ಜೈಪುರ: ಇಲ್ಲೊಬ್ಬ ರೋಗಿಯ ಮಿದುಳಿನ ಶಸ್ತ್ರಚಿಕಿತ್ಸೆಯನ್ನು ಆತ ಎಚ್ಚರ ಇರುವಾಗಲೇ ನಡೆಸಿದ್ದು, ಸರ್ಜರಿ ನಡೆಯುವಷ್ಟೂ ಕಾಲ ಆ ವ್ಯಕ್ತಿ ಗಾಯತ್ರಿ ಮಂತ್ರವನ್ನು ಪಠಿಸುತ್ತಲೇ ಇದ್ದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. ಜೈಪುರದ ನಾರಾಯಣ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ.
ಸೇನೆಯ ನಿವೃತ್ತ ಹವಲ್ದಾರ್, ಸದ್ಯ ಗ್ರಾಮಸೇವಕರಾಗಿರುವ ಐವತ್ತೇಳು ವರ್ಷದ ರಿಧ್ಮಲ್ ರಾಮ್ ಎಂಬ ವ್ಯಕ್ತಿ ಈ ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪಕ್ಷವಾತ ಹಾಗೂ ತಾತ್ಕಾಲಿಕ ವಾಕ್ದೋಷದಿಂದ ಈ ವ್ಯಕ್ತಿ ಬಳಲುತ್ತಿದ್ದರು. ಮಿದುಳಿನಲ್ಲಿ ಸಂಬಂಧಿತ ಭಾಗದಲ್ಲಿ ಉಂಟಾದ ಗಡ್ಡೆಯಿಂದ ಈ ಸಮಸ್ಯೆ ಉಂಟಾಗಿತ್ತು. ನಾರಾಯಣ ಆಸ್ಪತ್ರೆಯ ಹಿರಿಯ ನ್ಯೂರೋ ಸರ್ಜನ್ ಡಾ.ಕೆ.ಕೆ. ಬನ್ಸಾಲ್ ಮತ್ತು ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದೆ.
ಅತ್ಯುತ್ಕೃಷ್ಟ ಮೈಕ್ರೋಸ್ಕೋಪ್ ಬಳಸಿ ನಾಲ್ಕು ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸರ್ಜರಿಯುದ್ದಕ್ಕೂ ರಿಧ್ಮಲ್ ರಾಮ್ ಗಾಯತ್ರಿ ಮಂತ್ರ ಪಠಿಸುತ್ತಲೇ ಇದ್ದರು. 2018ರಲ್ಲಿ 30 ವರ್ಷದ ವ್ಯಕ್ತಿಯೊಬ್ಬರ ಬ್ರೇನ್ ಟ್ಯೂಮರ್ಅನ್ನು ಹೀಗೆ ಜಾಗೃತಾವಸ್ಥೆಯಲ್ಲಿ ಇರುವಾಗಲೇ ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಲಾಗಿತ್ತು. ಈ ಸಂದರ್ಭದಲ್ಲಿ ಆ ವ್ಯಕ್ತಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದರು. ಹೀಗೆ ಎಚ್ಚರಾವಸ್ಥೆಯಲ್ಲಿ ಇರುವಾಗಲೇ ನಡೆಸುವ ಶಸ್ತ್ರಚಿಕಿತ್ಸೆಯನ್ನು ಅವೇಕ್ ಕಾರ್ನಿಟೊಮಿ ಅಥವಾ ಅವೇಕ್ ಬ್ರೇನ್ ಸರ್ಜರಿ ಎಂದು ಕರೆಯಲಾಗುತ್ತದೆ. ಇಂಥ ಸರ್ಜರಿಗಳು ದೇಶದಲ್ಲಿ ಇದುವರೆಗೆ ಕೆಲವಷ್ಟೇ ನಡೆದಿವೆ. ಇಂಥ ಸಂಕೀರ್ಣ ಸರ್ಜರಿಗಳಲ್ಲಿ ರೋಗಿಯ ಮಿದುಳಿನ ಪ್ರತಿಕ್ರಿಯೆ ತಿಳಿಯಬೇಕಿದ್ದರೆ ಆತ ಎಚ್ಚರದಲ್ಲಿ ಇರಬೇಕಾಗುತ್ತದೆ. ಒಂದುವೇಳೆ ಮಿದುಳಿನ ಪ್ರತಿಕ್ರಿಯೆ ತಿಳಿಯದೆ ಶಸ್ತ್ರಚಿಕಿತ್ಸೆ ಮಾಡಲೆತ್ನಿಸಿದರೆ ಸ್ವಲ್ಪ ಹೆಚ್ಚೂಕಮ್ಮಿಯಾದರೂ ದೊಡ್ಡ ಸಮಸ್ಯೆ ಆಗಿಬಿಡುತ್ತದೆ. ಹೀಗಾಗಿ ರೋಗಿಯನ್ನು ಎಚ್ಚರದಲ್ಲಿ ಇರಿಸಿಕೊಳ್ಳುವುದು ಅನಿವಾರ್ಯ ಎಂದು ಡಾ.ಬನ್ಸಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)
ಅಮಾವಾಸ್ಯೆ ಎಂದರೆ ಸಾಕು ಈ ಮನೆಯವರಿಗೇನೋ ದುಗುಡ; ಮಾಟ-ಮಂತ್ರ ಮಾಡಿಸುತ್ತಿರುವುದ್ಯಾರು ಎಂಬುದಿನ್ನೂ ನಿಗೂಢ..