ಹೈದರಾಬಾದ್: ಪ್ರತಿಷ್ಠಿತ ಯುಪಿಎಸ್ಸಿ ಸಿವಿಲ್ಸ್ ಅಂತಿಮ ಫಲಿತಾಂಶ ನಿನ್ನೆ (ಏಪ್ರಿಲ್ 16) ಪ್ರಕಟವಾಗಿದೆ. ಈ ಪರೀಕ್ಷೆಗಳಲ್ಲಿ ತೆಲುಗು ರಾಜ್ಯಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಎರಡು ತೆಲುಗು ರಾಜ್ಯಗಳಿಂದ ಸುಮಾರು 60 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಮೆಹಬೂಬ್ನಗರದ ಅನನ್ಯಾ ರೆಡ್ಡಿ ಮೊದಲ ಪ್ರಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಈ ಹಿನ್ನೆಲೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಈ ಪರೀಕ್ಷೆಗಳಲ್ಲಿ, ಬಡ ಕುಟುಂಬದ ಅನೇಕ ಜನರು ತಮ್ಮ ಪ್ರತಿಭೆಯಿಂದ ರ್ಯಾಂಕ್ ಪಡೆದಿದ್ದಾರೆ. ಸಾಧಿಸುವ ಮನೋಭಾವವಿದ್ದರೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
ಕರೀಂನಗರದ ಬೀಡಿ ಕಾರ್ಮಿಕನ ಮಗ ಯುಪಿಎಸ್ಸಿಯಲ್ಲಿ 27ನೇ ರ್ಯಾಂಕ್ ಪಡೆಯುವ ಮೂಲಕ ಬಡತನವನ್ನು ಮೆಟ್ಟಿ ನಿಂತಿದ್ದಾರೆ. ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದ ವೆಲಿಚಲ ಗ್ರಾಮದ ಬಡ ಕುಟುಂಬಕ್ಕೆ ಸೇರಿದವರು ಕಾಂತ ರಾವ್ ಮತ್ತು ಲಕ್ಷ್ಮಿ ದಂಪತಿ. ಈ ದಂಪತಿಗೆ ಸಾಯಿಕಿರಣ್ ಮತ್ತು ಶ್ರವಂತಿ ಎಂಬ ಇಬ್ಬರು ಮಕ್ಕಳಿದ್ದಾರೆ. 2016ರಲ್ಲಿ ಕಾಂತರಾವ್ ನಿಧನರಾದಾಗ ಇಡೀ ಕುಟುಂಬದ ಜವಾಬ್ದಾರಿ ಲಕ್ಷ್ಮಿ ಅವರ ಮೇಲೆ ಬಿತ್ತು. ತನ್ನಿಬ್ಬರು ಮಕ್ಕಳನ್ನು ಬೀಡಿ ಕಟ್ಟುವ ಕೆಲಸ ಸಾಕಿ ಸಲುಹಿ, ಒಳ್ಳೆಯ ಶಿಕ್ಷಣ ಸಹ ಕೊಡಿಸಿದರು. ಅಮ್ಮನ ಜೀವನ ಹೋರಾಟಕ್ಕೆ ಮನಸೋತ ಸಾಯಿಕಿರಣ್ ಮತ್ತು ಶ್ರವಂತಿ ಕಷ್ಟಪಟ್ಟು ಓದಿದರು. ಶ್ರವಂತಿಗೆ ಎಇ ಕೆಲಸ ಸಿಕ್ಕಿದ್ದು, ಬೋಯಿನಪಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಸಹೋದರ ಸಾಯಿಕಿರಣ್ ತನ್ನ ಅಕ್ಕನ ಸ್ಫೂರ್ತಿಯಿಂದ ಸಿವಿಲ್ಸ್ಗೆ ತಯಾರಿ ನಡೆಸುತ್ತಿದ್ದನು. ಕಷ್ಟಪಟ್ಟು ಓದಿ, ಇತ್ತೀಚೆಗೆ ಪ್ರಕಟವಾದ ಸಿವಿಲ್ಸ್ ಫಲಿತಾಂಶದಲ್ಲಿ 27 ನೇ ರ್ಯಾಂಕ್ ಗಳಿಸಿದ್ದಾರೆ.
ಸಾಯಿಕಿರಣ್ 5ನೇ ತರಗತಿಯವರೆಗೆ ವೆಳಿಚಾಲ್ನ ಪ್ರಾಥಮಿಕ ಶಾಲೆಯಲ್ಲಿ ಮತ್ತು ಪಿಯುಸಿಯನ್ನು ಕರೀಂನಗರದಲ್ಲಿ ಓದಿದರು. 2012ರಲ್ಲಿ 9.8 ಜಿಪಿಎಯೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾದರು. ಪಿಯುಸಿಯಲ್ಲಿ ಶೇ.98 ಅಂಕ ಗಳಿಸಿದ್ದಾರೆ. ಆ ನಂತರ ವಾರಂಗಲ್ ಎನ್ಐಟಿಯಲ್ಲಿ ಬಿಟೆಕ್ ಇಸಿಇ ಮುಗಿಸಿದರು. ಹೈದರಾಬಾದ್ನ ಕ್ವಾಲ್ಕಾಮ್ನಲ್ಲಿ ಹಿರಿಯ ಹಾರ್ಡ್ವೇರ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಿತು. ಒಂದೆಡೆ ಕೆಲಸ ಮಾಡುತ್ತಲೇ ವಾರಾಂತ್ಯದ ರಜೆಯಲ್ಲಿ ಮನೆಯಲ್ಲೇ ಓದಿಕೊಂಡು ಯುಪಿಎಸ್ಸಿಗೆ ತಯಾರಿ ನಡೆಸಿದ್ದರು. 2021ರಲ್ಲಿ ಮೊದಲ ಬಾರಿಗೆ ಸಿವಿಲ್ಸ್ ಪರೀಕ್ಷೆ ಎದುರಿಸಿದರು. ಎರಡನೇ ಪ್ರಯತ್ನದಲ್ಲಿ ದುಪ್ಪಟ್ಟು ಉತ್ಸಾಹದಿಂದ ಅಧ್ಯಯನ ಮಾಡಿ 27ನೇ ರ್ಯಾಂಕ್ ಗಳಿಸಿದ್ದಾರೆ.
ಅಮ್ಮ ತಮ್ಮ ಕಷ್ಟಗಳನ್ನು ಎಂದಿಗೂ ನಮಗೆ ಹೇಳಲೇ ಇಲ್ಲ ಎಂದು ಸಾಯಿಕಿರಣ್ ಹೇಳುತ್ತಾರೆ. ಬಡತನ ಪ್ರತಿ ಬಾರಿಯೂ ಆಕೆಯನ್ನು ಅಣಕಿಸಿದರೂ ಆಕೆಯ ನಿಗದಿತ ಗುರಿಯ ಮುಂದೆ ಅದು ಚಿಕ್ಕದೆನಿಸಿತು. ಐಎಎಸ್ ಆಗಬೇಕೆಂಬ ದೃಢ ಸಂಕಲ್ಪದೊಂದಿಗೆ ಗುರಿ ಸಾಧಿಸಿದೆ. ನನ್ನ ಶ್ರೇಣಿಗೆ ಅನುಗುಣವಾಗಿ ಐಎಎಸ್ ಸಿಗುತ್ತದೆ ಎಂದು ಸಾಯಿಕಿರಣ್ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)
ನನ್ನ ಮುಂದಿನ ಟಾರ್ಗೆಟ್… ಎದುರಾಳಿ ತಂಡಗಳಿಗೆ ಖಡಕ್ ಎಚ್ಚರಿಕೆ ನೀಡಿದ ಟ್ರಾವಿಸ್ ಹೆಡ್!
ಎರಡನೇ ಮದ್ವೆ ಆಗಬಾರದಿತ್ತು! ಪಶ್ಚಾತಾಪದ ಮಾತುಗಳನ್ನಾಡಿ ಕಣ್ಣೀರಿಟ್ಟಿದ್ದರು ದ್ವಾರಕೀಶ್