More

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು…

    ಕ್ರೀಡಾಪಟುಗಳ ಜೀವನವೇ ಹಾಗೆ. ಸೋತಾಗ ಒಬ್ಬಂಟಿಯಾಗಿರುತ್ತಾರೆ. ಗೆದ್ದಾಗ ಎಲ್ಲರೂ ಬಂದು ಅಭಿನಂದಿಸಿ, ಇವರು ನಮ್ಮವರೆಂದು ಬೀಗುತ್ತಾರೆ. ಈ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವವರು ಕ್ರೀಡಾ ದಿಗ್ಗಜರಾಗಿ ಬೆಳಗುತ್ತಾರೆ. ಸೋಲಿಗೆ ಕುಗ್ಗದೆ, ಗೆಲುವಿಗೆ ಅಹಂಕಾರಪಡದೆ ಸಾಗುವ ಅವರ ಹಾದಿ ಸುಲಭವಾದುದಲ್ಲ. ಇವೆರಡರ ನಡುವಿನ ಅವರ ಪಯಣ ಸಾಕಷ್ಟು ಸವಾಲು, ಅಡೆತಡೆ ಮತ್ತು ಏರಿಳಿತಗಳಿಂದ ಕೂಡಿರುತ್ತದೆ. ಕೆಲವರಿಗೆ ಆರ್ಥಿಕ ಸಮಸ್ಯೆಯಾದರೆ, ಕೆಲವರಿಗೆ ಬೆಂಬಲದ ಕೊರತೆ. ಇನ್ನು ಕೆಲವರಿಗೆ ಅವಕಾಶಗಳೇ ಲಭಿಸುವುದಿಲ್ಲ. ಇವೆಲ್ಲವನ್ನು ಮೀರಿ ಬೆಳೆಯುವವರೇ ಕ್ರೀಡಾ ಸಾಧಕರಾಗುತ್ತಾರೆ. ಭಾರತದ ಅಂಥ ಅದ್ಭುತ ಸಾಧಕರು ಟೋಕಿಯೊ ಒಲಿಂಪಿಕ್ಸ್​ನಲ್ಲಿ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ. ಭಾರತ ಹಿಂದೆಂದೂ ಕಂಡಿರದಷ್ಟು ಪದಕಗಳನ್ನು ಟೋಕಿಯೊದಲ್ಲಿ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಈ 7 ಪದಕಗಳ ಹಿಂದಿನ ಪರಿಶ್ರಮ, ಕಠಿಣ ತರಬೇತಿ ಮತ್ತು ಯಶೋಗಾಥೆಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.

