ನವದೆಹಲಿ: ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಸೆಮೀಸ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯಗಳಿಸುವ ಅವಶ್ಯಕತೆ ಎದುರಾಗಿದೆ. ಇದರ ಮಧ್ಯೆಯೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕೋಚ್, ಮಾಜಿ ನಾಯಕ, ವೀಕ್ಷಕ ವಿವರಣೆಗಾರ ತಮ್ಮ ತಂಡಕ್ಕೆ ಉಪಾಯ ಒಂದನ್ನು ಹೇಳಿಕೊಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಪಾಕಿಸ್ತಾನಿ ಸುದ್ದಿ ಸಂಸ್ಥೆಯೊಂದರಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದ ಮಾಜಿ ಕ್ರಿಕೆಟಿಗನ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ನ್ಯಾಯವಾಗಿ ಗೆಲ್ಲಲಾಗದೇ ಈ ರೀತಿ ಮಾಡುವುದೊಂದೇ ಬಾಕಿ ಎಂದು ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.
ಶನಿವಾರ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿ ಜಯಗಳಿಸಬೇಕಿದೆ. ಒಂದು ವೇಳೆ ಹಾಗೆ ಆದಲ್ಲಿ ಪಾಕಿಸ್ತಾನದ ಪಾಲಿಗೆ ಕಮರಿ ಹೋಗಿರುವ ಸೆಮೀಸ್ ಆಸೆ ಸ್ವಲ್ಪ ಮಟ್ಟಿಗೆ ಚಿಗುರೊಡೆಯಲಿದೆ.
ಇದನ್ನೂ ಓದಿ: ಮಧ್ಯಪ್ರದೇಶ ಚುನಾವಣೆ; 75 ವರ್ಷಗಳಲ್ಲಿ ಬೇರೆಯವರು ಮಾಡದಿರುವುದನ್ನು ನಾವು ಮಾಡಿದ್ದೇವೆ: ಅರವಿಂದ್ ಕೇಜ್ರಿವಾಲ್
ಪಂದ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ತಂಡಕ್ಕೆ ಮಹತ್ವದ ಸಲಹೆ ಕೊಟ್ಟಿರುವ ವಾಸಿಂ ಅಕ್ರಮ್ ಪಾಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಪೇರಿಸಬೇಕು. ಆ ನಂತರ ಇಂಗ್ಲೆಂಡ್ ಸರದಿ ಬಂದಾಗ ಎದುರಾಳಿ ತಂಡದ ಆಟಗಾರರನ್ನು ಅವರ ಡ್ರೆಸ್ಸಿಂಗ್ ರೂಮಿನಲ್ಲಿ ಕೂಡಿ ಹಾಕಬೇಕು. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಟೈಮ್ಔಟ್ ನಿಯಮದ ಪ್ರಕಾರ ಪಾಕಿಸ್ತಾನ ತಂಡವು ಭರ್ಜರಿ ಜಯಗಳಿಸಲಿದೆ ಎಂದು ಸಲಹೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಇತ್ತ ವಾಸಿಂ ಅಕ್ರಮ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರನ್ನು ತೀವ್ರವಾಗಿ ಟೀಕಿಸಿರುವ ಕ್ರೀಡಾಭಿಮಾನಿಗಳು ನ್ಯಾಯವಾಗಿ ಆಟವಾಡಿ ಗೆಲ್ಲಲಾಗದೆ ಇರುವವರು ಈ ರೀತಿಯ ಉಪಯೋಗಕ್ಕೆ ಬಾರದೆ ಇರುವ ಕೆಲಸವನ್ನು ಮಾಡಲು ಸಾಧ್ಯ. ಪಾಕಿಸ್ತಾನದವರು ಬುದ್ದಿವಂತರಲ್ಲ ಎಂದು ಹೇಳಲು ಇದೊಂದು ನಿದರ್ಶನ ಸಾಕು ಎಂದು ಹಲವರು ಟೀಕಿಸಿದ್ದಾರೆ.
ಪಾಕಿಸ್ತಾನದವರು ಲಾಹೋರ್ ವಿಮಾನ ನಿಲ್ದಾಣಕ್ಕೆ ಸೆಮಿಫಿನಾಲೆ ಎಂದು ಹೆಸರಿಡುವ ಮೂಲಕ ಈಗಲೂ ಅವರು ಅಲ್ಲಿಗೆ ತಲುಪಬಹುದು. ಕ್ರಿಕೆಟ್ ವಿಚಾರಕ್ಕೆ ಬಂದರೆ ಪಾಕಿಸ್ತಾನದವರು ಈಗಲೂ ಏಕೆ ಕಳಪೆ ಎಂದು ಈ ವಿಡಿಯೋ ನೋಡಿದ ಮೇಲೆ ಗೊತ್ತಾಗುತ್ತಿದೆ ಎಂದು ಹಲವರು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ.