ಬಾಗಲಕೋಟೆ: ದೇಶದ ಅಸಂಖ್ಯಾತ ಹಿಂದುಗಳು ಎದುರು ನೋಡುತ್ತಿರುವ ಐತಿಹಾಸಿಕ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಣ್ತುಂಬಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ದೇಶದೆಲ್ಲೆಡೆ ಮಹಾ ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದು, ಬಾಗಲಕೋಟೆ ತಾಲೂಕಿನ ಸೀತೆಮನೆ ಗ್ರಾಮದಲ್ಲೂ ಸಂಭ್ರಮ ಮನೆ ಮಾಡಿದೆ.
ಸೀತೆಮನೆ ಗ್ರಾಮವು ರಾಮಾಯಣಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಈ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಅವರು ಸೀತೆಗೆ ಆಸರೆ ನೀಡಿದ್ದರು ಎಂದು ಉಲ್ಲೇಖವಾಗಿದೆ. ಅಲ್ಲದೆ, ವಾಲ್ಮೀಕಿ ಆಶ್ರಯದಲ್ಲೇ ಸೀತೆಗೆ ಹೆರಿಗೆಯಾಗಿ ಲವ-ಕುಶರು ಜನಿಸಿದರು ಎಂದು ಹೇಳಲಾಗಿದೆ. ಅದಕ್ಕೆ ಪೂರಕ ಎಂಬಂತೆ ಹಲವು ಕುರುಹುಗಳು ಸಹ ಈ ಸೀತೆಮನೆ ಗ್ರಾಮದಲ್ಲಿವೆ.
ಸೀತೆಗೆ ಹೆರಿಗೆಯಾದ ಕೊಠಡಿ, ಸೀತೆ ಪ್ರಸೂತಿ ಗೃಹವಿದೆ. ಲವ-ಕುಶಗೆ ಸ್ನಾನ ಮಾಡಿಸಿದ್ದರ ಪ್ರತೀಕವಾಗಿ ಲವ-ಕುಶ ಹೆಸರಿನಲ್ಲಿ ಹೊಂಡಗಳು ಸಹ ಇವೆ. ವಶಿಷ್ಠ ರಾಮಾಯಣದಲ್ಲಿ ಸೀತೆ ಇಲ್ಲಿ ಬಂದು ವಾಸವಿದ್ದಳೆಂಬ ಉಲ್ಲೇಖವಿದೆ. ಸ್ಥಳದಲ್ಲಿ ಸೀತಾದೇವಿ ದೇವಸ್ಥಾನ, ವಾಲ್ಮೀಕಿ ಮಹರ್ಷಿಗಳ ಕುಟೀರವೂ ಇದೆ. ಸೀತಾಮಾತೆ ಒಬ್ಬಳೇ ಇರುವ ದೇಶದ ಏಕೈಕ ದೇವಸ್ಥಾನ ಸೀತೆಮನೆ ಗ್ರಾಮದಲ್ಲಿದೆ.
ಸೀತೆ, ಕೃಷ್ಣಾ ನದಿ ತೀರದಲ್ಲಿ ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ತನ್ನ ತಾಳಿಯ ಕರಿಮಣಿಯನ್ನು ಇದೇ ಜಾಗದಲ್ಲಿ ಸೀತೆ ಎಸೆದಿದ್ದರು. ಇದೇ ಕಾರಣಕ್ಕೆ ಈ ಸ್ಥಳವನ್ನು ಆರಂಭದಲ್ಲಿ ಸೀತೆಮಣಿ ಎಂದು ಕರೆಯಲಾಗುತ್ತಿತ್ತು. ಆದರೆ, ಕಾಲ ಕಾಲಕ್ಕೆ ಜನ ಆಡು ಭಾಷೆಯಲ್ಲಿ ಅನೇಕ ಬದಲಾವಣೆಗಳಾಗಿ ಸೀತೆಮನೆ ಎಂದು ಬದಲಾಯಿತು.