    | ಪ್ರಸಾದ್ ಶೆಟ್ಟಿಗಾರ್ ಬೆಂಗಳೂರು

    ಸಣ್ಣಗಾಗಲು ಹೋಗಿ ಚಿನ್ನದ ಹುಡುಗನಾದ ನೀರಜ್

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು...ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿದ್ದರೆ ಅದ್ಭುತಗಳು ನಡೆಯುತ್ತವೆ ಎಂಬ ಮಾತಿಗೆ ನೀರಜ್ ಚೋಪ್ರಾ ತಾಜಾ ದೃಷ್ಟಾಂತ. ಹರಿಯಾಣದ ಖಾಂಡ್ರಾ ಗ್ರಾಮದಲ್ಲಿ ಜನಿಸಿದ್ದ ನೀರಜ್ ಚೋಪ್ರಾ ಬಾಲ್ಯದಲ್ಲಿ ತಿಂಡಿಪೋತ. ದಢೂತಿ. ಅವರು ಸಣ್ಣ ಆಗಲೆಂದು ತಂದೆ ಸತೀಶ್ ಕುಮಾರ್ ಪಾಣಿಪತ್​ನ ಜಿಮ್ೆ ಸೇರಿಸಿದ್ದರು. ಪಕ್ಕದಲ್ಲೇ ಇದ್ದ ಸಾಯ್ ಕೇಂದ್ರಕ್ಕೆ ಹೋಗುತ್ತಿದ್ದರು. ಅಲ್ಲಿ ಜಾವೆಲಿನ್ ಥ್ರೋಪಟು ಜೈವೀರ್ ಚೌಧರಿ ಅವರ ಅಭ್ಯಾಸ ವೀಕ್ಷಿಸುತ್ತಿದ್ದ ನೀರಜ್​ಗೆ ತಾವೂ ಒಮ್ಮೆಅದನ್ನು ಎಸೆಯಬೇಕೆಂಬ ಆಸೆ ಹುಟ್ಟಿತು. ಜೈವೀರ್​ರಿಂದ ಜಾವೆಲಿನ್ ಪಡೆದು ನಿರಾಯಾಸವಾಗಿ 40 ಮೀಟರ್​ಗೂ ದೂರ ಎಸೆದಿದ್ದರು. ಇದರಿಂದ ಪ್ರಭಾವಿತರಾದ ಜೈವೀರ್ ಚೌಧರಿ, ನೀರಜ್ ಮನೆಯವರ ಬಳಿ ಮಾತನಾಡಿ ಫಿಟ್ನೆಸ್ ಜತೆಗೆ ಜಾವೆಲಿನ್ ಎಸೆತದಲ್ಲೂ ತೊಡಗಿಕೊಳ್ಳುವಂತೆ ಮಾಡಿದ್ದರು. ತಾವೇ ಅವರ ಮೊದಲ ಕೋಚ್ ಆಗಿದ್ದರು. ಅಲ್ಲಿಂದ 50, 55, 60, 65 ಮೀಟರ್​ವರೆಗೆ ಅವರ ಜಾವೆಲಿನ್ ಎಸೆತಗಳು ಪ್ರಗತಿ ಕಾಣಲಾರಂಭಿಸಿದವು. 2012ರಲ್ಲಿ ಜೂನಿಯರ್ ರಾಷ್ಟ್ರೀಯ ಕೂಟದಲ್ಲಿ 68.40 ಮೀಟರ್​ಗಳ ರಾಷ್ಟ್ರೀಯ ದಾಖಲೆ ಬರೆದರೆ, ಅದರ ಮರುವರ್ಷ ವಿಶ್ವ ಯೂತ್ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸಿದ್ದರು. 2014ರಲ್ಲಿ ಯೂತ್ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಮೊದಲ ಅಂತಾರಾಷ್ಟ್ರೀಯ ಪದಕ ಒಲಿಸಿಕೊಂಡಿದ್ದರು. 2015ರಲ್ಲಿ 80 ಮೀ.ಗೂ ದೂರ ಜಾವೆಲಿನ್ ಎಸೆಯಲಾರಂಭಿಸಿದ ನೀರಜ್​ಗೆ ಪಟಿಯಾಲದ ಎನ್​ಐಎಸ್​ನಲ್ಲಿ ರಾಷ್ಟ್ರೀಯ ಶಿಬಿರ ಸೇರಿಕೊಳ್ಳುವಂತೆ ಆಹ್ವಾನ ಬಂದಿತು. ಅಲ್ಲಿ ಕನ್ನಡಿಗ ಕಾಶಿನಾಥ್ ನಾಯ್್ಕ ಗರಡಿಯಲ್ಲಿ ಪಳಗಿದ ನೀರಜ್ 2016ರ ಐಎಎಎಫ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ 86.48 ಮೀ. ಜಾವೆಲಿನ್ ಎಸೆದು ಜೂನಿಯರ್ ವಿಭಾಗದ ವಿಶ್ವದಾಖಲೆ ಬರೆದಿದ್ದರು. ಆದರೆ ಈ ಸ್ಪರ್ಧೆ ಜುಲೈ 23ರಂದು ನಡೆದಿದ್ದರೆ, ರಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಡುವು ಜುಲೈ 11ಕ್ಕೆ ಮುಗಿದಿತ್ತು. ಇದರಿಂದಾಗಿ ಒಲಿಂಪಿಕ್ಸ್ ಸ್ಪರ್ಧೆಗೆ 5 ವರ್ಷ ಹೆಚ್ಚುವರಿಯಾಗಿ ಕಾಯುವ ನಡುವೆ ನೀರಜ್, 2018ರ ಏಷ್ಯಾಡ್ ಮತ್ತು ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಚಿನ್ನ ಗೆದ್ದು ಬೀಗಿದ್ದರು, 2019ರಲ್ಲಿ ಮೊಣಕೈ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಜತೆಗೆ ಜರ್ಮನಿಯ ಬಯೋಮೆಕಾನಿಕ್ಸ್ ತಜ್ಞ ಕ್ಲೌಸ್ ಬಟೋನಿಜ್ ಅವರ ಗರಡಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ 16 ತಿಂಗಳ ಕಾಲ ಕಠಿಣ ತರಬೇತಿ ಪಡೆದಿದ್ದರು. ಇದರಿಂದಾಗಿ 85 ಮೀಟರ್​ಗೂ ಅಧಿಕ ದೂರ ಎಸೆಯುವ ಸಾಮರ್ಥ್ಯ ಸಂಪಾದಿಸಿದ್ದ ನೀರಜ್, ಟೋಕಿಯೊದಲ್ಲಿ 87.58 ಮೀ. ಎಸೆದು ಚಿನ್ನಕ್ಕೆ ಮುತ್ತಿಕ್ಕಿದ್ದರು. ನೀರಜ್ ಎಂದೂ ಪದಕದ ಬಗ್ಗೆ ಯೋಚಿಸುವುದಿಲ್ಲವಂತೆ. ಅವರಿಗೆ ಪರಿಪೂರ್ಣವಾದ ಎಸೆತ ಎಸೆಯುವುದಷ್ಟೇ ಮಹತ್ವವಾದುದು. ಆದರೆ, ಒಮ್ಮೆ ಆ ಪರಿಪೂರ್ಣ ಎಸೆತ ಎಸೆದಾದ ಬಳಿಕ ಅವರು ಪದಕದ ಸಹಿತ ಎಲ್ಲವನ್ನೂ ಬೋನಸ್ ಆಗಿ ಸ್ವೀಕರಿಸುತ್ತಾರಂತೆ!

