ಪುದುಕೊಟ್ಟೈ: ಶಾಲಾ ದಿನಗಳಲ್ಲಿ ಹುಟ್ಟುವಂತಹ ಸ್ನೇಹ ಎಂದೂ ಅಳಿಯದೇ ಶಾಶ್ವತವಾಗಿ ಉಳಿಯುವಂಥದ್ದು. ಶಾಲಾ ಸ್ನೇಹಿತರ ಜತೆ ನಿರಂತರ ಸಂಪರ್ಕ ಇಲ್ಲದೇ ಇರಬಹುದು ಆದರೆ, ಆ ಒಂದು ಬಾಂಧವ್ಯ ಮಾತ್ರ ಎಂದೂ ಮರೆಯಾಗದು. ಅದೇ ರೀತಿಯ ಸ್ನೇಹಕ್ಕೆ ಮುತ್ತುಕುಮಾರ್ ಮತ್ತು ಕೆ. ನಾಗೇಂದ್ರನ್ ಹೊಸ ಭಾಷ್ಯ ಬರೆದಿದ್ದಾರೆ.
ಮುತ್ತುಕುಮಾರ್ (44) ಓರ್ವ ಲಾರಿ ಚಾಲಕ. ಬಹುತೇಕರಂತೆಯೇ ಮುತ್ತುಕುಮಾರ್ ಸಹ ಕರೊನಾ ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಲಾಕ್ಡೌನ್ಗೂ ಮುಂಚೆ ತಿಂಗಳಿಗೆ 10 ಸಾವಿರದಿಂದ 15 ಸಾವಿರ ಸಂಪಾದನೆ ಮಾಡುತ್ತಿದ್ದ ಮುತ್ತುಕುಮಾರ್ ಲಾಕ್ಡೌನ್ ಬಳಿಕ 1 ಸಾವಿರದಿಂದ 2 ಸಾವಿರ ರೂ. ಗಳಿಸುವುದು ಕಷ್ಟವಾಗಿದೆ.
ಇದನ್ನೂ ಓದಿ: ಟಾಟಾ, ಬಿರ್ಲಾ, ಅಂಬಾನಿ ಸಂಸ್ಥೆಗಳಿಂದ ಬ್ಯಾಂಕ್ ಸ್ಥಾಪನೆ? ಪರವಾನಗಿಯಲ್ಲಿ ಸಡಿಲತೆ ತೋರಿದ ಆರ್ಬಿಐ
2018ರಲ್ಲಿ ರಾಜ್ಯದಲ್ಲಿ ಎದುರಾದ ಗಜ ಸೈಕ್ಲೋನ್ನಿಂದಾಗಿ ತಾನು ವಾಸವಿದ್ದ ಗುಡಿಸಲು ಸಹ ಹಾನಿಯಾಗಿತ್ತು. ಇದರ ನಡುವೆ ಕುಟುಂಬದ ಆರು ಸದಸ್ಯರಿಗೆ ಆಹಾರ ಒದಗಿಸುವುದು ಸಹ ಮುತ್ತುಕುಮಾರ್ಗೆ ಕಠಿಣವಾಗಿದೆ. ಈ ಬಗ್ಗೆ ಮಾತನಾಡಿರುವ ಮುತ್ತುಕುಮಾರ್, ನಾನು ಹುಟ್ಟಿದಾಗಿನಿಂದ ಗುಡಿಸಲಿನಲ್ಲೇ ವಾಸವಿದ್ದೇನೆ. ನನ್ನ ಆಸೆಯನ್ನು ಈಡೇರಿಸಿಕೊಳ್ಳಲು ನಾನು ಚಾಲಕನಾಗಿ ದುಡಿಯುತ್ತಿದ್ದೆ. ಆದರೆ, ಲಾಕ್ಡೌನ್ ಕಳೆದ ಆರು ತಿಂಗಳಿಂದ ನನ್ನ ಆದಾಯವನ್ನು ತಗ್ಗಿಸಿತು. ಸೈಕ್ಲೋನ್ನಿಂದ ಮನೆಯ ಸುತ್ತ ಇದ್ದ ಮರಗಳು ಮನೆಯ ಮೇಲೆ ಬಿದ್ದು, ಭಾರೀ ಹಾನಿಯಾಯಿತು ಎಂದಿದ್ದಾರೆ.
ಇದರ ನಡುವೆ ಮುತ್ತುಕುಮಾರ್ ಕಳೆದ ಸೆಪ್ಟೆಂಬರ್ನಲ್ಲಿ ತಮ್ಮ ಶಾಲಾ ಶಿಕ್ಷಕರ ಮನೆಯಲ್ಲಿ ಸ್ನೇಹಿತ ಕೆ. ನಾಗೇಂದ್ರನ್ರನ್ನು ಭೇಟಿ ಮಾಡಿದ್ದರಂತೆ. ಬಳಿಕ ತಮ್ಮ ಮನೆಗೆ ಆಹ್ವಾನವನ್ನು ನೀಡಿದ್ದರಂತೆ. ಸ್ನೇಹಿತನ ಮನೆಗೆ ಬಂದ ನಾಗೇಂದ್ರನ್ ಮನೆಯ ಸ್ಥಿತಿ ನೋಡಿ ಬೇಸರವಾಗಿತ್ತಂತೆ. ಈ ಬಗ್ಗೆ ಮಾತನಾಡಿರುವ ನಾಗೇಂದ್ರನ್, 30 ವರ್ಷಗಳ ಬಳಿಕ ಸ್ನೇಹಿತನನ್ನು ಭೇಟಿ ಮಾಡಿದೆ. ಅವನ ಮನೆಯ ಸ್ಥಿತಿ ನೀಡಿ ಬೇಜಾರಾಯಿತು. ಮನೆಯೊಗಳಗೆ ಹೋಗಬೇಕಾದರೂ ತುಂಬಾ ಬಗ್ಗಿ ಹೋಗಬೇಕಾದಂತಹ ಸ್ಥಿತಿ ಇತ್ತು. ಬಳಿಕ ಸ್ನೇಹಿತನಿಗೆ ಸಹಾಯ ಮಾಡಿದೆ. ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಅದರಲ್ಲಿ ಸ್ನೇಹಿತನ ಮನೆಯ ಚಿತ್ರವನ್ನು ಫಾರ್ವರ್ಡ್ ಮಾಡಿದೆ. ಅನೇಕರು ಸಹಾಯ ಮಾಡಲು ಮುಂದೆ ಬಂದರು ಎಂದು ತಿಳಿಸಿದ್ದಾರೆ.
ಕೇವಲ ಮೂರೇ ತಿಂಗಳಲ್ಲಿ 1.5 ಲಕ್ಷ ರೂ. ನೆರವಿನಿಂದ ನಾಗೇಂದ್ರನ್ ಮತ್ತು ಸ್ನೇಹಿತರು ಮುತ್ತುಕುಮಾರ್ಗಾಗಿ ಹೊಸ ಮನೆಯನ್ನು ಯಾವುದೇ ಇಂಜಿನಿಯರ್ ಸಹಾಯವಿಲ್ಲದೆ ನಿರ್ಮಿಸಿಕೊಟ್ಟಿದ್ದಾರೆ. ಮನೆಯನ್ನು ದೀಪಾವಳಿ ಉಡುಗೊರೆಯನ್ನಾಗಿ ಮುತ್ತುಕುಮಾರ್ ಕುಟುಂಬಕ್ಕೆ ಸ್ನೇಹಿತರು ನೀಡಿದ್ದಾರೆ. ಮನೆ ಪಕ್ಕ ಮುತ್ತುಕುಮಾರ್ ತಾಯಿಗಾಗಿ ಒಂದು ಸಣ್ಣ ಗುಡಿಸಲನ್ನು ಸಹ ಸ್ನೇಹಿತರು ನಿರ್ಮಿಸಿದ್ದಾರೆ. ಸ್ನೇಹಿತರ ಸಹಾಯವನ್ನು ನೆನೆದು ಮುತ್ತುಕುಮಾರ್ ಆನಂದ ಭಾಷ್ಪ ಹರಿಸಿದರು. (ಏಜೆನ್ಸೀಸ್)