More

    ಅಷ್ಟೇ ಎಲ್ಲವೂ ಮುಗಿದ ಕತೆ, ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತೇನೆ… ಕಣ್ಣೀರಿಟ್ಟ ಆರ್​ಸಿಬಿ ಆಟಗಾರ​! ವಿಡಿಯೋ ವೈರಲ್​

    ನವದೆಹಲಿ: ಸತತ 6 ಗೆಲುವುಗಳೊಂದಿಗೆ ಎಲ್ಲರ ನಿರೀಕ್ಷೆಯನ್ನು ಮೀರಿಸಿ ಐಪಿಎಲ್ ಪ್ಲೇಆಫ್ ಹಂತಕ್ಕೇರಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ಸತತ 17ನೇ ಪ್ರಯತ್ನದಲ್ಲೂ ಕಪ್ ಗೆಲುವಿನ ಕನಸು ನನಸಾಗಿಸಲು ವಿಫಲವಾಗಿದೆ. ನಿನ್ನೆ (ಮೇ 22) ರಾಜಸ್ಥಾನ ರಾಯಲ್ಸ್​​​ ವಿರುದ್ಧ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ 4 ವಿಕೆಟ್​ಗಳಿಂದ ಸೋಲು ಅನುಭವಿಸಿ ಅಭಿಯಾನ ಮುಗಿಸಿದೆ. ಇದರ ನಡುವೆ ಆರ್​ಸಿಬಿ ಆಟಗಾರ ಸ್ವಪ್ನಿಲ್​ ಸಿಂಗ್​ ನಿವೃತ್ತಿ ಬಗ್ಗೆ ಮಾತನಾಡಿದ ವಿಡಿಯೋವೊಂದು ವೈರಲ್​ ಆಗುತ್ತಿದೆ.

    ಆರ್​ಸಿಬಿ ಪಾಲಿನ ಲಕ್ಕಿ ಚಾರ್ಮ್​ ಎನಿಸಿಕೊಂಡಿದ್ದ ಸ್ವಪ್ನಿಲ್​ ಸಿಂಗ್​ ನೋವಿನ ಮಾತುಗಳನ್ನಾಡಿದ್ದಾರೆ. ಕ್ರಿಕೆಟ್​ಗೆ ಗುಡ್​ ಬೈ ಹೇಳಲು ನಿರ್ಧರಿಸಿದ್ದೆ ಎಂದಿದ್ದಾರೆ. 2016ರಲ್ಲಿ ಸ್ವಪ್ನಿಲ್​ ಸಿಂಗ್​ ಪಡೆದ ಮೊದಲ ವಿಕೆಟ್​ ಎಂ.ಎಸ್​. ಧೋನಿ ಅವರದ್ದಾಗಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಪರ ಅದ್ಭುತ ಪ್ರದರ್ಶನ ನೀಡಿದ ಬಳಿಕ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡ ಮೊಟ್ಟ ಮೊದಲು ಸ್ವಪ್ನಿಲ್​ ಸಿಂಗ್​ ಅವರನ್ನು ಖರೀದಿ ಮಾಡಿತ್ತು. ಅಲ್ಲಿಂದ ಸ್ವಪ್ನಿಲ್​ ಕನಸು ಆರಂಭವಾಯಿತು. ಆದರೆ, ಆ ಕನಸು ಶೀಘ್ರದಲ್ಲೇ ಹುಸಿಯಾಯಿತು. ಏಕೆಂದರೆ, ಸ್ವಪ್ನಿಲ್​ ವೃತ್ತಿಜೀವನವು ಐಪಿಎಲ್‌ನಲ್ಲಿ ಎಂದಿಗೂ ಟೇಕಾಫ್​ ಆಗಲಿಲ್ಲ. ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಇದ್ದಾಗಲೂ ಬೆಂಚುಗಳನ್ನು ಕಾಯಿಸಲಾಗಿತ್ತು.

    2023ರ ಐಪಿಎಲ್​ ಹರಾಜಿನಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡ ಸ್ವಪ್ನಿಲ್​ ಅವರನ್ನು ಖರೀದಿ ಮಾಡಿತು. ಆದರೆ, ಎರಡು ಪಂದ್ಯಗಳಲ್ಲಿ ಮಾತ್ರ ಅವರನ್ನು ಆಡಿಸಲಾಯಿತು. ಆದರೆ, ಅವರ ಬೌಲಿಂಗ್​ನಿಂದ ಯಾವುದೇ ವಿಕೆಟ್​ ಬೀಳಲಿಲ್ಲ. ಎಲ್​ಎಸ್​ಜಿ ಅವರನ್ನು ಬಿಡುಗಡೆ ಮಾಡಿದ ಬಳಿಕ ನಿವೃತ್ತಿ ಪಡೆಯಲು ಬಯಸಿದ್ದರು. ಆದರೆ, ನಂತರ ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ತಂಡ ಅವರನ್ನು ಖರೀದಿ ಮಾಡಿತು. ನನ್ನ ಕುಟುಂಬ ಮತ್ತು ನನಗೆ ಇದು ಭಾವಕ ಕ್ಷಣವಾಗಿತ್ತು ಎಂದು ಸ್ವಪ್ನಿಲ್​ ಸಿಂಗ್​ ಹೇಳಿದ್ದಾರೆ.

    ಐಪಿಎಲ್ ಹರಾಜಿನ ದಿನ ನಾನು ಪಂದ್ಯವೊಂದಕ್ಕಾಗಿ ಧರ್ಮಶಾಲಾಗೆ ಪ್ರಯಾಣಿಸುತ್ತಿದ್ದೆ. ನಾನು ಇಳಿದ ನಂತರ ಸುಮಾರು 7-8 ಗಂಟೆಯಾಗಿತ್ತು. ಅಲ್ಲಿಯವರೆಗೆ ಏನೂ ಆಗಿರಲಿಲ್ಲ ಮತ್ತು ಕೊನೆಯ ಸುತ್ತುಗಳು ನಡೆಯುತ್ತಿದ್ದವು. ನಾನು ಮೊದಲ ಸುತ್ತಿನಲ್ಲಿ ತಪ್ಪಿಸಿಕೊಂಡಾಗ, ಅಷ್ಟೇ, ಇಲ್ಲಿಗೆ ಎಲ್ಲವು ಮುಗಿಯಿತು ಎಂದು ಭಾವಿಸಿದೆ ಎಂದು ಸ್ವಪ್ನಿಲ್​

    ಆಗ ನಡೆಯುತ್ತಿದ್ದ ದೇಶೀಯ ಪಂದ್ಯಗಳಲ್ಲಿ ಆಡುತ್ತಿದ್ದೆ ಮತ್ತು ಅಗತ್ಯವಿದ್ದರೆ ಮುಂದಿನ ಋತುವಿನಲ್ಲಿ ಆಡಿದ ಬಳಿಕ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ನಿರ್ಧರಿಸಿದ್ದೆ. ನಾನು ನನ್ನ ಜೀವನದುದ್ದಕ್ಕೂ ಆಟವಾಡಲು ಬಯಸುವುದಿಲ್ಲ. ಜೀವನದಲ್ಲಿ ಉತ್ತಮವಾಗಿ ಮಾಡಲು ಇತರ ವಿಷಯಗಳಿವೆ. ನಾನು ತುಂಬಾ ನಿರಾಶೆಗೊಂಡಿದ್ದೇನೆ ಎಂದು ಸ್ವಪ್ನಿಲ್ ಆರ್‌ಸಿಬಿ ಬೋಲ್ಡ್ ಡೈರೀಸ್‌ಗೆ ತಿಳಿಸಿದ್ದರು. ಇದೀಗ ಆರ್​ಸಿಬಿ ಸೋಲಿನ ಬೆನ್ನಲ್ಲೇ ಸ್ವಪ್ನಿಲ್​ ನಿರಾಶೆಗೊಂಡಿದ್ದು ಅವರ ವಿಡಿಯೋ ಮತ್ತೊಮ್ಮೆ ವೈರಲ್​ ಆಗಿದೆ.

    ಅಂದಹಾಗೆ ಸ್ವಪ್ನಿಲ್ 8.8ರ ಎಕನಾಮಿಯಲ್ಲಿ ಹಲವು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಆರ್​ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಹರಾಜಿಗೂ ಮುಂಚೆ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸ್ವಪ್ನಿಲ್ ಈ ಹಿಂದೆ ನೆಟ್ ಬೌಲರ್ ಆಗಿ ಫ್ಲವರ್ ಅವರನ್ನು ಮೆಚ್ಚಿಸಿದ್ದರು ಮತ್ತು ಕೋಚ್ ಅವರನ್ನು ಆರ್​ಸಿಬಿ ತರಬೇತಿ ಶಿಬಿರಕ್ಕೆ ಬರುವಂತೆ ಕೇಳಿಕೊಂಡಿದ್ದರು. ಆರ್‌ಸಿಬಿ ನನ್ನನ್ನು ಹರಾಜಿನಲ್ಲಿ ಆಯ್ಕೆ ಮಾಡುವ ಮೊದಲು, ಅವರು ಟ್ರಯಲ್-ಕಮ್-ಕ್ಯಾಂಪ್ ಅನ್ನು ಆಯೋಜಿಸಿದ್ದರು. ನಾನು ಆಂಡಿ ಸರ್ ಜೊತೆ ಮಾತನಾಡಿದೆ ಮತ್ತು ನನ್ನ ದೇಶೀಯ ಸೀಸನ್ ಹೇಗೆ ಹೋಗಿದೆ ಎಂಬುದರ ಬಗ್ಗೆ ಹೇಳಿದೆ ಮತ್ತು ನನಗೆ ಒಂದು ಅವಕಾಶ ಕೊಡಿ. ಇದು ನನ್ನ ಕೊನೆಯ ಅವಕಾಶವಾಗಿರಬಹುದು. ನನ್ನ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದೆ. ಅವರು ನನ್ನನ್ನು ಕ್ಯಾಂಪ್​ಗೆ ಕರೆದರು ಎಂದು ಸ್ವಪ್ನಿಲ್ ಹೇಳಿದರು.

    ಅಂತಿಮವಾಗಿ ಸ್ವಪ್ನಿಲ್​ಗೆ ಆರ್​ಸಿಬಿಯಲ್ಲಿ ಅವಕಾಶ ಸಿಕ್ಕಿತು. ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಯಶಸ್ಸು ಗಳಿಸಿದರು. ಅಲ್ಲದೆ, ಸ್ವಪ್ನಿಲ್​ ಆಡುವ ಹನ್ನೊಂದರ ಬಳಗ ಸೇರಿದ ಬಳಿಕ ಆರ್​ಸಿಬಿ ಸತತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಆದರೆ, ಎಲಿಮಿನೇಟರ್​ ಪಂದ್ಯದಲ್ಲಿ ಎಡವಿದ್ದು, ಸ್ವಪ್ನಿಲ್​ ಸಿಂಗ್​ ತುಂಬಾ ಬೇಸರಗೊಂಡಿದ್ದಾರೆ. ಇದರ ನಡುವೆಯೇ ಅವರು ನಿವೃತ್ತಿ ಬಗ್ಗೆ ಮಾತನಾಡಿದ್ದ ವಿಡಿಯೋ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

    ಆರ್​ಸಿಬಿ ಕಪ್ ಕನಸು ಭಗ್ನ: ಹೊಸ ಅಧ್ಯಾಯದಲ್ಲೂ ಒಲಿಯದ ಪ್ರಶಸ್ತಿ, ಎಲಿಮಿನೇಟರ್ ಗೆದ್ದ ರಾಜಸ್ಥಾನ

    ಮಗಳ ಮೂಲಕ ಶಾಲಾ ಬಾಲಕಿಯರಿಗೆ ಗಾಳ ಹಾಕಿ ವೇಶ್ಯಾವಾಟಿಕೆ! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts