ಮಂಗಳೂರು: ಮಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ನಡೆಸಲು ಉದ್ದೇಶಿಸಿದ್ದರು. ಆದರೆ ಫೆ.11ರಂದೇ ರೋಡ್ ಶೋ ನಡೆಸುವ ದಾರಿಯಲ್ಲಿ ಸ್ವಾಮಿ ಕೊರಗಜ್ಜನ ಕೋಲ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೋಲಕ್ಕೆ ಅಡ್ಡಿ ಆಗುತ್ತದೆ ಎನ್ನುವ ಕಾರಣಕ್ಕೆ ಅಮಿತ್ ಷಾ ರೋಡ್ ಶೋವನ್ನು ರದ್ದು ಮಾಡಿದ್ದಾರೆ.
ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ಕೋಲ ನಿಗದಿಯಾಗಿದೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ರೋಡ್ ಶೋವನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪದವಿನಂಗಡಿ ಬಳಿಯ ಖಾಸಗಿ ಸಭಾಂಗಣದಲ್ಲಿ ನಡೆಯಬೇಕಿದ್ದ ಬಿಜೆಪಿ ಪಕ್ಷದ ಸಭೆಯೂ ಸ್ಥಳಾಂತರವಾಗಿದ್ದು ಮಂಗಳೂರು ಏರ್ ಪೋರ್ಟ್ ಬಳಿಯೇ ಪಕ್ಷದ ಸಭೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನು, ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಅಮಿತ್ ಷಾ ಸಮಾವೇಶ ನಡೆಯಲಿದ್ದು. ಈ ಸಮಾವೇಶಕ್ಕೆ ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಕ್ಯಾಂಪೋ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಸಮಾವೇಶ ಕೂಡ ನಡೆಯಲಿದೆ.