ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಲುವಾಗಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಮಂಗಳೂರಿನಲ್ಲಿ ಬ್ರಹ್ಮಶ್ರಿ ನಾರಾಯಣ ಗುರು ವೃತ್ತದಲ್ಲಿರುವ ನಾರಾಯಣ ಗುರುಗಳ ವಿಗ್ರಹಕ್ಕೆ ಮಾಲಾರ್ಪಣೆ ಮಾಡಲಿರುವ ಮೋದಿ ಬಳಿಕ ನಾರಾಯಣಗುರು ವೃತ್ತದಿಂದ ಲಾಲ್ಬಾಗ್, ಬಳ್ಳಾಲ್ಬಾಗ್, ಪಿವಿಎಸ್ ಮೂಲಕ ನವಭಾರತ್ ವೃತ್ತದ ತನಕ ನಡೆಯಲಿರುವ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಿರುವರು.
ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಉಭಯ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಸಹಿತ ಎರಡೂ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖರು ಮಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಮೋದಿ ಅವರ ರೋಡ್ ಶೋ ಸಾಗುವ ಮಾರ್ಗದುದ್ದಕ್ಕೂ ಜನಸಾಗರವೇ ನೆರೆದಿದ್ದು, ಪ್ರಧಾನಿ ಅವರನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದಾರೆ.