ಬೆಂಗಳೂರು: ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ..!
– ಇದು ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸಿ, ನಿರ್ದೇಶಿಸಿದ್ದ ಮೊದಲ ಚಿತ್ರ ‘A’ಗೆ ಕೊಟ್ಟಿದ್ದ ಟ್ಯಾಗ್ಲೈನ್. ಹೀಗೆ ಆರಂಭದಿಂದಲೂ ಚಿತ್ರವಿಚಿತ್ರ ಟೈಟಲ್, ವಿಶಿಷ್ಠ ಕಥೆ, ನಿರೂಪಣೆ ಇತ್ಯಾದಿಯಿಂದ ತಮ್ಮದೇ ಟ್ರೆಂಡ್ ಸೆಟ್ ಮಾಡಿರುವ ಉಪೇಂದ್ರ ಇದೀಗ ತಮ್ಮ ನಿರ್ದೇಶನದ ಮತ್ತೊಂದು ಚಿತ್ರದ ಶೂಟಿಂಗ್ಗೆ ಮುಂದಾಗಿದ್ದು, ಮುಹೂರ್ತಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಚಿತ್ರರಸಿಕರ ತಲೆಗೆ ಮತ್ತೆ ಹುಳ ಬಿಟ್ಟಿದ್ದಾರೆ.
ಹಿಂದಿನಂತೆ ಈ ಚಿತ್ರಕ್ಕೂ ಉಪೇಂದ್ರ ವಿಶಿಷ್ಟವಾದ ಟೈಟಲ್ ಇಟ್ಟಿದ್ದು, ಸಿನಿಪ್ರಿಯರು ಅದನ್ನು ತಮಗೆ ಬೇಕಾದಂತೆ ವಿಶ್ಲೇಷಿಸುತ್ತಿದ್ದಾರೆ. ಟೈಟಲ್ ನೋಂದಣಿ ಪ್ರಕಾರ ಇದನ್ನು ‘ಯುಐ’ ಎಂದು ಹೇಳಲಾಗುತ್ತಿದ್ದರೂ, ಶೀರ್ಷಿಕೆಯನ್ನು ಬರೀ ಒಂದು ಲಾಂಛನದ ರೀತಿಯಲ್ಲಿ ತಿಳಿಸಿರುವುದರಿಂದ ನಾನಾ ಅರ್ಥ ಹೊಮ್ಮಿಸುತ್ತಿದೆ. ಈ ಚಿತ್ರದ ಮೊದಲ ಪೋಸ್ಟರ್ ಬಿಟ್ಟಾಗಲೇ ಹೀಗೆ ಕುತೂಹಲ ಕೆರಳಿಸಿದ್ದ ಉಪ್ಪಿ, ಇಂದು ಮತ್ತೊಂದು ಪೋಸ್ಟರ್ ಬಿಟ್ಟು ಮೆದುಳಿಗೆ ಮೇವಾಗಿಸಿದ್ದಾರೆ.
ಇದನ್ನೂ ಓದಿ: ಉಪೇಂದ್ರ ನಿರ್ದೇಶನದ ಸಿನಿಮಾ ಯಾವಾಗ?; ಕೊನೆಗೂ ಯಾವಾಗ ಅಂತ ಹೇಳಿ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್!
ಮೆದುಳಿನ ಮೇಲೆ ಗಂಟೆ-ನಿಮಿಷದ ಮುಳ್ಳನ್ನಿಟ್ಟು ‘ಬುದ್ಧಿಯ ಬಿರುಗಾಳಿ’ ಎಂಬ ಶೀರ್ಷಿಕೆ ಕೊಟ್ಟಿರುವಂಥ ಚಿತ್ರ ಇರುವ ಈ ಪೋಸ್ಟರ್ ನೋಡಿದರೆ ಈ ಸಿನಿಮಾ ಕೂಡ ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಎಂಬಂಥ ಕಥೆ ಹೊಂದಿದೆಯಾ? ಎಂಬ ಕುತೂಹಲ ಕೆರಳಿಸಿದೆ. ಮಾತ್ರವಲ್ಲ, ಮೆದುಳು ಮತ್ತು ಗಂಟೆ-ನಿಮಿಷದ ಮುಳ್ಳು ಈ ಕಥೆಯಲ್ಲಿನ ‘ಟೈಮ್ ಸೆನ್ಸ್’-‘ಸಮಯಪ್ರಜ್ಞೆ’ಯ ಸೂಚಕವೇ? ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)ನ ಈ ಜಮಾನಾದಲ್ಲಿ ಅಲ್ಟಿಮೇಟ್ ಇಂಟೆಲಿಜೆನ್ಸ್ (UI) ಅಗತ್ಯವಿದೆ ಎಂಬುದೂ ಚಿತ್ರದಲ್ಲಿದೆಯೇ? ಎನ್ನುವ ನಿಟ್ಟಿನಲ್ಲಿ ಅಭಿಮಾನಿಗಳು ತಲೆ ಓಡಿಸಲಾರಂಭಿಸಿದ್ದಾರೆ.
ಖ್ಯಾತ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಜಿ. ಮನೋಹರನ್ ಅವರ ನಿರ್ಮಾಣದಲ್ಲಿ ಮೂಡಿ ಬರಲಿರುವ ಅದ್ಧೂರಿ ಚಿತ್ರಕ್ಕೆ ಇದೇ ಜೂ. 3ರಂದು ಬೆಂಗಳೂರಿನಲ್ಲಿ ವಿಧ್ಯುಕ್ತ ಆರಂಭ ಸಿಗಲಿದೆ.