    ಮೀರಾ ವೇಟ್​ಲಿಫ್ಟಿಂಗ್ ಸಾಮರ್ಥ್ಯ ಪರಿಚಯಿಸಿದ್ದು ಕಟ್ಟಿಗೆ!

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು...ಮಣಿಪುರದ ಹುಡುಗಿ ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮೊದಲ ದಿನವೇ ಬೆಳ್ಳಿ ಪದಕ ಜಯಿಸಿದ್ದರು. 202 ಕೆಜಿ ಭಾರ ಎತ್ತಿದ ಮೀರಾ ಶಕ್ತಿಗೆ ಭಾರತೀಯರು ಬೆರಗಾಗಿದ್ದರು. ಆದರೆ ಕುಟುಂಬದವರಿಗೆ ಅವರ ವೇಟ್​ಲಿಫ್ಟಿಂಗ್ ಸಾಮರ್ಥ್ಯ 15 ವರ್ಷಗಳ ಹಿಂದೆಯೇ ಗೊತ್ತಾಗಿತ್ತು. ಇಂಫಾಲ್​ನಿಂದ 30 ಕಿಮೀ ದೂರದ ಹಳ್ಳಿಯ ಮೀರಾ, ತನ್ನ ಅಣ್ಣನಿಗೆ ಎತ್ತಲಾಗದ ದೊಡ್ದದೊಡ್ಡ ಕಟ್ಟಿಗೆ ಹೊರೆಗಳನ್ನು ನಿರಾಯಾಸವಾಗಿ ಮನೆಗೆ ಸಾಗಿಸುತ್ತಿದ್ದರು. ಪ್ರತಿದಿನ ಇಂಫಾಲ್​ನ ಕ್ರೀಡಾ ಅಕಾಡೆಮಿಗೆ ತರಬೇತಿಗಾಗಿ ಹೋಗಿ ಬರಲು ಟ್ರಕ್​ಗಳನ್ನೇ ನೆಚ್ಚಿಕೊಳ್ಳಬೇಕಾಗಿತ್ತು. ಡ್ರೈವರ್​ಗಳು ಉಚಿತವಾಗಿ ಬಿಡುತ್ತಿದ್ದುದರಿಂದ, ಆ ಪ್ರಯಾಣಕ್ಕೆ ವೆಚ್ಚವಾಗಬಹುದಾದ 10-12 ರೂ.ಗಳನ್ನು ಮೀರಾ ತಮ್ಮ ಡಯೆಟ್​ಗೆ ಬಳಸುತ್ತಿದ್ದರು. ಈ ಉಪಕಾರವನ್ನು ಮರೆಯದ ಮೀರಾ, ಆ ಎಲ್ಲ ಟ್ರಕ್ ಡ್ರೈವರ್​ಗಳನ್ನೂ ಇತ್ತೀಚೆಗೆ ಮನೆಗೆ ಕರೆದು ಊಟ ಹಾಕಿದ್ದಾರೆ! ಎಂಬುದು ವಿಶೇಷ. 2014ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ರಜತ ಪದಕ ಗೆದ್ದು ಬೀಗಿದ್ದರೂ, ಜೀವನ ಸಾಕಷ್ಟು ಏರಿಳಿತಗಳನ್ನು ಕಂಡಿತ್ತು. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಭಾರಿ ನಿರೀಕ್ಷೆಗಳ ನಡುವೆ ಸ್ಪರ್ಧಿಸಿದ್ದ ಮೀರಾ, ಕ್ಲೀನ್ ಆಂಡ್ ಜರ್ಕ್​ನಲ್ಲಿ ಎಲ್ಲ 3 ಯತ್ನಗಳಲ್ಲೂ ಫೌಲ್ ಮಾಡಿ ನಿರಾಸೆ ಅನುಭವಿಸಿದ್ದರು. ಅಲ್ಲಿಂದ ಮುಂದೆ ಪುಟಿದೇಳಲಾರಂಭಿಸಿದ ಮೀರಾ 2017ರ ವಿಶ್ವ ಚಾಂಪಿಯನ್​ಷಿಪ್ ಮತ್ತು 2018ರ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಚಿನ್ನ ಗೆದ್ದಿದ್ದರು. ಆದರೆ 2019ರಲ್ಲಿ ಬೆನ್ನು ನೋವಿನ ಸಮಸ್ಯೆ ಅವರನ್ನು ಸಾಕಷ್ಟು ಕಾಡಿತ್ತು. ಇದರಿಂದ ಅವರು ಸಾಕಷ್ಟು ಸಮಯ ವಿಶ್ರಾಂತಿಯಲ್ಲಿರಬೇಕಾಗಿ ಬಂದರೂ, ಬಲಿಷ್ಠವಾಗಿಯೇ ಮರಳಿ ಕಣಕ್ಕಿಳಿದರು. ರಾಷ್ಟ್ರೀಯ ಕೋಚ್ ವಿಜಯ್ ಶರ್ಮ ಅವರು ಮೀರಾ ಯಶಸ್ಸಿನಲ್ಲಿ ನಿರ್ವಹಿಸಿರುವ ಪಾತ್ರವೂ ಮಹತ್ವದ್ದಾಗಿದೆ.

    ಅಪ್ಪನ ಕನಸು ನನಸಾಗಿಸಿದ ರವಿ

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು...ಒಲಿಂಪಿಕ್ಸ್​ನಲ್ಲಿ ಪೈಲ್ವಾನ್ ರವಿ ಕುಮಾರ್ ದಹಿಯಾ ಬೆಳ್ಳಿ ಗೆದ್ದರೂ ನಗು ಚೆಲ್ಲಲಿಲ್ಲ. ಇದಕ್ಕೆ ಕಾರಣ ಚಿನ್ನದ ಪದಕದ ಹೋರಾಟದಲ್ಲಿ ಸೋತ ನೋವು. ಹೀಗಾಗಿ 2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಸಂಕಲ್ಪವನ್ನು ಅವರು ಈಗಲೇ ಮಾಡಿದ್ದಾರೆ. ಅವರ ತಂದೆ ರಾಕೇಶ್ ದಹಿಯಾಗೆ ಕುಸ್ತಿಪಟುವಾಗುವ ಕನಸಿದ್ದರೂ, ಬಡತನದಿಂದಾಗಿ ಸಾಧ್ಯವಾಗಲಿಲ್ಲ. ಹೀಗಾಗಿ ಕೃಷಿಯಲ್ಲೇ ಮುಂದುವರಿದಿದ್ದರು. ಮಗನ ಜೀವನ ಹೀಗಾಗಬಾರದು ಎಂಬ ಕನಸಿನೊಂದಿಗೆ 10ನೇ ವಯಸ್ಸಿನಲ್ಲೇ ರವಿ ಅವರನ್ನು ಉತ್ತರ ದೆಹಲಿಯ ಛತ್ರಶಾಲ ಸ್ಟೇಡಿಯಂನಲ್ಲಿ ಹಿರಿಯ ಕುಸ್ತಿ ಕೋಚ್ ಸತ್ಪಾಲ್ ಸಿಂಗ್ ಗರಡಿಗೆ ಸೇರಿಸಿದ್ದರು. ಅಖಾಡದಲ್ಲಿ ರವಿ ಎಷ್ಟು ಬೆವರು ಸುರಿಸುತ್ತಿದ್ದರೋ ಅದಕ್ಕಿಂತ ಹೆಚ್ಚಿನ ಶ್ರಮವನ್ನು ರಾಕೇಶ್ ಹಾಕುತ್ತಿದ್ದರು. ಪ್ರತಿದಿನ ಮುಂಜಾನೆ 3.30ಕ್ಕೆ ಏಳುತ್ತಿದ್ದ ರಾಕೇಶ್ 5 ಕಿಮೀ ನಡೆದು ಹತ್ತಿರದ ರೈಲ್ವೇ ನಿಲ್ದಾಣ ತಲುಪುತ್ತಿದ್ದರು. ಅಲ್ಲಿಂದ 60 ಕಿಮೀ ಪ್ರಯಾಣದ ಬಳಿಕ ದೆಹಲಿಗೆ ಬಂದು ರೈಲ್ವೇ ನಿಲ್ದಾಣದಿಂದ 2 ಕಿಮೀ ದೂರದ ಛತ್ರಶಾಲಾ ಕ್ರೀಡಾಂಗಣಕ್ಕೆ ಮತ್ತೆ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮಗನಿಗೆ ಪೌಷ್ಟಿಕ ಶಕ್ತಿಗಾಗಿ ಹಾಲು ಮತ್ತು ಹಣ್ಣುಹಂಪಲುಗಳನ್ನು ನೀಡಿ ಮತ್ತೆ ಮನೆಗೆ ಮರಳಿ ಕೃಷಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಇದನ್ನು ರಾಕೇಶ್ ದಹಿಯಾ ಕಳೆದ 10 ವರ್ಷಗಳಿಂದಲೂ ಅಂದರೆ ಕಳೆದ ವರ್ಷ ದೇಶದೆಲ್ಲೆಡೆ ಲಾಕ್​ಡೌನ್ ಘೊಷಣೆಯಾಗುವವರೆಗೂ ಮಾಡುತ್ತ ಬಂದಿದ್ದರು. ಅವರ ಈ ತಪಸ್ಸಿನ ಫಲವಾಗಿ ರವಿ ದಹಿಯಾ ಈಗ ಒಲಿಂಪಿಕ್ಸ್ ರಜತ ಪದಕ ಗೆದ್ದ 2ನೇ ಭಾರತೀಯರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ಆತ್ಮರಕ್ಷಣೆಯಿಂದ ಪದಕಕ್ಕೆ ಲವ್ಲಿ ಪಂಚ್

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು...ಒಲಿಂಪಿಕ್ಸ್ ಪದಕ ಗೆದ್ದ ಭಾರತದ 3ನೇ ಬಾಕ್ಸರ್ ಮತ್ತು 2ನೇ ಮಹಿಳಾ ಬಾಕ್ಸರ್ ಲವ್ಲಿನಾ ಬೋಗೋಹೈನ್. ಅವಳಿ ಅಕ್ಕಂದಿರ ಜತೆ ಆತ್ಮರಕ್ಷಣೆಯ ಉದ್ದೇಶದಿಂದ ಲವ್ಲಿನಾ ಬಾಲ್ಯದಲ್ಲೇ ಸಮರಕಲೆ ಮುಯಿ ತೈ ಅಭ್ಯಾಸ ಮಾಡಿದ್ದರು. ನಂತರ ಬಾಕ್ಸಿಂಗ್​ನತ್ತ ಆಸಕ್ತಿ ತೋರಿ, ಹೈಸ್ಕೂಲ್ ಬಾಲಕಿಯರ ಟ್ರಯಲ್ಸ್​ನಲ್ಲಿ ರಾಷ್ಟ್ರೀಯ ಕೋಚ್ ಪದುಮ್ ಬೋರೋ ಕಣ್ಣಿಗೆ ಬಿದ್ದಿದ್ದರು. 2012ರಲ್ಲಿ ಅವರಿಗೆ ಗುವಾಹಟಿಯ ಸಾಯ್ ಕೇಂದ್ರಕ್ಕೆ ಪ್ರವೇಶ ಲಭಿಸಿತ್ತು. ಅದೇ ವರ್ಷ ಲಂಡನ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದ ಅನುಭವಿ ಬಾಕ್ಸರ್ ಮೇರಿ ಕೋಮ್ ಲವ್ಲಿನಾಗೆ ಸ್ಪೂರ್ತಿ ತುಂಬಿದ್ದರು. 5 ವರ್ಷ ಬಳಿಕ 2017ರ ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಲವ್ಲಿನಾ ಭರವಸೆಯ ಯುವ ಬಾಕ್ಸರ್ ಆಗಿ ಕಂಗೊಳಿಸಿದ್ದರು. 2018 ಮತ್ತು 2019ರ ವಿಶ್ವ ಚಾಂಪಿಯನ್​ಷಿಪ್​ಗಳಲ್ಲೂ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದ ಲವ್ಲಿನಾ ಇದೀಗ ಒಲಿಂಪಿಕ್ಸ್ ಸಾಧನೆಯಿಂದ ತಮ್ಮ ಹಳ್ಳಿಗೂ ಉತ್ತಮ ರಸ್ತೆ ನಿರ್ವಣಕ್ಕೆ ಕಾರಣವಾಗಿದ್ದಾರೆ. ಅಸ್ಸಾಂನ ಬರೊಮುಖಿಯಾ ಹೆಸರಿನ ಅವರ ಹಳ್ಳಿಯ 3.5 ಕಿಮೀ ಉದ್ದದ ರಸ್ತೆ ಬರೀ ಕಲ್ಲು-ಕೆಸರುಗಳಿಂದಲೇ ತುಂಬಿತ್ತು. ಲವ್ಲಿನಾ ಸಾಧನೆಯ ಬೆನ್ನಲ್ಲೇ ಈ ರಸ್ತೆ ಹೊಸದಾಗಿ ಡಾಮರೀಕರಣಗೊಂಡು ಲವ್ಲಿನಾ ಸ್ವಾಗತಕ್ಕೆ ಸಜ್ಜಾಗಿತ್ತು.

