ತುರುವೇಕೆರೆ : ಈ ಬಾರಿಯ ಗ್ರಾಪಂ ಚುನಾವಣೆ ನಡೆದ ರೀತಿ ನೋಡಿದರೆ ಎಂಎಲ್ಎ ಚುನಾವಣೆಗೆ ಹಣ ಎಲ್ಲಿಂದ ತರೋದು ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕ ಗೌರಿಶಂಕರ್, ಈ ಕೆಟ್ಟ ವ್ಯವಸ್ಥೆ ಬದಲಾಗಬೇಕು ಎಂದರು.
ತಾಲೂಕಿನ ಬದರಿಕಾ ಆಶ್ರಮದ ಬಳಿ ಭಾನುವಾರ ಜೆಡಿಎಸ್ ತಾಲೂಕು ಘಟಕ ಹಮ್ಮಿಕೊಂಡಿದ್ದ ಗ್ರಾಪಂ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಣದ ಹೊಳೆ ಹರಿಸಿದ್ದಾರೆೆ. ಎಷ್ಟೋ ಜನ ಸಾಲ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ಹಣ ಎಲ್ಲಿ ತರೋದು ಎನ್ನುವ ಭಯ ಕಾಡುತ್ತಿದೆ. ನಾನು, ಮಾಜಿ ಶಾಸಕ ಕೃಷ್ಣಪ್ಪ ಅವರು ಚುನಾವಣೆಗಾಗಿ ಆಸ್ತಿ ಮಾರಾಟ ಮಾಡಬೇಕಿದೆ ಎಂದರು.
ಕರೊನಾ ಬಂದ ಸಂದರ್ಭದಲ್ಲಿ ಜನರು ಪಟ್ಟಣ ಬಿಟ್ಟು ಹಳ್ಳಿಗಳಿಗೆ ಬಂದು ಸಂಬಂಧಗಳನ್ನು ಬೆಸೆದರು. ಆದರೆ ಗ್ರಾಪಂ ಚುನಾವಣೆಯಲ್ಲಿ ಅದೇ ಸಂಬಂಧಿಗಳು ಸ್ಪರ್ಧಿಸಿ ಸಂಬಂಧಗಳ ಕತ್ತು ಹಿಸುಕಿದರು ಎಂದು ಬೇಸರ ವ್ಯಕ್ತಪಡಿಸಿದರು.
25 ವರ್ಷ ನಾನೇ ಶಾಸಕ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಕುತಂತ್ರ ನಡೆಯಲ್ಲ. ನನ್ನನ್ನು ಜನರು ತೆಗೆಯಬೇಕು ಇಲ್ಲವೇ ದೇವರು ತೆಗೆಯಬೇಕು. ಆದರೆ ಹಣದಿಂದ ತೆಗೆಯಲು ಸಾಧ್ಯವಿಲ್ಲ. ದೇವೇಗೌಡರ ಗರಡಿಯಲ್ಲಿ ಒಳ್ಳೆತನದಲ್ಲಿ ರಾಜಕಾರಣ ಮಾಡುತ್ತೇವೆ. ಕಾರ್ಯಕರ್ತರೇ ಪಕ್ಷದ ಶಕ್ತಿಯಾಗಿದ್ದಾರೆ ಎಂದು ಗೌರಿಶಂಕರ್ ಹೇಳಿದರು.
ಸೋತಿದ್ದೇನೆ ಎಂದು ನಾನು ಮನೆಯಲ್ಲಿ ಕುಳಿತಿಲ್ಲ. ಕಾರ್ಯಕರ್ತರ ಕಷ್ಟ-ಸುಖಗಳಿಗೆ ಜತೆಯಾಗಿದ್ದೇನೆ, ಮೂರು ಸಲ ಶಾಸಕರಾಗಿದ್ದಾರೆಂದು ಈ ಬಾರಿ ಬದಲಾವಣೆ ಮಾಡಿದ್ದಾರೆ. ಆದರೆ ಈಗಾಗಲೇ ಜನರಿಗೂ ಬದಲಾವಣೆ ತಪ್ಪಿನ ಅರಿವಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದ್ದು, ಯಾವುದೇ ಬಂಡವಾಳ ಹಾಕದೇ 309 ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸಂತಸ ವ್ಯಕ್ತಪಡಿಸಿದರು.
ಮುಖಂಡರಾದ ಯೋಗಾನಂದ, ನರಸೇಗೌಡ, ನಂಜೇಗೌಡ, ಧನಪಾಲ್, ರಾಜಶೇಖರ್, ಮೂರ್ತಿ, ಜಗದೀಶ್, ಲೀಲಾವತಿ ಗಿಡ್ಡಯ್ಯ ಇತರರಿದ್ದರು.
ಬಿಜೆಪಿ ಜತೆ ವಿಲಿನವಾಗುತ್ತಿಲ್ಲ: ಎಲ್ಲ ಪಕ್ಷದಲ್ಲಿಯೂ ಗೊಂದಲಗಳು ಇರುವಂತೆ ಜೆಡಿಎಸ್ನಲ್ಲೂ ಸಣ್ಣ-ಪುಟ್ಟ ಗೊಂದಲಗಳಿದ್ದು, ಬಗೆಹರಿಸಿಕೊಳ್ಳುತ್ತೇವೆ, ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗುವುದು ಸುಳ್ಳು ಸುದ್ದಿ, 2023ರ ಸಾರ್ವತ್ರಿಕ ಚುನಾವಣೆಯನ್ನು ಜೆಡಿಎಸ್ ಏಕಾಂಗಿಯಾಗಿ ಎದುರಿಸಲಿದೆ. ಜಿಲ್ಲೆಯಲ್ಲಿ ಮಾಜಿ ಸಚಿವ ಶ್ರೀನಿವಾಸ್ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ 8 ಸೀಟು ಗೆಲ್ಲುವ ವಿಶ್ವಾಸವನ್ನು ಗೌರಿಶಂಕರ್ ವ್ಯಕ್ತಪಡಿಸಿದರು.