ಕೊಪ್ಪಳ: ರಾಮನ ಭಕ್ತ ಹನುಮ ಉದಯಿಸಿದ ನಾಡು ಗಂಗಾವತಿಯ ಜನತೆಗೆ ನನ್ನ ನಮಸ್ಕಾರಗಳು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾತು ಆರಂಭಿಸುತ್ತಿದ್ದಂತೆ ನೆರೆದಿದ್ದು ಜನರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಸಂಪೂರ್ಣ ಕೇಸರಿಮಯವಾಗಿದ್ದ ಕಾರ್ಯಕ್ರಮದಲ್ಲಿ ಎಲ್ಲರೂ ಕೇಸರಿ ಶಾಲು ಧರಿಸಿ ಭಾಗವಹಿಸಿದ್ದರು.
ರಾಮ ಭಕ್ತ ಹನುಮನ ನಾಡಿಗೆ ರಾಮನ ನಾಡಿನಿಂದ ಬಂದಿರುವೆ. ಪವಿತ್ರ ನೆಲದಲ್ಲಿ ಪ್ರಭು ರಾಮ ಹಾಗೂ ಹನುಮನ ಸಂಗಮವಾಗಿತ್ತು. ಸಾವಿರಾರು ವರ್ಷಗಳಿಂದಲೂ ಒಂದೇ ಭಾರತದ ಕಲ್ಪನೆಗೆ ಸಾಕ್ಷಿಯಾಗಿದೆ. ಅದಕ್ಕೆ ಪ್ರಧಾನಿ ಮೋದಿ ನವ ಸ್ಪರ್ಶ ನೀಡುತ್ತಿದ್ದಾರೆ. ಮನ್ ಕೀ ಭಾತ್ ಕಾರ್ಯಕ್ರಮ ಮೂಲಕ ಕೋಟ್ಯಂತರ ಭಾರತೀಯರನ್ನು ತಲುಪುತ್ತಿದ್ದಾರೆ. ವಿವಿಧ ಭಾಗದ ಜನರ ಸಾಧನೆಗಳನ್ನು ದೇಶಕ್ಕೆ ಪರಿಚಯಿಸುತ್ತಿದ್ದಾರೆ. ಅವರ ನೂರನೇ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ ಎಂದು ಯೋಗಿ ಆಗಿತ್ಯನಾಥ್ ಹೇಳಿದರು.
ಇದನ್ನೂ ಓದಿ: ಶೆಟ್ಟರ್ v/s ಬಿಜೆಪಿ ಹೈಕಮಾಂಡ್!; ಹು-ಧಾ ಸೆಂಟ್ರಲ್ನಲ್ಲಿ ರಂಗೇರಿದ ಚುನಾವಣಾ ಅಖಾಡ
ವಿಶ್ವಕ್ಕೆ ಭಾರತದ ಶಕ್ತಿ ಅರಿವಾಗಿದೆ
ಇಂದು ವಿಶ್ವಕ್ಕೆ ಭಾರತದ ಶಕ್ತಿಯ ಅರಿವಾಗಿದೆ. ಸಂಕಷ್ಟ ಬಂದಾಗ ವಿದೇಶಗಳು ಭಾರತದತ್ತ ಮುಖ ಮಾಡುತ್ತಿವೆ. ಜಿ20 ಸಭೆ ಭಾರತಕ್ಕೆ ಬರುವಂತಾಯಿತು. ವಿಶ್ವವನ್ನೇ ಕಾಡಿದ ಮಹಾಮಾರಿ ಕರೊನಾ ನಿರ್ವಹಣೆ ಮಾಡಿದ್ದು ಸಣ್ಣ ಕೆಲಸವಲ್ಲ. ಅದು ಮೋದಿ ತಾಕತ್ತು ಎಂದರು.
ಕರ್ನಾಟಕವನ್ನು ಐಟಿ ಹಬ್ ಮಾಡಲಾಗುತ್ತಿದೆ. ಬೆಂಗಳೂರು ಈ ಮಾದರಿಯಲ್ಲಿ ಅಭಿವೃದ್ಧಿ ಆಗಲಿದೆ. ಕರ್ನಾಟಕದೊಂದಿಗೆ ಭಾರತದ ವಿಕಾಸವಾಗಲಿದೆ. ತಕ್ಷಶಿಲಾ, ನಲಂದಾದಂತೆ ಬೆಂಗಳೂರು ದೇಶದ ನವ ಐಟಿ ಸಿಟಿಯಾಗಿ ಬೆಳೆಯಲಿದೆ. ಪ್ರತಿ ರಂಗದಲ್ಲೂ ದೇಶ ಅಭಿವೃದ್ಧಿ ಆಗುತ್ತಿದೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದಲ್ಲಿದ್ದಾಗ ತುಷ್ಟೀಕರಣ ಕೆಲಸ ಮಾಡಿವೆ. ಆದರೆ ಇಂದು ಹಾಗಿಲ್ಲ. ಯಾವುದೇ ಬೇಧ ಭಾವ ಇಲ್ಲದೆ ಯೋಜನೆಗಳನ್ನು ಮುಟ್ಟಿಸಲಾಗುತ್ತಿದೆ. ಕೃಷಿ, ಯುವಕರ ಅಭಿವೃದ್ಧಿ, ನಗರಾಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ ಸೇರಿ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಕೃಷಿಯಲ್ಲಿ ಬೇಕು ಸಮಗ್ರ ದೃಷ್ಟಿಕೋನ
ಡಬ್ಬಲ್ ಇಂಜಿನ್ ಸರ್ಕಾರವನ್ನು ಬೆಂಬಲಿಸಿ
ರಾಜ್ಯದ ಜನ ಫೇಲ್ ಆದ ಕಾಂಗ್ರೆಸ್ ಬಿಟ್ಟು ಡಬಲ್ ಇಂಜಿನ್ ಸರ್ಕಾರವನ್ನು ಬೆಂಬಲಿಸಬೇಕು. ಇದರಿಂದ ಅಭಿವೃದ್ಧಿ ಡಬಲ್ ಆಗಲಿದೆ. ಹೊಸ ವೇಗದೊಂದಿಗೆ ಅಭಿವೃದ್ಧಿ ಮಾಡುತ್ತೇವೆ. ನೀವು ಅದಕ್ಕೆ ಸಾಥ್ ನೀಡಬೇಕು. ನಾವು ಅಧಿಕಾರಕ್ಕೆ ಬರುವ ಮೊದಲು ಉತ್ತರ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳಿಗೊಂದು ದಂಗೆಗಳಾಗುತ್ತಿದ್ದವು. ಇಂದು ಇಲ್ಲ. ಬದಲಿಗೆ ಅಭಿವೃದ್ಧಿ ಆಗುತ್ತಿದೆ. ಶಾಂತಿ, ಸುಖ, ಸಮೃದ್ಧಿ ನೆಲೆಸಿದೆ. ಇದಕ್ಕೆ ಕಾರಣ ಡಬಲ್ ಇಂಜಿನ್ ಸರ್ಕಾರ. ಮೋದಿ ಸಹಕಾರ. ಯುಪಿ ಅಭಿವೃದ್ಧಿಯೊಂದಿಗೆ ಬೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ವಿಮಾನ ನಿಲ್ದಾಣ, ಜಲ ಜೀವನ್ ಮಿಷಿನ್, ಐಐಟಿ, ಐಐಎಂ ತಲೆ ಎತ್ತುತ್ತಿವೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಕಾಂಗ್ರೆಸ್ ಕೇವಲ ಯೋಜನೆ ಮಾಡುತ್ತಿತ್ತೇ ಹೊರತು ಅನುಷ್ಠಾನ ಮಾಡುತ್ತಿರಲಿಲ್ಲ. ಕೇವಲ ಪಂಚವಾರ್ಷಿಕ ಯೋಜನೆ ಮಾಡುತ್ತಿತ್ತು. ಅರೆ ಬರೆ ಕೆಲಸ ಮಾಡಿ ಕೈ ಬಿಡುತ್ತಿತ್ತು. ನಾವು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಿ ಉದ್ಘಾಟಿಸುತ್ತೇವೆ. ಇದು ನಮ್ಮ ಅಭಿವೃದ್ಧಿ. ರಾಜ್ಯದಲ್ಲಿ ಮಾರಕವಾಗಿದ್ದ ಪಿಎಫ್ಐ ರದ್ದು ಮಾಡಲಾಗಿದೆ. ಯಾವುದೇ ಸಂಘಟನೆ ದೇಶದ ಭದ್ರತೆಗೆ ಧಕ್ಕೆ ತಂದರು ಸಹಿಸುವ ಮಾತಿಲ್ಲ. ಕಾಂಗ್ರೆಸ್ ಪೋಷಿಸುತ್ತಿದ್ದ ಪಿಎಫ್ಐ ರದ್ದು ಮಾಡಿದ್ದೇವೆ. ಪಿಎಂಬಕಿಸಾನ್ ಮೂಲಕ ರೈತರ ಕಲ್ಯಾಣ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಕಾಂತಾರ ಸಿನಿಮಾದಲ್ಲಿ ರಿಷಬ್ ಪತ್ನಿ ಉಟ್ಟಿದ್ದ 32ವರ್ಷ ಹಳೆಯ ಸೀರೆ!
ರಾಮ ಮಂದಿನ ಉದ್ಘಾಟನೆಗೆ ಬನ್ನಿ
ಕರ್ನಾಟಕ ಹಲವು ಸಂತರ ನಾಡು. ವಿಜಯನಗರ ಸಾಮ್ರಾಜ್ಯದಿಂದಲೇ ಅಭಿವೃದ್ಧಿ ಆರಂಭವಾಗಿದೆ. ಇದು ಇಡೀ ದೇಶಕ್ಕೆ ಗೊತ್ತಿದೆ. ನಾನದನ್ನು ನೆನಪು ಮಾಡಲು ಬಂದಿರುವೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹನುಮನ ನಾಡಿನ ಜನರೆಲ್ಲ ಬನ್ನಿ. ನೂರಾರು ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕೆ ಅನೇಕ ಅಡೆತಡೆಗಳಾಗಿದ್ದವು. ಈಗ ಮೋದಿ ನೇತೃತ್ವದಲ್ಕಿ ನಿರ್ಮಾಣವಾಗುತ್ತಿದೆ. ಇದಕ್ಕೆಲ್ಲ ನಿಮ್ಮ ಆಶೀರ್ವಾದ ಬೇಕು. ನಾವು ತುಷ್ಟಿಕರಣ ಪರವಾಗಿಲ್ಲ. ಇದು ಸಮಾನತೆಯ ನೆಲ. ರಾಮ ಶಬರಿ ಕಚ್ಚಿದ ಹಣ್ಣು ತಿಂದ ನೆಲ. ನಮ್ಮದು ಸಮಾನತೆ ಮಂತ್ರ. 120 ಕೋಟಿ ರೂ. ನಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡುತ್ತಿದೆ. ಅಂಜನಾದ್ರಿಯಿಂದ ಅಯೋಧ್ಯೆಗೆ ವಿಶೇಷ ರೈಲು ಬಿಡಲಾಗುವುದು, ನೀವೆಲ್ಲ ಬನ್ನಿ. ಅಲ್ಲಿ ಹನುಮನ ಭವ್ಯ ಮಂದಿರ ಇದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.