾ ಮತ್ತು ಲಾಕ್ಡೌನ್ನಿಂದ ಅಂಗಡಿ ಮುಚ್ಚಬೇಕಾಯಿತು. ಮತ್ತೆ ಕೃಷಿಗೆ ಮರಳಿದ ಅವರ ಬಳಿ ಎತ್ತುಗಳಿರಲಿಲ್ಲ. ಈ ಸಂದರ್ಭದಲ್ಲಿ ಅವರ ಮಕ್ಕಳೇ ನೊಗ ಹೊತ್ತಿದ್ದರು. ಈ ವಿಡಿಯೋ ವೈರಲ್ ಆಗಿ ನಟ ಸೋನು ಸೂದ್, ನಾಗೇಶ್ ಕುಟುಂಬಕ್ಕೆ ಒಂದು ಟ್ರಾಕ್ಟರ್ ಗಿಫ್ಟ್ ಆಗಿ ಕೊಟ್ಟಿದ್ದರು.
ಈಗ ಈ ಕಥೆ, ಒಂದು ಕಿರುಚಿತ್ರವಾಗಿದೆ. ಲಾಕ್ಡೌನ್ ಸಮಯದಲ್ಲಿ ಸತತವಾಗಿ ಕಿರುಚಿತ್ರಗಳನ್ನು ಮಾಡುತ್ತಲೇ ಬಂದಿರುವ ನಟ-ನಿರ್ದೇಶಕ ಯತಿರಾಜ್, ಈಗ ಈ ಘಟನೆಯನ್ನಿಟ್ಟುಕೊಂಡು ‘ದೇವದೂತ’ ಎಂಬ ಕಿರುಚಿತ್ರ ಮಾಡಿದ್ದಾರೆ. ಕರೊನಾ ಸಂಕಷ್ಟದಲ್ಲಿ ಸೋನು ಹೇಗೆ ದೇವದೂತನಾಗಿ ಬಂದು ಹಲವರಿಗೆ ಸಹಾಯ ಮಾಡಿದರು ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ‘ನಶೆ’ಯ ನಗ್ನ ಸತ್ಯ; ವಕೀಲರ ಮೊರೆ ಹೋದ ನಟಿ ಸಂಜನಾ ಗಲ್ರಾನಿ
ಈ ಹಿಂದೆ ಅವರ ‘ಕರೊನಾ ಕಾಣಿಕೆ’ ಎಂಬ ಕಿರುಚಿತ್ರವು, ಕರೊನಾ ಬಿಚ್ಚಿಟ್ಟಿರುವ ಕರಾಳ ಮುಖವನ್ನು ತೋರಿಸಿತ್ತು. ಈಗ ಏಳು ನಿಮಿಷದ ಈ ಕಿರುಚಿತ್ರದ ಮೂಲಕ ಕರೊನಾ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯಹಸ್ತ ಚಾಚಿರುವ ನಟ ಸೋನು ಸೂದ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಯತಿರಾಜ್, ‘ಲಾಕ್ಡೌನ್ ಸಂದರ್ಭದಲ್ಲಿ ಸೋನು ಸೂದ್ ಅಷ್ಟೆಲ್ಲಾ ಮಾಡಿದರು. ನಾನು ಅವರಿಗೆ ಈ ಕಿರುಚಿತ್ರ ಮೂಲಕ ಥ್ಯಾಂಕ್ಸ್ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಸೋನು ಮಾಡಿದ ಕೆಲಸಕ್ಕೆ ಚಿತ್ರರಂಗಿಂದ ಯಾರೂ ಕೃತಜ್ಱತೆ ಸಲ್ಲಿಸಿರಲಿಲ್ಲ. ಕನ್ನಡದಲ್ಲಿ ನಾನು ಇಂಥದ್ದೊಂದು ಪ್ರಯತ್ನ ಮಾಡಿದ್ದೀನಿ ಎಂಬ ಸಂತೋಷವಿದೆ’ ಎನ್ನುತ್ತಾರೆ ಅವರು.
ಇದನ್ನೂ ಓದಿ: ಗಾಂಜಾ ಇಲ್ಲದಿದ್ರೆ ನಿದ್ರೆ ಬರುತ್ತಿರಲಿಲ್ಲವಾ ರಾಗಿಣಿಗೆ?
ಈ ಚಿತ್ರದ ಮೂಲಕ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿರುವ ಯತಿರಾಜ್, ಸಾವನದುರ್ಗ ಸುತ್ತಮುತ್ತ ಈ ಕಿರುಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುವುದರ ಜತೆಗೆ, ಪ್ರಮುಖ ಪಾತ್ರವನ್ನೂ ಮಾಡಿದ್ದಾರೆ. ಇದಲ್ಲದೆ ಚಂದನ, ಯಶಿತಾ, ನಮಿತಾ, ಭಗತ್ ಸಿಂಗ್, ಚಂದ್ರಶೇಖರ್ ಮುಂತಾದವರು ನಟಿಸಿದ್ದಾರೆ.
ಕನ್ನಡ ಮತ್ತು ಹಿಂದಿಯಲ್ಲಿರುವ ಈ ಕಿರುಚಿತ್ರವು, ಶುಕ್ರವಾರ ಸಂಜೆ ಬಿಡುಗಡೆಯಾಗಿದ್ದು, ಯೂಟ್ಯೂಬ್ನ ಕಲಾವಿಧ ಚಾನಲ್ನಲ್ಲಿದೆ.