More

    ದುರಾಸೆಯ ರೋಗಕ್ಕೆ ಮಿತಿ ಇಲ್ಲ

    ಬಾಗಲಕೋಟೆ: ದೇಶದಲ್ಲಿ ಪ್ರತಿ ಒಂದು ದಶಕದಲ್ಲಿ 500 ರಿಂದ 600 ಹಗರಣಗಳು ನಡೆಯುತ್ತವೆ. ಯುವ ಮನಸ್ಸುಗಳಿಂದ ಇದಕ್ಕೆ ಕಡಿವಾಣ ಹಾಕಲು ಸಾಧ್ಯ. ದುರಾಸೆ ಎನ್ನುವ ರೋಗಕ್ಕೆ ಮಿತಿ ಇಲ್ಲದ ಪರಿಣಾಮ ಇದಕ್ಕೆ ಕಾರಣ. ಸಂತೃಪ್ತಿಯ ಬದುಕು ಅಳವಡಿಸಿಕೊಳ್ಳದೆ ಹೋದಲ್ಲಿ ಹಗರಣಗಳಿಗೆ ಕೊನೆ ಇಲ್ಲದಂತಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಮೃದ್ಧ ಭಾರತ ಕರ್ನಾಟಕ ಬಾಗಲಕೋಟೆ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ, ನೈತಿಕತೆ ಹಾಗೂ ಮಾನವ ಹಕ್ಕುಗಳ ವಿಚಾರಣೆ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

    ದೇಶ ಸ್ವಾತಂತ್ರೃಗೊಂಡಾಗ ಮೊಟ್ಟ ಮೊದಲ ಬಾರಿಗೆ 1950 ರಲ್ಲಿ ಜೀಪ್ ಖರೀದಿಗೆ ಹಗರಣ ನಡೆಯಿತು. ಅದರಲ್ಲಿ 52 ಲಕ್ಷ ರೂ. ಲೆಕ್ಕವಿಲ್ಲದೆ ಹೊರಟು ಹೋಯಿತು. 1960 ದಶಕದಲ್ಲಿ ಭೋಪೋರ್ಸ್ ಹಗರಣ ನಡೆಯಿತು. ಕಾಮಲ್ ವೆಲ್ತ್ ಹಗರಣದಲ್ಲಿ 76 ಸಾವಿರ ಕೋಟಿ ರೂ., 2010 ದಶಕದಲ್ಲಿ 2 ಜಿ ಹಗರಣದಲ್ಲಿ 1 ಲಕ್ಷ 76 ಸಾವಿರ ಕೋಟಿ ರೂ. ಕೊಳ್ಳೆ ಹೊಡೆಯಲಾಯಿತು. ಕಲ್ಲಿದಲು ಹಗರಣದಲ್ಲಿ 1.86ಲಕ್ಷ ಕೋಟಿ ರೂ. ಲೂಟಿ ಮಾಡಲಾಯಿತು. ಹೀಗೆ ಪ್ರತಿಯೊಂದು ದಶಕದಲ್ಲಿ 500 ರಿಂದ 600 ಹಗರಣಗಳು ನಡೆಯುತ್ತಲೇ ಇವೆ. ಅದರಲ್ಲಿ ಕೆಲವು ಬೆಳಕಿಗೆ ಬರುತ್ತವೆ. ಹಲವು ಕಣ್ಮರೆಯಾಗುತ್ತವೆ. ದೆಹಲಿಯಿಂದ ಒಂದು ರೂ. ಬಿಡುಗಡೆ ಮಾಡಿದರೆ ಕಟ್ಟ ಕಡೆ ವ್ಯಕ್ತಿಗೆ 10 ಪೈಸೆ ಮಾತ್ರ ತಲುಪುತ್ತದೆ ಎಂದು 1985 ರಲ್ಲಿ ರಾಜೀವ ಗಾಂಧಿ ಪ್ರಧಾನಿಯಾಗಿದ್ದಾಗ ಸ್ಪಷ್ಟವಾಗಿ ಹೇಳಿದ್ದರು. ಹೀಗಿರುವಾಗ ಸಮೃದ್ಧ ಭಾರತ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ಮಕ್ಕಳಿಗೆ ಮೌಲ್ಯಗಳ ಪಾಠ ಮನೆಯಲ್ಲಿ, ಶಾಲೆಯಲ್ಲಿ ಹೇಳುತ್ತಿಲ್ಲ. ತೃಪ್ತಿಯ ಮೌಲ್ಯಗಳನ್ನು ಬಿತ್ತುವಲ್ಲಿ ವಿಫಲರಾಗಿದ್ದೇವೆ. ಬಾಂಬ್ ಹೇಗೆ ತಯಾರಿ ಮಾಡಬೇಕು ಅಂತ ಹೇಳಿಕೊಡುತ್ತಿದ್ದೇವೆ. ಮಾನವೀಯತೆ ಎನ್ನುವುದು ಹುಟ್ಟಿನಿಂದ ಬರುವುದಿಲ್ಲ. ಅದು ಬದುಕಿನ ಭಾಗವಾಗಬೇಕು. ಕರ್ತವ್ಯ ಮರೆತಿದ್ದೇವೆ. ಪ್ರಯತ್ನಕ್ಕೆ ಫಲ ಬೇಕೇಬೇಕು ಎನ್ನುವ ಮನೋಭಾವ ಇದೆ. ಅದು ಹೇಗೆ ಸಾಧ್ಯ? ಫಲ ಇಲ್ಲದೆ ಸೇವೆ ಇದ್ದಾಗ ಮಾತ್ರ ಮಾದರಿ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಂತೋಷ ಹೆಗ್ಡೆ ಹೇಳಿದರು.

    ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಸಂತೋಷ ಹೆಗ್ಡೆ ಬಾಗಲಕೋಟೆ ಜಿಲ್ಲೆಗೆ ಆಗಮಿಸಿರುವುದು ನನ್ನ ಸೌಭಾಗ್ಯ. ಗಣಿ ಹಗರಣದಲ್ಲಿ ರಾಜ್ಯದ ಮೂರು ಪಕ್ಷದ ಮೂರು ಸಿಎಂಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ವರದಿ ನೀಡಿದ ಏಕೈಕ ಲೋಕಾಯುಕ್ತ ನ್ಯಾಯಮೂರ್ತಿ ಅವರು. 1828 ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ ಉಪನ್ಯಾಸ ನೀಡಿದ್ದಾರೆ. ಸಮೃದ್ಧ ಭಾರತ ಪರಿಕಲ್ಪನೆ ಜಾರಿಯಾಗಬೇಕು ಎನ್ನುವುದು ಅವರ ಆಶಯ. ದಕ್ಷಿಣದ ಕಾವೇರಿಗೆ ಸಿಕ್ಕಷ್ಟೆ ಉತ್ತರದ ಕೃಷ್ಣೆಗೂ ಸಮಾನವಾದ ಅನುದಾನ, ಅವಕಾಶ ದೊರೆಯಬೇಕು. ಅಂದಾಗ ಸಮೃದ್ಧ ಕರ್ನಾಟಕ ಆಗಲು ಸಾಧ್ಯ ಎಂದು ಹೇಳಿದರು.

    ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಮುಖಂಡರಾದ ಎಸ್.ಡಿ.ಜೋಗಿನ, ರಮೇಶ ಬದ್ನೂರ, ಮುತ್ತಪ್ಪ ಕೋಮಾರ, ಸಂತೋಷ ಹೊಕ್ರಾಣಿ, ಎ.ಎ.ದಂಡಿಯಾ, ರಕ್ಷಿತಾ ಭರತಕುಮಾರ ಈಟಿ, ರಾಜು ಮನ್ನಿಕೇರಿ, ವೈ.ವೈ.ತಿಮ್ಮಾಪುರ ಇತರರು ಇದ್ದರು.

    ಸರಿ ಇರೋದನ್ನು ಒಪ್ಪಿಕೊಳ್ಳಿ

    ಸಂವಿಧಾನ ಜಾರಿಗೆ ಬಂದು 70 ವರ್ಷ ಗತಿಸಿವೆ. ಇದುವರೆಗೂ ಅನೇಕ ಕಾಯ್ದೆಗಳು ಸಮರ್ಪವಾಗಿ ಅನುಷ್ಠಾನಗೊಂಡಿಲ್ಲ. ಸಂವಿಧಾನ ಕರಡು ರಚನಾ ಸಮಿತಿ ಸಾಕಷ್ಟು ಚರ್ಚೆ, ಸಭೆ, ಚಿಂತನೆ ನಡೆಸಿ ಕಾಯ್ದೆ ಕಾನೂನು ರೂಪಿಸಿದೆ. ವಿಶ್ವದಲ್ಲಿ ಹಲವು ರಾಜನೀತಿಗಳು ಇದ್ದವು. ಯಾವುದನ್ನು ಸ್ವೀಕರಿಸಬೇಕು ಎನ್ನುವ ಚಿಂತನೆ ಮೊಳಗಿತು. ರಾಜರ ಆಳ್ವಿಕೆ ನೀತಿ, ಪ್ರಜಾಪ್ರಭುತ್ವ, ಸರ್ವಾಧಿಕಾರಿ, ಧರ್ಮ ಆಧಾರಿತ ಆಡಳಿತ ಸೇರಿ ಅನೇಕ ವಿಚಾರಗಳು ಮುಂದಿದ್ದವು. ಕೊನೆಗೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವ ತತ್ವದಡಿ ಪ್ರಜಾಪ್ರಭುತ್ವ ಆಡಳಿತ ರೂಪಿಸಲಾಯಿತು. ನಂತರದಲ್ಲಿ ಮತದಾನ, ಚುನಾವಣೆಯ ಸ್ಪರ್ಧೆ ಮುನ್ನೆಲೆಗೆ ಬಂದಿತು. ವಿದ್ಯಾವಂತರಿಗೆ ಮಾತ್ರ ಎನ್ನುವ ಕೂಗು ಕೇಳಿ ಬಂದಿತು. ಆದರೆ, ಅಂದು ಭಾರತದಲ್ಲಿ ಶೇ.20 ರಷ್ಟು ಜನ ಮಾತ್ರ ವಿದ್ಯಾವಂತರು ಇದ್ದರು. ಇದಕ್ಕೆ ವಿರೋಧ ವ್ಯಕ್ತವಾಯಿತು. ಒಂದು ವರ್ಗ, ಗುಂಪಿಗೆ ಸೀಮಿತವಾಗಬಾರದು ಎನ್ನುವ ಉದ್ದೇಶದಿಂದ ಸಮಾನವಾದ ಅವಕಾಶ ನೀಡಲಾಯಿತು. ಸರಿ ಇರುವುದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಸಂತೋಷ ಹೆಗ್ಡೆ ತಿಳಿಸಿದರು.

    ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಜಾರಿಗೊಂಡ ಬಳಿಕ ಮಹಿಳೆಯರ ಬದುಕಿನಲ್ಲಿ ಬಹಳಷ್ಟು ಬದಲಾವಣೆಯಾಯಿತು. ಶಿಕ್ಷಣ, ಸಾಮಾಜಿಕ ಸ್ಥಾನ ಅವಕಾಶ ಸಿಕ್ಕಿತು. ಆದರೂ ಪರಿಪೂರ್ಣವಾಗಿಲ್ಲ. ಕೆಳ ವರ್ಗದ ಹೆಣ್ಣು ಮಕ್ಕಳು ಇಂದಿಗೂ ಅವಕಾಶ ವಂಚಿತರಾಗಿದ್ದಾರೆ. ಆರ್ಥಿಕ ಸಮಾನತೆಯಲ್ಲಿ ಸ್ತ್ರೀಯರಿಗೆ ಅನ್ಯಾಯ ಮುಂದುವರಿದಿದೆ.
    ಮಲ್ಲಿಕಾ ಘಂಟಿ, ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts