ಚೆನ್ನೈ: ಟೆಕ್ಕಿಯೊಬ್ಬಳು ತನ್ನ 26ನೇ ಜನ್ಮ ದಿನದಂದೇ ಸಹಪಾಠಿಯಿಂದ ಬರ್ಬರವಾಗಿ ಹತ್ಯೆಯಾಗಿರುವ ಆಘಾತಕಾರಿ ಘಟನೆ ಚೆನ್ನೈ ಹೊರವಲಯದ ಥಾಲಂಬೂರ್ನಲ್ಲಿ ಶನಿವಾರ ನಡೆದಿದೆ. ಕೊಲೆ ಮಾಡಿದ ಆರೋಪಿ, ಟೆಕ್ಕಿಯನ್ನು ಮದುವೆಯಾಗುವ ಆಸೆಯಿಂದ ಲಿಂಗ ಬದಲಾವಣೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಟೆಕ್ಕಿಯನ್ನು ಆರ್. ನಂದಿನಿ ಎಂದು ಗುರುತಿಸಲಾಗಿದೆ. ಎಂಬಿಎ ಪಧವೀದರ ವೆಟ್ರಿಮಾರನ್ ಎಂಬಾತನನ್ನು ಬಂಧಿಸಲಾಗಿದೆ. ಈತ ಲಿಂಗ ಬದಲಾವಣೆಗೂ ಮುನ್ನ ಪಾಂಡಿ ಮುರುಗೇಶ್ವರಿಯಾಗಿದ್ದಳು. ಇಬ್ಬರು ಮದುರೈನ ಬಾಲಕಿಯರ ಶಾಲೆಯಲ್ಲಿ ಒಟ್ಟಿಗೆ ಓದಿದ್ದರು. ಇವರಿಬ್ಬರೂ ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ ಸಂಸ್ಥೆಯಲ್ಲಿ ಒಟ್ಟಿಗೆ ಕೆಲಸ ಮಡುತ್ತಿದ್ದರು. ನಂದಿನಿಯನ್ನು ಪ್ರೀತಿಸುತ್ತಿದ್ದ ವೆಟ್ರಿಮಾರನ್, ಲಿಂಗ ಬದಲಾವಣೆಯ ನಂತರ ನಂದಿನಿ ಜತೆಗೆ ಸಂಬಂಧ ಹೊಂದಲು ಸಾಕಷ್ಟು ಬಾರಿ ಮನವೊಲಿಸಿದನು. ಆದರೆ, ನಂದಿನಿ ಅದನ್ನು ತಿರಸ್ಕರಿಸುತ್ತಾ ಬರುತ್ತಿದ್ದಳು. ಎಲ್ಲವೂ ತಿಳಿದಿದ್ದರಿಂದ ದೂರ ದೂರ ಇದ್ದರೂ ಇಬ್ಬರು ಸಂಪರ್ಕದಲ್ಲಿಯೇ ಇದ್ದರು.
ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಪದವಿ ಪಡೆದ ನಂದಿನಿಗೆ ಎಂಟು ತಿಂಗಳ ಹಿಂದಷ್ಟೇ ಚೆನ್ನೈನಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಅವಳು ತನ್ನ ಚಿಕ್ಕಪ್ಪನೊಂದಿಗೆ ಉಳಿದುಕೊಂಡಿದ್ದಳು. ಶನಿವಾರ, ವೆಟ್ರಿಮಾರನ್ ನಂದಿಗೆ ಕರೆ ಮಾಡಿ, ತನ್ನೊಂದಿಗೆ ಕೆಲ ಸಮಯ ಕಾಲ ಕಳೆಯುವಂತೆ ಕೇಳಿಕೊಂಡಿದ್ದ. ಹುಟ್ಟುಹಬ್ಬದಂದೇ ಹೊರಗಡೆ ಹೋಗುವ ಯೋಜನೆ ಸಹ ಹಾಕಿಕೊಂಡಿದ್ದ. ಇದಕ್ಕೆ ನಂದಿನಿ ಸಹ ಒಪ್ಪಿಗೆ ಸೂಚಿಸಿದ್ದಳು. ಬಳಿಕ ಇಬ್ಬರು ಭೇಟಿಯಾದರು.
ಭೇಟಿಯಾದ ಬಳಿಕ ಇಬ್ಬರು ಸಾಕಷ್ಟು ಸಮಯ ಮಾತನಾಡಿ, ಚೆನ್ನೈ ಬೀದಿಗಳಲ್ಲಿ ಕೆಲ ಕಾಲ ಓಡಾಡಿದರು. ಇದೇ ಸಂದರ್ಭದಲ್ಲಿ ವೆಟ್ರಿಮಾರನ್, ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಂದಿನಿಗೆ ಹೊಸ ಬಟ್ಟೆಗಳನ್ನು ಸಹ ಖರೀದಿಸಿದನು. ಬಳಿಕ ಮನೆಗೆ ಹಿಂದಿರುಗುವಾಗ ನಿರ್ಜನ ಸ್ಥಳದಲ್ಲಿ ಬೈಕ್ ನಿಲ್ಲಿಸಿ, ನಂತರ ನಂದಿನಿಯ ಕೈ ಮತ್ತು ಕಾಲುಗಳನ್ನು ಸರಪಳಿಯಿಂದ ಬಂಧಿಸಿದನು. ತಮಾಷೆಗೆ ಈ ರೀತಿ ಮಾಡುತ್ತಿದ್ದಾನೆ ಎಂದು ನಂದಿನಿ ಭಾವಿಸಿದ್ದಳು.
ಯಾವಾಗ ವೆಟ್ರಿಮಾರನ್ ಮಾತುಗಳು ಭಯ ಹುಟ್ಟಿಸಿತೋ ಆಗ ತನ್ನನ್ನು ಬಿಟ್ಟು ಬಿಡುವಂತೆ ನಂದಿನಿ ಕೇಳಿಕೊಂಡಿದ್ದಾಳೆ. ಆದರೆ, ಆಕೆಯನ್ನು ಬಿಡಲು ಒಪ್ಪದ ವೆಟ್ರಿಮಾರನ್, ಬ್ಲೇಡ್ನಿಂದ ಕುತ್ತಿಗೆ ಮತ್ತು ತೋಳುಗಳನ್ನು ಕೊಯ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಇದೀಗ ಚೆನ್ನೈ ವಾಸಿಗಳನ್ನು ಚಿಂತಿಸುವಂತೆ ಮಾಡಿದೆ. (ಏಜೆನ್ಸೀಸ್)
ಬಾಕ್ಸ್ಆಫೀಸ್ನಲ್ಲಿ ಸಲಾರ್ ಸುನಾಮಿ! ಮೂರೇ ದಿನಕ್ಕೆ ದಾಖಲೆ ಗಳಿಕೆ, ಡಂಕಿ ಹಿಂದಿಕ್ಕಿ ಸಲಾರ್ ದೋಚಿದ್ದೆಷ್ಟು?