ಬೆಂಗಳೂರು: ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಬೇಲಿ ಮತ್ತು ಕಾಂಪೌಂಡ್ ನಿರ್ಮಿಸಲು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರುವುದಕ್ಕೆ ಹಿಂದೂ ಜನಜಾಗೃತಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ವಕ್ಫ್ ಆಸ್ತಿ ಒತ್ತುವರಿ ತಡೆಯಲು ಸರ್ಕಾರ ಬೇಲಿ ಮತ್ತು ಕಾಂಪೌಂಡ್ ನಿರ್ಮಾಣಕ್ಕಾಗಿ 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಇದನ್ನು ಹಿಂಜಸ ರಾಜ್ಯ ವಕ್ತಾರ ಮೋಹನ ಗೌಡ ಖಂಡಿಸಿದ್ದಾರೆ.
ಕಾಂಗ್ರೆಸ್ ಸರಕಾರ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಯ ಹೆಸರಿನಲ್ಲಿ ಬಜೆಟ್ ಖಾಲಿ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಅಲ್ಪಸಂಖ್ಯಾತರ ಕಲ್ಯಾಣ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವೇತನ ಇತ್ಯಾದಿ ಓಲೈಕೆ ಮಾಡುತ್ತಿದ್ದಾರೆ. 2009 ರಲ್ಲಿ ದೇಶದಲ್ಲಿ 4 ಲಕ್ಷ ಎಕರೆ ಇದ್ದ ವಕ್ಫ್ ಆಸ್ತಿ ಸದ್ಯ ಅಕ್ರಮ ಕಬಳಿಕೆಯಿಂದ 8 ಲಕ್ಷ 52 ಸಾವಿರ ಎಕರೆ ಆಗಿದೆ. ಈ ಬಗ್ಗೆ ಪ್ರಕರಣಗಳು ನಡೆಯುತ್ತಿರುವಾಗ ಕಾಂಪೌಂಡ್ ಅಳವಡಿಸುವುದು ತಪ್ಪು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ದೇವಸ್ಥಾನಗಳ ಜಮೀನುಗಳು ಅತಿಕ್ರಮಣವಾಗಿವೆ. ಈ ಬಗ್ಗೆ ಸಮೀಕ್ಷೆ ಮಾಡಿ ಅದರ ರಕ್ಷಣೆಗಾಗಿ ಸರಕಾರ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.