More

    ಬಡವ-ಬಲ್ಲಿದರ ಅಂತರ ಹೆಚ್ಚಳ

    ನರಗುಂದ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ದೇಶದ ಜನರಿಗೆ ನೀಡಿದ ಯಾವುದೇ ವಚನ ಪಾಲನೆ ಮಾಡಿಲ್ಲ. ರೈತರ ಆದಾಯ ದ್ವಿಗುಣ ಸೇರಿದಂತೆ ಎಲ್ಲ ಆಶ್ವಾಸನೆಗಳು ಹುಸಿಯಾಗಿವೆ. ಆದರೆ ಶ್ರೀಮಂತರ ಆದಾಯ ಗಣನೀಯ ಏರಿಕೆಯಾಗಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಿದರು.

    ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ನರಗುಂದ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ಆರ್. ಯಾವಗಲ್ ರೈತರ ಆದಾಯ ದ್ವಿಗುಣದ ಮಾತು ಆಡಿದರು. ಆದರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ರೈತರು ಹೋರಾಟ ಮಾಡಿದರೆ ಚಳವಳಿ ಹತ್ತಿಕ್ಕುವ ಕೆಲಸ ಮಾಡಿದರು. ಯುವಕರಿಗೆ ಉದ್ಯೋಗ ಸೃಷ್ಟಿ ಆಸೆ ತೋರಿಸಿ ಮೋಸ ಮಾಡಿದರು ಎಂದು ಟೀಕಿಸಿದರು.

    ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ವಿಶ್ವ ಕಂಡ ದುರ್ಬಲ ಹಾಗೂ ಮಹಾನ್ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ ಎಂದು ಲೇವಡಿ ಮಾಡಿ, ಜನಜೀವನ ದುಸ್ತರವಾಗಿದೆ. ಇಂಧನ ಬೆಲೆ ಗಗನಮುಖಿಯಾಗಿದೆ. ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿರುವ ಮೋದಿ ಅವರು ಹತ್ತು ವರ್ಷಗಳಲ್ಲಿ ಹೇಳಿದ ಯಾವುದೇ ಮಾತಿನಂತೆ ನಡೆದುಕೊಂಡಿಲ್ಲ. ಸುಳ್ಳು ಹೇಳಿಕೊಂಡೇ ಹತ್ತು ವರ್ಷ ಅಧಿಕಾರ ನಡೆಸಿದರು ಎಂದರು.

    ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಕರೊನಾ ಕಾಲದಲ್ಲಿ ಮೋದಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಬದಲಿಗೆ ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು, ಮಾರುಕಟ್ಟೆ ದರದಲ್ಲಿ ತರಕಾರಿ ಖರೀದಿ ಮಾಡಿ, ಜನರಿಗೆ ಉಚಿತವಾಗಿ ವಿತರಣೆ ಮಾಡಿದೆವು. ಈ ಮೂಲಕ ರೈತರ ನೆರವಿಗೆ ಬಂದಿದ್ದೆವು ಎಂದು ನೆನಪಿಸಿಕೊಂಡರು.

    ಮಾಜಿ ಸಚಿವ ಆರ್.ಎಸ್. ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರತಿಪಕ್ಷಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ನಿರಂತರ ಪ್ರಯತ್ನ ಮಾಡಿದರು. ಸಿಬಿಐ, ಇಡಿ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರು. ಚುನಾವಣೆ ಸಮಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಜೈಲಿಗೆ ಹೋಗುವಂತೆ ಮಾಡಿದರು ಎಂದರು.

    ಕೆಪಿಸಿಸಿ ಉಪಾಧ್ಯಕ್ಷರಾದ ಅಜಯಕುಮಾರ ಸರನಾಯಕ, ಡಿ.ಆರ್. ಪಾಟೀಲ, ಶಾಸಕರಾದ ಜೆ.ಟಿ. ಪಾಟೀಲ, ಬಿ.ಬಿ. ಚಿಮ್ಮನಕಟ್ಟಿ, ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಸೌದಾಗಾರ್ ಮತ್ತಿತರರು ಮಾತನಾಡಿದರು.

    ರಾಜ್ಯದ ಅಭಿವೃದ್ಧಿಗೆ ಕೊಡುಗೆ ಶೂನ್ಯ

    ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದರೂ ಅವರಿಂದ ರಾಜ್ಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ. ದಿ. ಅನಂತಕುಮಾರ್ ಸೇರಿದಂತೆ ರಾಜ್ಯವನ್ನು ಪ್ರತಿನಿಧಿಸಿದ ಕೇಂದ್ರದ ಎಲ್ಲ ಸಚಿವರು ರಾಜ್ಯಕ್ಕೆ ವಂಚನೆ ಮಾಡಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ವಾಗ್ದಾಳಿ ಮಾಡಿದರು.
    ಪಿ.ಸಿ. ಗದ್ದಿಗೌಡರ್ ಸೇರಿದಂತೆ ರಾಜ್ಯದ ಎಲ್ಲ ಬಿಜೆಪಿ ಸಂಸದರು ರಾಜ್ಯದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ನೆರವಾಗಲು ಪರಿಹಾರ ಬಿಡುಗಡೆಗೂ ಪ್ರಧಾನಿಯನ್ನು ಒತ್ತಾಯಿಸಲಿಲ್ಲ ಎಂದು ಟೀಕಿಸಿದರು.

