ಆನೇಕಲ್: ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಓಡಾಡುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಅರಣ್ಯದಿಂದ ತಮಿಳುನಾಡಿನ ಜವಳಗಿರಿ ಅರಣ್ಯ ಪ್ರದೇಶದತ್ತ ವಲಸೆ ಹೋದ ಆನೆಗಳು ಅಲ್ಲೇ ಬೀಡುಬಿಟ್ಟಿವೆ.
ಕಾಡಾನೆಗಳು ಆಗಾಗ ಜನವಸತಿ ಪ್ರದೇಶಗಳಿಗೆ ವಲಸೆ ಹೋಗಿ ಮತ್ತೆ ಕಾಡಿಗೆ ಹಿಂತಿರುಗುವುದು ಸಾಮಾನ್ಯ. ಈಗ ಸುಮಾರು 70 ಕಾಡಾನೆಗಳು ಆಹಾರ ಅರಸುತ್ತ ಗ್ರಾಮಗಳಿಗೆ ವಲಸೆ ಹೋಗಿವೆ. ಕಾಡಂಚಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ, ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಕೃಷಿ ಜಮೀನು ಹಾಗೂ ಜಾನುವಾರುಗಳನ್ನು ಮೇಯಿಸಲು ಹೋಗಬಾರದೆಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಜತೆಗೆ ಗ್ರಾಮಗಳ ಕಡೆ ಕಾಡಾನೆಗಳು ಬರದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.