ಮುಂಬೈ: ‘ಕೆಜಿಎಫ್ 2’ ಚಿತ್ರ ಬಿಡುಗಡೆ ಆದಾಗಿನಿಂದ ಯಶ್ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಆದರೆ, ಸದ್ಯಕ್ಕೆ ಉತ್ತರ ಮಾತ್ರ ಸಿಗುತ್ತಿಲ್ಲ. ಈಗಾಗಲೇ ಶಂಕರ್, ಬೋಯಪಾಟಿ ಶ್ರೀನು, ನರ್ತನ್ ಸೇರಿದಂತೆ ಕೆಲವು ದಕ್ಷಿಣದ ಜನಪ್ರಿಯ ನಿರ್ದೇಶಕರು ಯಶ್ ಜತೆಗೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬಂದಿತ್ತು. ಈಗ ಬಾಲಿವುಡ್ ಚಿತ್ರಗಳಲ್ಲಿ ಯಶ್ ಹೆಸರು ಕೇಳಿಬರುತ್ತಿವೆ.
ಇದನ್ನೂ ಓದಿ: ರಾಜ್ಯಾದ್ಯಂತ ‘ಗಂಧದಗುಡಿ’ ಅದ್ಧೂರಿ ಬಿಡುಗಡೆ: ಬೆಳ್ಳಿಪರದೆಯಲ್ಲಿ ಅಪ್ಪು ನೋಡಿ ಭಾವುಕರಾದ ಅಭಿಮಾನಿಗಳು
ಹೌದು, ಬಾಲಿವುಡ್ನ ಎರಡು ಚಿತ್ರತಂಡಗಳಿಂದ ಯಶ್ಗೆ ಆಫರ್ ಹೋಗಿದ್ದು, ಈ ಪೈಕಿ ಯಶ್ ಯಾವ ಚಿತ್ರವನ್ನು ಒಪ್ಪುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಈ ಪೈಕಿ ಮೊದಲನೆಯದು ‘ಬ್ರಹ್ಮಾಸ್ತ್ರ 2’. ಈಗಾಗಲೇ ‘ಬ್ರಹ್ಮಾಸ್ತ್ರ’ ಚಿತ್ರವು ಬಿಡುಗಡೆಯಾಗಿ ಯಶಸ್ವಿಯಾಗಿದ್ದು, ಮುಂದಿನ ವರ್ಷ ಅದರ ಮುಂದುವರೆದ ಭಾಗ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿನ ದೇವ್ ಎಂಬ ಪಾತ್ರಕ್ಕೆ ಯಶ್ಗೆ ಆಫರ್ ನೀಡಲಾಗಿದೆಯಂತೆ.
ಇದಲ್ಲದೆ ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ‘ಕರ್ಣ’ ಚಿತ್ರದಲ್ಲೂ ಯಶ್ಗೆ ಆಫರ್ ನೀಡಲಾಗಿದೆಯಂತೆ. ಮಹಾಭಾರತವನ್ನಾಧರಿಸಿದ ಈ ಚಿತ್ರವನ್ನು ಎಕ್ಸೆಲ್ ಎಂಟರ್ಟೈನ್ಮೆಂಟ್ನವರು ನಿರ್ಮಿಸುತ್ತಿದ್ದು, ಕರ್ಣನ ಪಾತ್ರ ಯಶ್ ಮಾಡಿದರೆ ಚೆನ್ನ ಎಂದು ಚಿತ್ರತಂಡದವರಿಗೆ ಅನಿಸಿದೆ. ಈ ನಿಟ್ಟಿನಲ್ಲಿ ಆಫರ್ ನೀಡಲಾಗಿದೆಯಂತೆ.
ಇದನ್ನೂ ಓದಿ: ನಾನು ಬಡವ ಅಲ್ಲ ಶ್ರೀಮಂತ; ಹಾಗಂತ ಧನಂಜಯ್ ಹೇಳಿದ್ದೇಕೆ?
ಈ ಎರಡೂ ಚಿತ್ರಗಳೂ ಅತ್ಯಂತ ದೊಡ್ಡ ಬಜೆಟ್ನ ಚಿತ್ರಗಳಾಗಿದ್ದು, ಪುರಾಣವನ್ನಾಧರಿಸಿದ ಚಿತ್ರಗಳಾಗಿವೆ. ಈಗಾಗಲೇ ಎರಡೂ ತಂಡದವರು ಯಶ್ ಅವರನ್ನು ಸಂಪರ್ಕಿಸಿದ್ದಾರಂತೆ. ಆದರೆ, ಯಶ್ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲವಂತೆ. ‘ಕೆಜಿಎಫ್ 2’ ನಂತರ ತಾವು ಅಭಿನಯಿಸುವ ಮುಂದಿನ ಚಿತ್ರವು ತಮ್ಮನ್ನು ಇನ್ನಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಪ್ರತಿ ಅವಕಾಶವನ್ನೂ ಅಳೆದು ತೂಗಿ ನೋಡುತ್ತಿದ್ದಾರಂತೆ ಯಶ್. ಹಾಗಾಗಿ, ‘ಕೆಜಿಎಫ್ 2’ ಬಿಡುಗಡೆಯಾಗಿ ಆರು ತಿಂಗಳ ನಂತರವೂ ಅವರು ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಲ್ಲ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಯಶ್ ಹೊಸ ಚಿತ್ರವನ್ನು ಘೋಷಿಸಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.