ಅಯೋಧ್ಯೆಗೆ ತೆರಳಿದ ಬಳಿಕವೂ ಗುಪ್ತಚರ ಹೇಳಿದ ಮಾಹಿತಿಯಂತೆ ಶ್ರೀರಾಮ ಸೀತೆಯನ್ನು ಇದೇ ಜಾಗಕ್ಕೆ ವನವಾಸಕ್ಕೆ ಕಳಿಸಿದ್ದ ಎನ್ನಲಾಗಿದೆ. ಆಗ ಲಕ್ಷ್ಮಣ, ಸೀತೆಯನ್ನು ಬಿಟ್ಟು ಹೋಗಿದ್ದು ಇದೇ ಜಾಗದಲ್ಲಿ ಎನ್ನುವ ಪ್ರತೀತಿ ಇದೆ. ಸೀತೆಮನೆಯಲ್ಲಿ ಹೆರಿಗೆ ವೇಳೆ ಸೀತೆ ಸ್ನಾನ ಮಾಡುತ್ತಿದ್ದ ಹೊಂಡವಿದೆ. ಅಚ್ಚರಿಯೇನೆಂದರೆ, ಈ ಹೊಂಡ ವರ್ಷವಿಡೀ ಬತ್ತೋದೇ ಇಲ್ಲ. ಎಷ್ಟೇ ಬರ ಬಿದ್ದರೂ ಹೊಂಡ ಮಾತ್ರ ಬತ್ತುವುದಿಲ್ಲ.
ಇನ್ನೂ ಮಕ್ಕಳಾಗದವರು ಇಲ್ಲಿಗೆ ಆಗಮಿಸಿ ತೊಟ್ಟಿಲು ಕಟ್ಟಿ ಹರಕೆ ಕಟ್ಟಿಕೊಳ್ಳುತ್ತಾರೆ. ಲವ-ಕುಶರಂತಹ ಮಕ್ಕಳನ್ನು ಕೊಡವ್ವ ತಾಯಿ ಎಂದು ಭಕ್ತರು ಬೇಡಿಕೊಳ್ಳುತ್ತಾರೆ. ಇನ್ನು ಸೀತಾ ಮಂದಿರದಲ್ಲಿ ಎರಡು ಮೂರ್ತಿಗಳು ಇವೆ. ಒಮ್ಮೆ ಭಗ್ನಗೊಂಡಿದ್ದ ಮೂರ್ತಿಯನ್ನು ತೆಗೆಯಲು ಹೋದಾಗ ಇಡೀ ಪ್ರದೇಶವೇ ಅಲುಗಾಡಿತ್ತು ಎಂದು ಹೇಳಲಾಗಿದೆ. ಹೀಗಾಗಿ ಆ ಉದ್ಭವ ಮೂರ್ತಿ ಜೊತೆಗೆ ಮತ್ತೊಂದು ಸೀತಾಮಾತೆಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ನೂರಾರು ವರ್ಷಗಳಿಂದ ಹಿರೇಮಠ ಮನೆತನದವರು ಇಲ್ಲಿ ಪೂಜೆ ಮಾಡುತ್ತಾ ಬರುತ್ತಿದ್ದಾರೆ. ಬೇಸರದ ಸಂಗತಿ ಏನೆಂದರೆ ಈ ಸೀತೆಮನೆ ಗ್ರಾಮ ಮಾತ್ರ ಅಭಿವೃದ್ದಿ ಆಗಿಲ್ಲ. ಇಂದಿಗೂ ಸಾಕಷ್ಟು ಮೂಲ ಸೌಕರ್ಯ ಕೊರತೆ ಇಲ್ಲಿ ಎದ್ದು ಕಾಡುತ್ತಿದೆ. ಹೀಗಾಗಿ ಭಕ್ತರಿಗೆ ವಸತಿ ಗೃಹಗಳು, ಸಭಾಭವನ ನಿರ್ಮಾಣ ಹಾಗೂ ದೇಗುಲವನ್ನು ಅಭಿವೃದ್ದಿ ಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪಾಕ್ ಪಂದ್ಯಕ್ಕೂ ಮುನ್ನ ವಾರ್ನರ್ ಗ್ರೀನ್ ಕ್ಯಾಪ್ ಕಳುವು!: ಹುಡುಕಿಕೊಡಲು ಮನವಿ-ಈ ಕ್ಯಾಪ್ಗೇಕೆ ಅಷ್ಟೊಂದು ಮಹತ್ವ?
Ram Mandir: ರಾಮಮಂದಿರವನ್ನು ಯಾವ ಕಲ್ಲಿನಿಂದ ನಿರ್ಮಿಸಲಾಗಿದೆ…ಅದರ ಮೌಲ್ಯ ಎಷ್ಟು ಗೊತ್ತಾ?