ನವದೆಹಲಿ: ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಎದುರಾಳಿ ತಂಡವನ್ನು ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ಸುಲಭವಾಗಿ ಮಣಿಸಿ ಅಜೇಯ ಓಟವನ್ನು ಮುಂದುವರಿಸಿದೆ. ಇದುವರೆಗೂ 8 ಪಂದ್ಯಗಳನ್ನು ಆಡಿದ್ದು, ಯಾವೊಂದು ಪಂದ್ಯದಲ್ಲೂ ಭಾರತಕ್ಕೆ ಯಾರೂ ಸಹ ಪ್ರಬಲ ಪೈಪೋಟಿ ನೀಡಲೇ ಇಲ್ಲ. ಕ್ರಿಕೆಟ್ ಜಗತ್ತಿನ ಸುಲ್ತಾನನಂತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಈ ಬಾರಿ ವಿಶ್ವಕಪ್ ಎತ್ತಿಹಿಡಿಯುವ ಎಲ್ಲರ ನೆಚ್ಚಿನ ತಂಡವಾಗಿದೆ.
ಭಾರತದ ಈ ಅಮೋಘ ಪ್ರದರ್ಶನ ಅಥವಾ ಯಶಸ್ಸಿನ ಹಿಂದಿರುವ ರಹಸ್ಯ ಏನು ಎಂಬುದನ್ನು ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಇದೀಗ ಬಹಿರಂಗಪಡಿಸಿದ್ದಾರೆ. ಸಿರಾಜ್ ಪ್ರಕಾರ ಭಾರತ ತಂಡದ ಒಗ್ಗಟ್ಟು ತುಂಬಾ ವಿಶೇಷವಂತೆ ಮತ್ತು ಪ್ರತಿಯೊಬ್ಬರು ಕೂಡ ಕುಟುಂಬದ ಸದಸ್ಯರಂತೆ ಪರಸ್ಪರ ನೋಡಿಕೊಳ್ಳುವುದೇ ನಮ್ಮ ಯಶಸ್ಸಿನ ಹಿಂದಿರುವ ರಹಸ್ಯವೆಂದು ಹೇಳಿದ್ದಾರೆ.
ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ತಂಡದ ನಿರ್ವಾಹಕರು, ಪ್ರತಿಯೊಬ್ಬ ಆಟಗಾರರಿಗಗೂ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಈ ಕ್ಷಣದಲ್ಲಿ ನೀವು ತಂಡದ ವಾತಾವರಣವನ್ನು ನೋಡುವುದಾದರೆ, ಪ್ರತಿಯೊಬ್ಬರು ಕೂಡ ಪರಸ್ಪರ ಭೇಟಿಯಾಗುತ್ತಾರೆ ಮತ್ತು ಮಾತನಾಡುತ್ತಿದ್ದಾರೆ. ಡ್ರೆಸ್ಸಿಂಗ್ ರೂಮ್ ಒಳಗೆ ಒಂದು ಬಲವಾದ ಒಗ್ಗಟ್ಟು ಇದೆ. ಹೇಳಬೇಕೆಂದರೆ, ಭಾರತ ತಂಡ ಒಂದು ಕುಟುಂಬವಿದ್ದಂತೆ ಎಂದು ಸ್ಟಾರ್ ಸ್ಪೋರ್ಟ್ಸ್ ಮಾಧ್ಯಮ ಸಂದರ್ಶನದಲ್ಲಿ ಸಿರಾಜ್ ಹೇಳಿದ್ದಾರೆ.
ನಮ್ಮೆಲ್ಲರ ಗುರಿ ಒಂದೇ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಭಾರತಕ್ಕಾಗಿ ವಿಶ್ವಕಪ್ ಟ್ರೋಫಿ ಗೆಲ್ಲಬೇಕು. ಟೀಮ್ ಮ್ಯಾನೇಜ್ಮೆಂಟ್ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪಡೆಯುತ್ತಿದೆ ಮತ್ತು ಪ್ರತಿಯೊಬ್ಬ ಆಟಗಾರನಿಗೂ ಸರಿಯಾದ ಪ್ರಾಮುಖ್ಯತೆಯನ್ನು ನೀಡುತ್ತಿದೆ. ನಾವು ಅದೇ ವಾತಾವರಣವನ್ನು ಉಳಿಸಿಕೊಂಡರೆ, ನಾವು ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಕನಸನ್ನು ಸುಲಭವಾಗಿ ನನಸಾಗಿಸಿಕೊಳ್ಳುತ್ತೇವೆ ಎಂಬುದು ನಮಗೆ ತಿಳಿದಿದೆ ಎಂದು ಸಿರಾಜ್ ತಿಳಿಸಿದ್ದಾರೆ.
ಸಿರಾಜ್ ಹೇಳಿದ ಮಾತುಗಳನ್ನು ಅಕ್ಷರಶಃ ಸತ್ಯ ಎಂಬುದು ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ನೋಡಿದರೆ ಗೊತ್ತಾಗುತ್ತದೆ. ಒಂದೂ ಪಂದ್ಯವನ್ನು ಸೋಲದೆ ಸಮಿಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿರುವ ಭಾರತ, ನ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ತಂಡದ ಜತೆಗೆ ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಒಂದೂ ಪಂದ್ಯವನ್ನು ಸೋಲದೆ ಭಾರತ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆ ಇದೆ.
ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಅದ್ಭುತ ಫಾರ್ಮ್ನಲ್ಲಿದೆ. ಸ್ವತಃ ಸಿರಾಜ್ ಅವರು ಈ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಸಾಥ್ ನೀಡುತ್ತಿದ್ದು, ಪ್ರಸ್ತುತ ಭಾರತೀಯ ಬೌಲಿಂಗ್ ದಾಳಿಯನ್ನು ಅನೇಕರು ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಎಂದು ಕರೆಯುತ್ತಾರೆ.
ಸೆಮೀಸ್ನಲ್ಲಿ ಮುಖಾಮುಖಿಯಾಗುವ ತಂಡಗಳು
ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಮೀಸ್ ಪ್ರವೇಶ ಪಡೆದಿದ್ದು, ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್ನಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ನ.19ಕ್ಕೆ ವಿಶ್ವಕಪ್ ಹಬ್ಬಕ್ಕೆ ವಿದ್ಯುಕ್ತ ತೆರೆ
ಎರಡೂ ಸಮಿಫೈನಲ್ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್ ಟ್ರೋಫಿಯ ಜತೆಗೆ 4 ಮಿಲಿಯನ್ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್ ಅಪ್ ತಂಡಗಳು 2 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಹಾಗೂ ಲೀಗ್ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್)
ಪಾಕ್ ಮುಂದಿರೋದು ಅಂತಿಂಥ ಸವಾಲಲ್ಲ ತಿಪ್ಪರಲಾಗ ಹಾಕಿದ್ರೂ ಆಗಲ್ಲ! ಈ ನಾಲ್ವರ ನಡುವೆ ಸೆಮೀಸ್ ಕದನ ಫಿಕ್ಸ್
ಲಂಕಾ ವಿರುದ್ಧ ಭರ್ಜರಿ ಗೆಲುವು: ಕಿವೀಸ್ ಪಡೆಯ ಸಮೀಸ್ ಸ್ಥಾನ ಬಹುತೇಕ ಖಚಿತ, ಪಾಕ್ ಹಾದಿ ಮತ್ತಷ್ಟು ಕಠಿಣ
ಪಾಕಿಸ್ತಾನ ಸೆಮೀಸ್ ತಲುಪಲು ಸುಲಭ ಉಪಾಯ ಹೇಳಿಕೊಟ್ಟ ವಾಸಿಂ ಅಕ್ರಮ್; ವ್ಯಾಪಕ ಟೀಕೆಗೆ ಗುರಿ