    ಅವಳಿ ಪದಕದೊಡತಿ ಪಿವಿ ಸಿಂಧು

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು...ಕಂಚು ಜಯಿಸುವ ಮೂಲಕ ಒಲಿಂಪಿಕ್ಸ್​ನಲ್ಲಿ ಅವಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಐತಿಹಾಸಿಕ ಸಾಧನೆಯೊಂದಿಗೆ ಸಿಂಧು ಮಿನುಗಿದ್ದಾರೆ. ಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಳ್ಳಲು ಸ್ಪೂರ್ತಿಯಾಗಿದ್ದು 2001ರ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿ ಯನ್​ಷಿಪ್ ಗೆಲುವು. 8ನೇ ವಯಸ್ಸಿನಲ್ಲೇ ಬ್ಯಾಡ್ಮಿಂಟನ್ ಕೋರ್ಟ್​ಗೆ ಕಾಲಿಟ್ಟ ಸಿಂಧು ಬಳಿಕ ಗೋಪಿಚಂದ್​ರಿಂದ ತರಬೇತಿ ಪಡೆಯಲಾರಂಭಿಸಿದರು. ಇದಕ್ಕಾಗಿ ಅವರು ಹೈದರಾಬಾದ್​ನ ಗೋಪಿಚಂದ್ ಅಕಾಡೆಮಿಗೆ ಪ್ರತಿದಿನ ಮನೆಯಿಂದ 56 ಕಿಮೀ. ಪ್ರಯಾಣ ಮಾಡಬೇಕಾಗುತ್ತಿತ್ತು. 14ನೇ ವಯಸ್ಸಿನಲ್ಲೇ ಅಂತಾ ರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಲಾರಂಭಿಸಿದ ಸಿಂಧು, 2012ರಲ್ಲಿ 17ನೇ ವಯಸ್ಸಿನಲ್ಲೇ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರ 20ರೊಳಗೆ ಸ್ಥಾನ ಸಂಪಾದಿಸಿದ್ದರು. ಅಲ್ಲಿಂದ ಮುಂದೆ ಏಷ್ಯನ್ ಗೇಮ್್ಸ, ಕಾಮನ್ವೆಲ್ತ್ ಗೇಮ್್ಸ, ಏಷ್ಯನ್ ಚಾಂಪಿಯನ್​ಷಿಪ್​ಗಳಲ್ಲಿ ಪದಕ ಗೆಲ್ಲಲಾರಂಭಿಸಿದ ಸಿಂಧು, 2019ರಲ್ಲಿ ವಿಶ್ವ ಚಾಂಪಿಯನ್​ಷಿಪ್ ಗೆದ್ದ ಮೊದಲ ಭಾರತೀಯರೆಂಬ ದಾಖಲೆ ಬರೆದಿದ್ದರು. ಅದೇ ವರ್ಷ ಭಾರತದ ಶ್ರೀಮಂತ ಮಹಿಳಾ ಕ್ರೀಡಾಪಟು ಎಂದೂ ಫೋರ್ಬ್ಸ್ ಅವರನ್ನು ಗುರುತಿಸಿತ್ತು.

    ಏಳನೇ ವಯಸ್ಸಿನಲ್ಲೇ ಅಖಾಡಕ್ಕಿಳಿದಿದ್ದ ಭಜರಂಗ್

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು...ಪೈಲ್ವಾನ್ ಭಜರಂಗ್ ಪೂನಿಯಾ ಮೇಲೆ ಚಿನ್ನದ ನಿರೀಕ್ಷೆಯನ್ನೇ ಇಡಲಾಗಿತ್ತು. ಈ ಅವಕಾಶ ಕೈತಪ್ಪಿದರೂ, ಕಂಚಿನೊಂದಿಗೆ ಚೊಚ್ಚಲ ಒಲಿಂಪಿಕ್ಸ್ ಪದಕ ಮುಡಿಗೇರಿಸಿಕೊಂಡರು. ಪೈಲ್ವಾನ್ ಆಗಿದ್ದ ಅಪ್ಪನ ಬೆಂಬಲದೊಂದಿಗೆ 7ನೇ ವಯಸ್ಸಿನಲ್ಲೇ ಅಖಾಡ ಪ್ರವೇಶಿಸಿದ್ದರು. ಕುಸ್ತಿಯಾಡುವ ಸಲುವಾಗಿ ಶಾಲೆಗೂ ಚಕ್ಕರ್ ಹೊಡೆಯುತ್ತಿದ್ದರು. ಭಜರಂಗ್ ಹುಟ್ಟಿದ್ದು ಹರಿಯಾಣದ ಜಾಜ್ಜರ್ ಜಿಲ್ಲೆಯ ಖುದನ್ ಗ್ರಾಮದಲ್ಲಿ. 2015ರಲ್ಲಿ ಅವರ ಕುಸ್ತಿ ಅಭ್ಯಾಸಕ್ಕೆ ನೆರವಾಗುವ ಸಲುವಾಗಿ ಅವರ ಕುಟುಂಬವೇ ಸೋನೆಪತ್​ಗೆ ವಲಸೆ ಬಂದಿತ್ತು. ಅಲ್ಲಿನ ಸಾಯ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಭಜರಂಗ್ 2018ರ ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದೇ ವರ್ಷ ವಿಶ್ವ ಚಾಂಪಿಯನ್​ಷಿಪ್​ನಲ್ಲೂ ರಜತ ಪದಕಕ್ಕೆ ಕೊರಳೊಡ್ಡಿದ್ದರು. ವಿಶ್ವ ಚಾಂಪಿಯನ್​ಷಿಪ್​ನಲ್ಲಿ 3 ಪದಕ ಗೆದ್ದ ಮೊದಲ ಭಾರತೀಯರೆಂಬ ದಾಖಲೆಯೂ ಅವರದಾಗಿದೆ.

    ಟೀಕೆ ಬಿಟ್‘ಹಾಕಿ’ ಪದಕ ಗೆದ್ದರು!

    ಟೋಕಿಯೊ ಸಾಧಕರು; ಗೆಲುವಿನ ಮೆಟ್ಟಿಲುಗಳಿವು...ಸ್ವಾತಂತ್ರ್ಯ ಪೂರ್ವ ಮತ್ತು ಅನಂತರದ ದಿನಗಳಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಎಂದರೆ ಪುರುಷರ ಹಾಕಿ ತಂಡದ ಸ್ಪರ್ಧೆ ಎನಿಸಿತ್ತು. ಯಾಕೆಂದರೆ ಅದೊಂದರಲ್ಲಿ ಮಾತ್ರ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ ಅಥವಾ ಪದಕ ಒಲಿದು ಬರುತ್ತಿತ್ತು. ಆದರೆ ಕಳೆದ 4 ದಶಕಗಳಿಂದ ಹಾಕಿ ಕೂಡ ಭಾರತಕ್ಕೆ ಪದಕ ನಿರೀಕ್ಷೆಯ ಕ್ರೀಡೆ ಆಗಿರಲಿಲ್ಲ. ಹೀಗಾಗಿ ಈ ಬಾರಿಯೂ ಭಾರತೀಯ ಕ್ರೀಡಾಪ್ರೇಮಿಗಳು ಹಾಕಿ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿರಲಿಲ್ಲ. ಆದರೆ ಒಲಿಂಪಿಕ್ಸ್​ನಲ್ಲಿ ಪಾಲ್ಗೊಂಡ ಆ 16 ಆಟಗಾರರ ಹಾಕಿ ತಂಡಕ್ಕೆ ಈ ಬಾರಿ ಪದಕ ಒಲಿಸಿಕೊಳ್ಳುವ ವಿಶ್ವಾಸ ಬೆಟ್ಟದಷ್ಟಿತ್ತು. ಅದರಂತೆ ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದು ಬೀಗಿದ ಮನ್​ಪ್ರೀತ್ ಸಿಂಗ್ ಪಡೆ, 41 ವರ್ಷಗಳ ಬಳಿಕ ಭಾರತಕ್ಕೆ ಹಾಕಿ ಸ್ಪರ್ಧೆಯಲ್ಲಿ ಪದಕ ಗೆದ್ದುಕೊಟ್ಟಿತ್ತು. ಇದಕ್ಕಾಗಿ ಭಾರತ ತಂಡ ನಡೆಸಿದ ಸಿದ್ಧತೆ ಮತ್ತು ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ಕರೊನಾ ಲಾಕ್​ಡೌನ್​ನಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಬೆಂಗಳೂರಿನ ಸಾಯ್ ಕೇಂದ್ರದಲ್ಲಿದ್ದ ತಂಡ ಬಹುತೇಕ ಒಳಾಂಗಣದಲ್ಲೇ ಇತ್ತು. ಲಾಕ್​ಡೌನ್ ನಂತರ ಮನೆಗೆ ಮರಳಿದ್ದ ಆಟಗಾರರು ಅಭ್ಯಾಸಕ್ಕಾಗಿ ಮತ್ತೆ ಬೆಂಗಳೂರಿಗೆ ಬಂದಾಗ, ಹಲವು ಆಟಗಾರರು ಕರೊನಾ ಸೋಂಕಿತರಾಗಿದ್ದರು. ಆದರೆ ತಂಡಕ್ಕೆ ಇದಾವುದೂ ಅಡ್ಡಿಯಾಗಲಿಲ್ಲ. ಆಟಗಾರರು ಒಗ್ಗಟ್ಟಿನಿಂದ ಅಭ್ಯಾಸ ಮುಂದುವರಿಸಿದ್ದರು. ಟೋಕಿಯೊದಲ್ಲೂ ಅಷ್ಟೇ ಬಲಿಷ್ಠ ಆಸ್ಟ್ರೇಲಿಯಾ ಎದುರು 1-7ರಿಂದ ಹೀನಾಯ ಸೋಲು ಎದುರಾದರೂ ತಂಡ ಕುಗ್ಗಲಿಲ್ಲ. ಹಾಲಿ ಚಾಂಪಿಯನ್ ಅರ್ಜೆಂಟೀನಾಕ್ಕೆ ಸೋಲುಣಿಸಿ ಪುಟಿದೆದ್ದಿತ್ತು. ಕಂಚಿನ ಹೋರಾಟದಲ್ಲಿ ಜರ್ಮನಿ ವಿರುದ್ಧ ದಿಟ್ಟ ಆಟವಾಡಿತ್ತು. ‘ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿ’ ಎಂದು ಭಾರತೀಯರೆಲ್ಲರೂ ಮತ್ತೊಮ್ಮೆ ಹೆಮ್ಮೆಯಿಂದ ಹೇಳಿಕೊಳ್ಳುವ ದಿನಗಳು ಮರಳಿ ಬಂದವು.

    ‘ಪದವಿಪೂರ್ವ’ದಲ್ಲಿ ನಟಿ ಸೋನಲ್ ಮೊಂತೆರೋ​; ಇಬ್ಬರು ನಾಯಕಿಯರ ಜೊತೆಗೆ ಮತ್ತೊಬ್ಬ ಬೆಡಗಿ…

    ರೋಗಿ ಎಚ್ಚರವಿರುವಾಗಲೇ ನಡೆಯಿತು ಮಿದುಳಿನ ಶಸ್ತ್ರಚಿಕಿತ್ಸೆ; ಸರ್ಜರಿ ನಡೆಯುವಾಗ ಗಾಯತ್ರಿ ಮಂತ್ರ ಪಠನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts