ಬೆಂಗಳೂರು: ನಗರದ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿ ಟ್ರ್ಯಾಕ್ಟರ್ಗಳ ಸಮೇತ ಫ್ರೀಡಂ ಪಾರ್ಕ್ಗೆ ಆಗಮಿಸಿದ ನೂರಾರು ಚಾಲಕರು ಹಾಗೂ ಮಾಲೀಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ನೇತೃತ್ವದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು.
ಸರ್ಕಾರದ ಈ ನಿರ್ಧಾರ ಖಂಡಿಸಿ ಬುಧವಾರ ರಾತ್ರಿಯೇ ರಾಜ್ಯದ ನಾನಾ ಮೂಲೆಗಳಿಂದ ನೂರಾರು ಟ್ರ್ಯಾಕ್ಟರ್ಗಳು ನಗರ ಪ್ರವೇಶಿಸಲು ಮುಂದಾದವು. ಆದರೆ, ಪೊಲೀಸರು ಟ್ರ್ಯಾಕ್ಟರ್ಗಳ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಚಾಲಕರು ಸ್ಥಳದಲ್ಲೇ ಟ್ರ್ಯಾಕ್ಟರ್ ನಿಲ್ಲಿಸಿ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಚಾಲಕರ ಪ್ರತಿಭಟನೆಯಿಂದ ಕಸಿವಿಸಿಗೊಂಡ ಪೊಲೀಸರು ಕೊನೆಗೂ ಟ್ರ್ಯಾಕ್ಟರ್ಗಳನ್ನು ಫ್ರೀಡಂ ಪಾರ್ಕ್ವರೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಲು ಅನುಮತಿ ನೀಡಿದ್ದಾರೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ್ ಪಡುಕೋಟೆ ಮಾತನಾಡಿ, ನಗರದಲ್ಲಿರುವ ಸಾವಿರಾರು ಟ್ರ್ಯಾಕ್ಟರ್ಗಳು ಕೃಷಿ ಉತ್ಪನ್ನ, ಕಟ್ಟಡ ತ್ಯಾಜ್ಯ ಹಾಗೂ ಸರಕು ಸಾಗಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಟ್ರ್ಯಾಕ್ಟರ್ಗಳು ಪ್ರಾಮುಖ ಪಾತ್ರವಹಿಸಿವೆ. ಪ್ರತಿ ಟ್ರ್ಯಾಕ್ಟರ್ಗೆ ಒಬ್ಬ ಸಹಾಯಕ ಹಾಗು ಇಬ್ಬರು ಕೂಲಿ ಆಳು ಸಹಿತ ನಾಲ್ವರಿಗೆ ಕೆಲಸ ಇರುತ್ತದೆ. ಅಂದರೆ ಸುಮಾರು ೧.೫ ಲಕ್ಷ ಮಂದಿಗೆ ಕೈತುಂಬಾ ಕೆಲಸ. ಅಷ್ಟು ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೆ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕೆ ದಾರಿಯಾಗಿವೆ. ಏಕಾಏಕಿ ಟ್ರ್ಯಾಕ್ಟರ್ ನಿಷೇಧಿಸಿ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದರಿಂದ ಅಷ್ಟು ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಲುಗಡೆ ಸೌಲಭ್ಯವಿಲ್ಲದಿದ್ದರು ಮನೆಯಲ್ಲಿ ಮೂರು ನಾಲ್ಕು ಕಾರುಗಳು ಖರೀದಿಸಿ ಅದನ್ನು ಸಾರ್ವಜನಿಕ ರಸ್ತೆಯಲ್ಲಿ ನಿಲುಗಡೆ ಮಾಡಿ ಇಂದು ಕಾರಿನಲ್ಲಿ ಒಬ್ಬೊಬ್ಬರೆ ಸಂಚರಿಸುವುದರಿಂದ ಸಂಚಾರ ದಟ್ಟಣೆಗೆ ಮೂಲ ಕಾರಣವಾಗಿದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.