ನವದೆಹಲಿ: ಕಳೆದ ಭಾನುವಾರ (ಅ.30) ನೆದರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೂರನೇ ಪಂದ್ಯವಾಡಿದ ಪಾಕಿಸ್ತಾನ, ಜಯಭೇರಿ ಬಾರಿಸಿತು. ಆದರೂ ತಮ್ಮ ನಾಯಕತ್ವ ಕಾರಣದಿಂದಾಗಿ ಬಾಬರ್ ಅಜಾಮ್ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರಿಂದ ಟೀಕೆಗೆ ಗುರಿಯಾಗಿದ್ದಾರೆ.
ಈಗಾಗಲೇ ಪಾಕ್, ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಹೀನಾಯವಾಗಿ ಸೋತಿದೆ. ಆದರೆ, ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವ ಅವಕಾಶವನ್ನು ಜೀವಂತವಾಗಿ ಉಳಿಸಿಕೊಳ್ಳಲು ನೆದರ್ಲೆಂಡ್ ವಿರುದ್ಧ ಗೆಲುವು ದಾಖಲಿಸಲೇಬೇಕಿತ್ತು. ಹೀಗಾಗಿ ಪಾಕಿಸ್ತಾನದ ಆಟಗಾರರ ಮೇಲೆ ತುಂಬಾ ಒತ್ತಡವಿತ್ತು.
ಒತ್ತಡದಿಂದಲೇ ಮೈದಾನಕ್ಕೆ ಇಳಿದ ಪಾಕ್ ತಂಡ ನೆದರ್ಲೆಂಡ್ ತಂಡವನ್ನು 9 ವಿಕೆಟ್ ನಷ್ಟಕ್ಕೆ 91 ರನ್ಗೆ ಕಟ್ಟಿಹಾಕಿತು. ಬಳಿಕ ಗುರಿ ಬೆನ್ನತ್ತಿದ ಪಾಕ್ಗೆ ಆರಂಭದಲ್ಲೇ ಆಘಾತವಾಯಿತು. ಕೇವಲ 4 ರನ್ ಗಳಿಸಿ ನಾಯಕ ಬಾಬರ್ ಅಜಾಮ್ ಔಟಾದರು. ಮೊಹಮ್ಮದ್ ರಿಜ್ವಾನ್ (49) ಉತ್ತಮ ಆಟವಾಡಿ ತಂಡದ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಪಾಕ್ 13.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿತು.
ಕೆಲವು ಅಡಚಣೆಗಳ ನಂತರ ಅಂತಿಮವಾಗಿ ಪಾಕಿಸ್ತಾನವು ಪಂದ್ಯವನ್ನು ಗೆದ್ದರೂ, ಬಾಬರ್ ತಂಡದ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡಬೇಕೆಂದು ಗಂಭೀರ್ ಭಾವಿಸಿದ್ದಾರೆ. ತನ್ನ ಬದಲಿಗೆ ಇನ್ನಿಂಗ್ಸ್ ಆರಂಭಿಸಲು ಜಮಾನ್ ಅವರನ್ನು ಕಳುಹಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ನೀವು ತಂಡದ ನಾಯಕರಾಗಿದ್ದಾಗ ಸ್ವಾರ್ಥಿಯಾಗುವುದು ಸುಲಭ. ನನ್ನ ಪ್ರಕಾರ ಮೊದಲು ನೀವು ನಿಮ್ಮ ಬಗ್ಗೆ ಯೋಚಿಸುವುದನ್ನು ಬಿಟ್ಟು ತಂಡದ ಬಗ್ಗೆ ಯೋಚಿಸಬೇಕು. ನಿಮ್ಮ ಯೋಜನೆಯ ಪ್ರಕಾರ ಏನೂ ನಡೆಯದಿದ್ದಾಗ, ನೀವು ಫಖರ್ ಜಮಾನ್ ಅವರನ್ನು ನಿಮ್ಮ ಬ್ಯಾಟಿಂಗ್ ಕ್ರಮಾಂಕಕ್ಕೆ ಕಳುಹಿಸಬೇಕಿತ್ತು. ಇದನ್ನೆ ಸ್ವಾರ್ಥ ಎಂದು ಕರೆಯುವುದು. ಬಾಬರ್ ಮತ್ತು ರಿಜ್ವಾನ್ ಇನ್ನಿಂಗ್ಸ್ ತೆರೆಯುವ ಮೂಲಕ ಹಲವಾರು ದಾಖಲೆಗಳನ್ನು ರಚಿಸುವುದು ಸುಲಭ. ಆದರೆ, ನೀವು ನಾಯಕರಾಗಲು ಬಯಸಿದರೆ, ಮೊದಲು ನಿಮ್ಮ ತಂಡದ ಬಗ್ಗೆ ಯೋಚಿಸಬೇಕು ಎಂದು ಗಂಭೀರ್ ಬುದ್ಧಿ ಮಾತು ಹೇಳಿದ್ದಾರೆ.
ಗುರುವಾರ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ಸೋಲನ್ನು ಅನುಭವಿಸಿದರೆ ಸೆಮಿಫೈನಲ್ಗೆ ತಲುಪುವ ನಿರೀಕ್ಷೆ ಕೊನೆಯಾಗಲಿದೆ. (ಏಜೆನ್ಸೀಸ್)
VIDEO| ಪ್ರಾಣ ಪಣಕ್ಕಿಟ್ಟು ದೈತ್ಯ ಕಾಳಿಂಗ ಸರ್ಪ ರಕ್ಷಣೆ: ಎದೆ ಝಲ್ ಎನಿಸುವ ವಿಡಿಯೋ ಇದು…
ಪ್ರವೀಣ್ ನೆಟ್ಟಾರು ಹತ್ಯೆ: ತಲೆಮರೆಸಿಕೊಂಡಿರುವ PFI ಸದಸ್ಯರ ಸುಳಿವು ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ NIA
ಕರ್ನಾಟಕದಿಂದ ತಮಿಳುನಾಡಿನತ್ತ ವಲಸೆ ಹೋಗುತ್ತಿರುವ ಕಾಡಾನೆ ಹಿಂಡು: ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