ನವದೆಹಲಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನೊಬ್ಬನನ್ನು ಅಪರಿಚಿತ ಬಂದೂಕುಧಾರಿಗಳು ಮಸೀದಿಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್ಕೋಟ್ನಲ್ಲಿ ನಡೆದಿದೆ.
ಮೃತನನ್ನು ಲಷ್ಕರ್-ಇ-ತೊಯ್ಬಾ (LET) ಸಂಘಟನೆಯ ಉನ್ನತ ಕಮಾಂಡರ್ ರಿಯಾಜ್ ಅಹ್ಮದ್ ಅಲಿಯಾಸ್ ಅಬು ಖಾಸಿಂ ಎಂದು ಗುರುತಿಸಲಾಗಿದೆ. ಈತನನ್ನು ರಾವಲ್ಕೋಟ್ನಲ್ಲಿರುವ ಖುದ್ದೂಸ್ ಮಸೀದಿಯೊಳಗೆ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಲು ತೆರಳಿದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇದನ್ನೂ ಓದಿ: ಮೊರಾಕ್ಕೋದಲ್ಲಿ ಭೂಕಂಪ; ಸಾವಿನ ಸಂಖ್ಯೆ 820ಕ್ಕೆ ಏರಿಕೆ
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ನಿವಾಸಿಯಾದ ಉಗ್ರ ಅಹ್ಮದ್ನನ್ನು 1999ರಲ್ಲಿ ಭಾರತದಿಂದ ಗಡಿಯಾಚೆ ನುಸುಳಿ ಉಗ್ರ ಸಂಘಟನೆ ಸೇರಿಕೊಂಡಿದ್ದ. ಜನವರಿ 1ರಂದು ಜಮ್ಮು-ಕಾಶ್ಮೀರದ ಧಾಂಗ್ರಿಯಲ್ಲಿ ನಡೆದ ಉಗ್ರ ದಾಳಿ ಹಿಂದಿನ ಮಾಸ್ಟರ್ಮೈಂಡ್ಗಳಲ್ಲಿ ಈತ ಒಬ್ಬನಾಗಿದ್ದ. ಅವಳಿ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿನ ಭಯೋತ್ಪಾದಕ ಕೃತ್ಯಗಳಿಗೆ ಈತ ಮಾಸ್ಟರ್ ಮೈಂಡ್ ಆಗಿದ್ದ ಎಂದು ಹೇಳಲಾಗಿತ್ತು.
ಅಹ್ಮದ್ ಹೆಚ್ಚಾಗಿ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಬೇಸ್ ಕ್ಯಾಂಪ್ನಿಂದ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಇತ್ತೀಚೆಗೆ ರಾವಲಕೋಟ್ಗೆ ಸ್ಥಳಾಂತರಗೊಂಡಿದ್ದನು. ಈತ ಲಷ್ಕರ್-ಎ-ತೊಯ್ಬಾದ ಮುಖ್ಯ ಕಮಾಂಡರ್ ಸಜ್ಜಾದ್ ಜಾತ್ನ ನಿಕಟವರ್ತಿಯಾಗಿದ್ದು, ಸಂಘಟನೆಯ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.