ಮುಂಬೈ : ನಿನ್ನೆ ದಿನ ಮುಂಬೈನ ದಾದರ್ ಪ್ರದೇಶದಲ್ಲಿರುವ ‘ಸೇನಾ ಭವನ’ದ ಬಳಿ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಜಟಾಪಟಿಯ ನಂತರ ಶಿವಸೇನಾ ಕಾರ್ಯಕರ್ತರು ಗೂಂಡಾಗಿರಿ ಮಾಡಿದ್ದಾರೆ ಎಂದು ಬಿಜೆಪಿ ದೂಷಿಸಿದೆ. ಇದಕ್ಕೆ ಉತ್ತರ ನೀಡಿರುವ ಶಿವಸೇನಾ ನಾಯಕ ಸಂಜಯ್ ರಾವತ್, “ನಾವು ಗೂಂಡಾಗಳಾಗಿರುವ ಬಗ್ಗೆ ಯಾರೂ ನಮಗೆ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ, ನಾವು ಸರ್ಟಿಫೈಡ್” ಅಂದಿದ್ದಾರೆ.
“ಮರಾಠಿ ಹೆಮ್ಮೆ ಮತ್ತು ಹಿಂದುತ್ವದ ವಿಷಯಕ್ಕೆ ಬಂದಾಗ, ನಾವು ಸರ್ಟಿಫೈಡ್ ಗೂಂಡಾಗಳು” ಎಂದಿರುವ ರೌತ್, ಪಕ್ಷದ ಕಛೇರಿಯು ರಾಜ್ಯ ಮತ್ತು ಅದರ ಜನರ ಸಂಕೇತವಾಗಿದೆ ಎಂದಿದ್ದಾರೆ. “ಸೇನಾ ಭವನದಲ್ಲಿ ಬಾಲಾಸಾಹೇಬ್ ಠಾಕ್ರೆ ಅವರು ಕುಳಿತುಕೊಳ್ಳುತ್ತಿದ್ದರು. ಅದರತ್ತ ಯಾರಾದರೂ ದಾಳಿ ಮಾಡಿದರೆ ನಾವು ಉತ್ತರ ಕೊಡುತ್ತೇವೆ. ಅದನ್ನು ಗೂಂಡಾಗಿರಿ ಎಂದು ಕರೆದರೆ, ನಾವು ಗೂಂಡಾಗಳೇ” ಎಂದು ರಾವತ್ ಹೇಳಿದ್ದಾರೆ.
ಶಿವಸೇನಾದ ಮುಖವಾಣಿಯಾದ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ, ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಜಮೀನು ವ್ಯವಹಾರದ ವಿವಾದದ ಕುರಿತಾಗಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಕಟಿಸಿತ್ತು ಎಂದು ಬಿಜೆಪಿ ಯುವ ವಿಭಾಗವು ನಿನ್ನೆ ಮುಂಬೈನಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಆ ವೇಳೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಜಟಾಪಟಿಯಲ್ಲಿ ಸೇನಾ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸಿದರು. ಬಿಜೆಪಿಯ ಓರ್ವ ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ಮಾಡಿದರು ಎಂದು ಬಿಜೆಪಿ ಆರೋಪಿಸಿದೆ.
“ಮೊದಲು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಇಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ನಂತರದಲ್ಲಿ ಅವರು ಸೇನಾ ಭವನವನ್ನು ಧ್ವಂಸ ಮಾಡಲು ಬರುತ್ತಿದ್ದಾರೆ ಎಂದು ನಮಗೆ ತಿಳಿದುಬಂತು. ಆದ್ದರಿಂದ ಅವರು ಅದರ ಹತ್ತಿರ ತಲುಪುವ ಮುನ್ನ ನಾವು ಅವರನ್ನು ನಿಲ್ಲಿಸಿದ್ದೇವೆ” ಎಂದು ಸೇನಾ ಶಾಸಕ ಸದಾ ಸರ್ವಂಕರ್ ಹೇಳಿದ್ದಾರೆ.
ಇದನ್ನೂ ಓದಿ: ಗಡಿಯಲ್ಲಿ ಬಿಎಸ್ಎಫ್ ಯೋಧರ ಜತೆ ಹೆಜ್ಜೆ ಹಾಕಿದ ನಟ ಅಕ್ಷಯ್ ಕುಮಾರ್
“ಬಿಜೆಪಿ ಏಕೆ ಸಿಟ್ಟಾಗಿದೆ ? ಸಾಮ್ನಾ ಸಂಪಾದಕೀಯದಲ್ಲಿ ಅಯೋಧ್ಯೆಯಲ್ಲಿ ಜಮೀನಿನ ವಿಷಯವಾಗಿ ಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ಕೇಳಲಾಗಿದೆ ಅಷ್ಟೆ. ಆರೋಪಗಳು ಸುಳ್ಳಾದಲ್ಲಿ ಸುಳ್ಳು ಆರೋಪ ಹೊರಿಸಿರುವವರಿಗೆ ಶಿಕ್ಷೆಯಾಗಬೇಕು ಎಂದಿದೆ. ಎಲ್ಲಿಯೂ ಕೂಡ ಬಿಜೆಪಿ ಅದರಲ್ಲಿ ಶಾಮೀಲಾಗಿದೆ ಎಂದು ಹೇಳಿಲ್ಲ” ಎಂದು ಸಾಮ್ನಾದ ಸಂಪಾದಕರೂ ಆದ ಸಂಜಯ್ ರಾವತ್ ಹೇಳಿದ್ದಾರೆ. (ಏಜೆನ್ಸೀಸ್)
ಒಲಂಪಿಕ್ಸ್ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್ ಆಗಿ ರಾಣಿ ರಾಂಪಾಲ್