ಬೆಂಗಳೂರು: “ಜನ ಸಿನಿಮಾ ನೋಡಿದ ಮೇಲೆ ಅವರಿಷ್ಟದಂತೆ ವಿಮರ್ಶೆ ಮಾಡುತ್ತಾರೆ. ಆದರೆ, ನಮ್ಮ “ತ್ರಿಕೋನ’ ಸಿನಿಮಾ ನೋಡಿದ ಮೇಲೆ ಅವರನ್ನು ಅವರೇ ವಿಮರ್ಶೆ ಮಾಡಿಕೊಳ್ಳುತ್ತಾರೆ. ನಮ್ಮಲ್ಲೇನು ಕೊರತೆ ಇದೆ? ನಾನು ಮಾಡಿದ್ದು ಸರೀನಾ? ಎಂದು ಅವರಿಗವರೇ ಪ್ರಶ್ನೆ ಮಾಡಿಕೊಳ್ಳುತ್ತಾರೆ’- ಹೀಗೆ “ತ್ರಿಕೋನ’ದ ಬಗ್ಗೆ ಹೇಳಿಕೊಳ್ಳುತ್ತಾರೆ ನಿರ್ದೇಶಕ ಚಂದ್ರಕಾಂತ್.
ಅಂದಹಾಗೆ, “ತ್ರಿಕೋನ’ ಚಿತ್ರ ನಾಳೆಯಿಂದ (ಏ. 8) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ದೇಶಕರು, ಸಿನಿಮಾದೊಳಗೇನಿದೆ ಎಂಬುದನ್ನು ಅವರದೇ ಮಾತಿನಲ್ಲಿ ಸೂಚ್ಯವಾಗಿ ಹೇಳಿಕೊಂಡಿದ್ದಾರೆ.
“ಮನುಷ್ಯನ ಮನಸ್ಸಿಗೆ ಸಂಬಂಧಿಸಿದ ಚಿತ್ರವಿದು. ಮನಸು ಒಂದು ಗೆದ್ದಲು ಗೂಡಿದ್ದಂತೆ. ಅದನ್ನು ಆಗಾಗ ಶುಚಿಗೊಳಿಸುತ್ತಲೇ ಇರಬೇಕು. ಇಲ್ಲವಾದಲ್ಲಿ ಕಸ, ಕಡ್ಡಿ, ಕೀಟಗಳ ತಾಣವಾದಂತೆ, ಮನಸ್ಸಿನಲ್ಲಿಯೂ ದ್ವೇಷ, ಅಸೂಯೆ, ದುರಾಸೆ ಗುಣಗಳೇ ಹೆಚ್ಚಾಗುತ್ತವೆ. ಹಾಗೆ ಆಗಬಾರದೆಂದರೆ ಮನಸ್ಸಿಗೂ ಕೃಷಿಯ ಅವಶ್ಯಕತೆ ಇದೆ. ತಾಳ್ಮೆ ಎಂಬ ನೇಗಿಲಿನಿಂದ ವ್ಯವಸಾಯ ಮಾಡಿದರೆ, ಮನಸ್ಸು ಫಲವತ್ತಾಗಿರುತ್ತದೆ’ ಎಂಬುದು ಅವರ ಮಾತು.
ಯುವಪೀಳಿಗೆಯ ಜತೆಗೆ ಎಲ್ಲ ವರ್ಗದ ಜನರನ್ನೂ ಈ ಸಿನಿಮಾ ತಲುಪಲಿದೆ ಎನ್ನುವ ಚಂದ್ರಕಾಂತ್, “ತಂದೆ ತಾಯಿ ಚಿತ್ರ ನೋಡಿದರೆ, ಮಗನೂ ನೋಡಬೇಕಿತ್ತು ಎಂದುಕೊಳ್ಳುತ್ತಾರೆ. ಹಿರಿಯರು ನೋಡಿದರೆ, ಕುಂದಿದ ಜೀವನೋತ್ಸಾಹ ಮರುಕಳಿಸುತ್ತದೆ. ಯುವಕರಿಗೂ ತಾಳ್ಮೆಯ ಮಹತ್ವ ಈ ಸಿನಿಮಾದಲ್ಲಿ ಕಾಣಿಸುತ್ತದೆ. ಇದೆಲ್ಲವನ್ನು ಆಧರಿಸಿಯೇ “ತ್ರಿಕೋನ’ ಮೂಡಿಬಂದಿದೆ’ ಎನ್ನುತ್ತಾರೆ.
ರಾಜ್ಯಾದ್ಯಂತ 60ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬಂದರೆ, ಮಲ್ಟಿ್ಲೆಕ್ಸ್ಗಳಲ್ಲಿಯೂ ಬಿಡುಗಡೆಯಾಗಿದೆ. ಸುರೇಂದ್ರನಾಥ್ ಸಂಗೀತ, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣವಿದೆ. ರಾಜಶೇಖರ್ ಈ ಚಿತ್ರ ನಿರ್ಮಿಸಿದ್ದಾರೆ.
ಪ್ರಿಮೀಯರ್ ಶೋ: ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ರಾಜಾಜಿನಗರದ ಒರಾಯನ್ ಮಾಲ್ನಲ್ಲಿ ಗುರುವಾರವೇ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಶುರುವಾಗುವ ಪ್ರದರ್ಶನದಲ್ಲಿ ನಿರ್ದೇಶಕ ದಿನಕರ್ ತೂಗುದೀಪ, ಅಚ್ಯುತ್ ರಾವ್, ಸುಧಾರಾಣಿ, ದೊಡ್ಡರಂಗೇಗೌಡ, ಸುಚೇಂದ್ರ ಪ್ರಸಾದ್ ಸೇರಿ ಹಲವರು ಭಾಗವಹಿಸಲಿದ್ದಾರೆ.