ಬೆಂಗಳೂರು: ಭೂಗತ ಪಾತಕಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಸಾಮಾಜಿಕ ಹೋರಾಟಗಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ನಾನು ಅಂಡರ್ವರ್ಲ್ಡ್ ಡಾನ್ ಕಲಿ ಯೋಗೇಶ್ ಎಂಬುದಾಗಿ ಹೇಳಿಕೊಂಡ ವ್ಯಕ್ತಿ ಇಂಟರ್ನೆಟ್ ಕರೆ ಮೂಲಕ ಮಾತನಾಡಿ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಂಬ ಸಂಘಟನೆಯ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಎಂಬವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಕರೆ ಬಂದಿದೆ. ಬೋಳ ಸೊಸೈಟಿ ವಿಷಯಕ್ಕೆ ಹೋದರೆ ಸರಿ ಇರುವುದಿಲ್ಲ. ನಿನ್ನಷ್ಟಕ್ಕೆ ನೀನಿದ್ದರೆ ಒಳ್ಳೇದು, ಇಲ್ಲಂದ್ರೆ ಒಂದು ಗತಿ ಕಾಣಿಸ್ತೇನೆ. ನಾನು ಅಂಡರ್ವರ್ಲ್ಡ್ ಡಾನ್ ಕಲಿ ಯೋಗೇಶ್, ನಾನು ಯಾರು ಅಂತ ಗೊತ್ತಾಗ್ಬೇಕಿದ್ರೆ ಗೂಗಲ್ನಲ್ಲಿ ಸರ್ಚ್ ಮಾಡು ಎಂಬುದಾಗಿ ಕರೆ ಮಾಡಿರುವ ವ್ಯಕ್ತಿ ಬೆದರಿಸಿರುವುದು ವಾಯ್ಸ್ ಕ್ಲಿಪ್ನಲ್ಲಿ ಮುದ್ರಿತವಾಗಿದೆ.
ಇದನ್ನೂ ಓದಿ: ಆತ್ಮಹತ್ಯೆ ತಡೆ ದಿನದ ತಿಂಗಳಲ್ಲೇ ಮೇಲಿಂದ ಮೇಲೆ ಆತ್ಮಹತ್ಯೆ; ಕಳೆದ ಮೂರು ದಿನಗಳಲ್ಲೇ ರಾಜ್ಯದಲ್ಲಿ 12 ಸುಸೈಡ್
ಬೋಳ ಸೊಸೈಟಿಯಲ್ಲಿ ಅನ್ಯಾಯ ನಡೆದಿರುವುದರಿಂದ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಮಧ್ಯಪ್ರವೇಶಿಸಿದ್ದೇನೆ ಎಂದು ರವಿ ಶೆಟ್ಟಿ ಹೇಳಿಕೊಂಡಿದ್ದಕ್ಕೆ, ನೀನೊಬ್ನೇ ಸಾಮಾಜಿಕ ಹೋರಾಟಗಾರ ಅಲ್ಲ, ಬೋಳ ಸೊಸೈಟಿ ತಂಟೆಗೆ ಹೋದರೆ ಹುಡುಗರನ್ನು ಕಳಿಸಿ ಕಾಡಿನೊಳಗೆ ಹೊಡೆಸಿ ಬಿಡುತ್ತೇನೆ ಎಂಬುದು ಬೆದರಿಕೆ ಕರೆಯಲ್ಲಿ ದಾಖಲಾಗಿದೆ. ಈ ಸಂಬಂಧ ರಕ್ಷಣೆ ಕೋರಿ ರವಿ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಮಗ; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ, ಪ್ರತಿಭಟನೆ