ಪಣಜಿ: ದೇಶದ ನಂಬರ್ ಒನ್ ಕಥೆಗಾರ ಎಂಬ ಹೆಗ್ಗಳಿಕೆ ಅವರಿಗಿದೆ. ಅದಕ್ಕೆ ಸರಿಯಾಗಿ ವಿಜಯೇಂದ್ರ ಪ್ರಸಾದ್ ಅವರು ಬರೆದಿರುವ ಚಿತ್ರಗಳು ಸೂಪರ್ ಹಿಟ್ ಆಗಿವೆ ‘ಬಾಹುಬಲಿ’, ‘ಆರ್.ಆರ್.ಆರ್’, ‘ಭಜರಂಗಿ ಭಾಯ್ಜಾನ್’, ‘ಮಗಧೀರ’ ಮುಂತಾದ ಚಿತ್ರಗಳು ಬ್ಲಾಕ್ಬಸ್ಟರ್ಗಳಾಗಿವೆ. ವಿಜಯೇಂದ್ರ ಪ್ರಸಾದ್ ಹೇಗೆ ಇಷ್ಟು ಅದ್ಭುತವಾದ ಕಥೆಗಳನ್ನು ರಚಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ವಿಜಯೇಂದ್ರ ಪ್ರಸಾದ್ ಮಾತ್ರ, ತಾನು ಕಥೆ ಬರೆಯುವುದಿಲ್ಲ, ಕದಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತಾನೂ ಅತ್ತು, ಅಪ್ಪ-ಅಮ್ಮನಿಗೂ ಕಣ್ಣೀರು ಹಾಕಿಸಿದ ರಣವೀರ್ ಸಿಂಗ್
ಪಣಜಿಯಲ್ಲಿ 53ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯುತ್ತಿರುವ ವಿಷಯ ಗೊತ್ತೇ ಇದೆ. ಈ ಸಂದರ್ಭದಲ್ಲಿ ‘ದಿ ಮಾಸ್ಟರ್ಸ್ ರೈಟಿಂಗ್ ಪ್ರೊಸೆಸ್’ ಎಂಬ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯೇಂದ್ರ ಪ್ರಸಾದ್ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಬರವಣಿಗೆಯ ಶೈಲಿ ಕುರಿತು ಮಾತನಾಡಿರುವ ಅವರು, ‘ನಾನು ಮೊದಲಿಗೆ ಇಂಟರ್ವೆಲ್ಗೆ ಏನು ಟ್ವಿಸ್ಟ್ ಕೊಡಬಹುದು ಎಂದು ಯೋಚಿಸುತ್ತೇನೆ. ಅದಕ್ಕೆ ಸರಿಯಾಗಿ ಕಥೆ ಬರೆಯುತ್ತಾ ಹೋಗುತ್ತೇನೆ. ನಿಜ ಹೇಳಬೇಕೆಂದರೆ, ಸೊನ್ನೆಯಿಂದ ಸೃಷ್ಟಿ ಮಾಡಬೇಕು. ಸುಳ್ಳಾದರೂ, ಅದನ್ನು ನಂಬುವಂತೆ ಬರೆಯಬೇಕು. ಯಾರಿಗೆ ಚೆನ್ನಾಗಿ ಸುಳ್ಳು ಹೇಳುವುದಕ್ಕೆ ಬರುತ್ತದೋ, ಅವನೊಬ್ಬ ಒಳ್ಳೆಯ ಕಥೆಗಾರನಾಗಿರುತ್ತಾನೆ’ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗ್ತಾರಾ ಮಾನುಷಿ ಛಿಲ್ಲರ್?
ಇನ್ನು, ಕಥೆಗಳ ಬಗ್ಗೆ ಮಾತನಾಡುವ ಅವರು, ‘ಒಳ್ಳೆಯ ಕಥೆಗಳು ಹೇಗೆ ಹುಟ್ಟುತ್ತವೆ ಎಂದು ಎಲ್ಲರೂ ಕೇಳುತ್ತಾರೆ. ಕಥೆಗಳು ಹುಟ್ಟುವುದಿಲ್ಲ. ಅದನ್ನು ಕದಿಯುತ್ತೇನೆ. ನಮ್ಮ ಸುತ್ತ ನೂರಾರು ಕಥೆಗಳಿವೆ. ಮಹಾಭಾರತ, ರಾಮಾಯಣದಂತಹ ಮಹಾನ್ ಗ್ರಂಥಗಳ ಜತೆಗೆ ಅದೆಷ್ಟೋ ನೈಜ ಘಟನೆಗಳಿವೆ. ಅವನ್ನೆಲ್ಲ ನಿಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರೆಸೆಂಟ್ ಮಾಡುವ ಕಲೆ ಗೊತ್ತಿರಬೇಕು. ಅದು ಗೊತ್ತಿದ್ದರೆ, ಏನು ಬೇಕಾದರೂ ಮಾಡಬಹುದು’ ಎನ್ನುತ್ತಾರೆ ವಿಜಯೇಂದ್ರ ಪ್ರಸಾದ್.