    2014ರಲ್ಲಿ ಗುಜರಾತ್ ಮಾದರಿಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ಆದರೆ ಅಭಿವೃದ್ಧಿಯಲ್ಲಿ ಇಂದು ಗುಜರಾತ್ ಕರ್ನಾಟಕಕ್ಕಿಂತ ಹಿಂದಿದೆ. ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

    ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇ ಸಾಧನೆ

    ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಅಂಬಾನಿ, ಅದಾನಿಯಂತಹ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೇ ಸಾಧನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಗೇಲಿ ಮಾಡಿದರು. ರೈತರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಎಂದು ಆಗ್ರಹಪಡಿಸಿ ಹೋರಾಟ ಮಾಡಿದರೆ ಅವರ ಮೇಲೆ ಗೋಲಿಬಾರ್ ಮಾಡಿಸಿ ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿದರು. ಕೃಷಿ ಸಾಲ ಮನ್ನಾ ಮಾಡಲಿಲ್ಲ. ಆದರೆ ಶ್ರೀಮಂತ ಉದ್ಯಮಿಗಳ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರು ಎಂದು ಟೀಕಿಸಿದರು.

    ನನಗೆ ಒಂದು ಅವಕಾಶ ಕೊಡಿ. ಕಳಸಾ ಬಂಡೂರಿ, ಮಹಾದಾಯಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆ. ನೀವು ಕಾಂಗ್ರೆಸ್‌ಗೆ ನೀಡುವ ಪ್ರತಿ ಮತವೂ ಕೂಡ ಭಾರತದ ಭವಿಷ್ಯ ನಿರ್ಮಾಣ ಮಾಡಲು ಸಹಾಯವಾಗಲಿದೆ. ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುವುದು ನಿಶ್ಚಿತ ಎಂದರು. ಕಾಂಗ್ರೆಸ್ ಸೇರಿದ ಆರ್‌ಎಸ್‌ಎಸ್ ಕಾರ್ಯಕರ್ತ ನಿಂಗಬಸಪ್ಪ ಬಾಣದ ಅವರು ಸಚಿವರು, ಶಾಸಕರು ಹಾಗೂ ಹಲವು ಮುಖಂಡರ ಸಮ್ಮುಖದಲ್ಲಿ ಗಣವೇಷಧಾರಿಯಾಗಿಯೇ ಆಗಮಿಸಿ ಕಾಂಗ್ರೆಸ್ ಸೇರ್ಪಡೆಯಾದರು. ನಾವು ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡಿಲ್ಲ. ಆದರೆ ಬಿಜೆಪಿ ಹಾದಿ ತಪ್ಪಿದ್ದು, ಭ್ರಷ್ಟಾಚಾರ ಮಿತಿಮೀರಿದೆ.

    ರಾಜ್ಯದಲ್ಲೂ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಭ್ರಷ್ಟಾಚಾರ ಮಾಡಲಾಗಿದೆ. 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಕೇಳಿಬಂದಿತ್ತು. ಆದರೆ ಇದು 40 ಪರ್ಸೆಂಟ್ಗಿಂತಲೂ ಅಧಿಕ ಎಂದು ಹೇಳಿದರು. ಇಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ ಫೋನ್ ಕರೆ ಬಂದಿವೆ. ಆದರೆ ಯಾವುದೇ ಕಾರಣಕ್ಕೆ ವಾಪಸ್ ಹೋಗಲ್ಲ ಎಂದರು.

    ಕನಸುಗಳನ್ನು ಮಾರಾಟ ಮಾಡುವುದು ಮೋದಿ ಅವರ ಕಲೆ. ಭಾವನಾತ್ಮಕ ವಿಚಾರಗಳ ಮೂಲಕವೇ ಇದುವರೆಗೆ ದೇಶದ ಜನರನ್ನು ಮರುಳು ಮಾಡಿ ಮತ ಪಡೆದರು. ಆದರೆ ಈ ಬಾರಿ ಅವರ ಆಟ ನಡೆಯುವುದಿಲ್ಲ.
    ಡಿ.ಆರ್. ಪಾಟೀಲ ಕೆಪಿಸಿಸಿ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts