ಅಹಮದಾಬಾದ್: ಕೇವಲ ಶೇ. 1 ಚಾನ್ಸ್ ಇದ್ದಾಗಲೂ ಎಲ್ಲರ ನಿರೀಕ್ಷೆ ಮೀರಿಸಿ ಐಪಿಎಲ್ ಪ್ಲೇಆಫ್ ಹಂತಕ್ಕೇರಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 17ನೇ ಪ್ರಯತ್ನದಲ್ಲೂ ಕಪ್ ಗೆಲುವಿನ ಕನಸು ನನಸಾಗಿಸಲು ವಿಫಲವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಸರ್ವಾಂಗೀಣ ನಿರ್ವಹಣೆ ಎದುರು ಮಂಕಾದ ಆರ್ಸಿಬಿ ತಂಡ ಐಪಿಎಲ್-17ರ ಎಲಿಮಿನೇಟರ್ನಲ್ಲಿ 4 ವಿಕೆಟ್ಗಳಿಂದ ಸೋಲು ಅನುಭವಿಸಿ ಅಭಿಯಾನ ಮುಗಿಸಿದೆ. ಇದರೊಂದಿಗೆ ಹೊಸ ಅಧ್ಯಾಯದಲ್ಲೂ ಆರ್ಸಿಬಿಗೆ ಕಪ್ ಕೈಗೆಟುಕಲಿಲ್ಲ. ಸಂಜು ಸ್ಯಾಮ್ಸನ್ ಪಡೆ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದಿದ್ದು, ಪ್ರಶಸ್ತಿ ಸುತ್ತಿಗೇರಲು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ, ನಿರಂತರ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್),ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್ನೊಂದಿಗೆ 8 ವಿಕೆಟ್ಗೆ 172 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿ ಯುತ ಬ್ಯಾಟಿಂಗ್ ನೆರವಿನಿಂದ 19 ಓವರ್ಗಳಲ್ಲಿ 6 ವಿಕೆಟ್ಗೆ 174 ರನ್ಗಳಿಸಿ ರೋಚಕ ಗೆಲುವು ಕಂಡಿತು.
ಆರ್ಸಿಬಿ ಉತ್ತಮ ಆರಂಭ
ಫಾಫ್ ಡು ಪ್ಲೆಸಿಸ್ (17) ಹಾಗೂ ವಿರಾಟ್ ಕೊಹ್ಲಿ (33) ಆರಂಭದಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. ಮೊದಲ 3 ಓವರ್ಗಳಲ್ಲಿ ಇವರಿಬ್ಬರು 17 ರನ್ ಕಸಿದು ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. 4ನೇ ಓವರ್ನಲ್ಲಿ 17 ರನ್ ಕಸಿದು ರನ್ಗಳಿಕೆಗೆ ಒತ್ತು ನೀಡಿದರು. ಕೊಹ್ಲಿ-ಪ್ಲೆಸಿಸ್ ಮೊದಲ ವಿಕೆಟ್ಗೆ 28 ಎಸೆತಗಳಲ್ಲಿ 37 ರನ್ಗಳಿಸಿದರು. ಬೌಲ್ಟ್ ಎಸೆದ ಇನಿಂಗ್ಸ್ ನ 5ನೇ ಓವರ್ನಲ್ಲಿ ಪ್ಲೆಸಿಸ್, ಡೀಪ್ ಮಿಡ್ ವಿಕೆಟ್ನಲ್ಲಿ ಪೊವೆಲ್ ಪಡೆದ ಕ್ಯಾಚ್ಗೆ ಡಗೌಟ್ ಸೇರಿದರು. ಸತತ 6 ಪಂದ್ಯಗಳಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಆರ್ಸಿಬಿ ಈ ಬಾರಿ ಕ್ಯಾಮರಾನ್ ಗ್ರೀನ್ಗೆ (27) ಬಡ್ತಿ ನೀಡಿತು. 2ನೇ ವಿಕೆಟ್ಗೆ ಜತೆಯಾದ ಗ್ರೀನ್ 16 ಎಸೆತಗಳಲ್ಲಿ 19 ರನ್ಗಳಿಸಿದರು. ಆಗ ದಾಳಿಗಿಳಿದ ಆರ್ಸಿಬಿಯ ಮಾಜಿ ಸ್ಪಿನ್ನರ್ಚಾಹಲ್, ಕೊಹ್ಲಿ ವಿಕೆಟ್ ಪಡೆದು ರಾಜಸ್ಥಾನಕ್ಕೆ ಮೇಲುಗೈ ತಂದರು.
ಮೊತ್ತ ಏರಿಸಿದ ಮಹಿಪಾಲ್ ಲೊಮ್ರೊರ್
15 ಓವರ್ಗಳಲ್ಲಿ 125 ರನ್ಗಳಿಸಿದ ಆರ್ಸಿಬಿ ಸಾಧಾರಣ ಮೊತ್ತದತ್ತ ಸಾಗಿತು. ಆಗ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೊಮ್ರೊರ್ ಏಕಾಂಗಿಯಾಗಿ ತಂಡದ ಮೊತ್ತ ಏರಿಸಿ ಆಸರೆಯಾದರು. ಹಾಲಿ ಆವೃತ್ತಿಯಲ್ಲಿ ಆರ್ಸಿಬಿ ಪಾಲಿಗೆ ಫಿನಿಷರ್ ಆಗಿದ್ದ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ (11) ಸಹ ವೈಫಲ್ಯ ಕಂಡರು. ಆದರೂ 6ನೇ ವಿಕೆಟ್ಗೆ ಮಹಿಪಾಲ್ ಜತೆಯಾಗಿ 24 ಎಸೆತಗಳಲ್ಲಿ 32 ರನ್ ಕಸಿಯಲು ಸಾಥ್ ನೀಡಿದರು. ಆಗ 19ನೇ ಓವರ್ನಲ್ಲಿ ಇವರಿಬ್ಬರ ವಿಕೆಟ್ ಪಡೆದ ಆವೇಶ್ ಖಾನ್ (43ಕ್ಕೆ 3) ಆರ್ಸಿಬಿ ಪಾಲಿಗೆ ಕಂಟಕವಾದರು. ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಸ್ವಪ್ನಿಲ್ ಸಿಂಗ್ (9*) ಹಾಗೂ ಕರ್ಣ್ ಶರ್ಮ (5*) ಸೇರಿ 170ರ ಗಡಿ ದಾಟಿಸಿದರು.
ರಾಯಲ್ಸ್ಗೆ ಜೈಸ್ವಾಲ್ ಬುನಾದಿ
ಚೇಸಿಂಗ್ಗೆ ಇಳಿದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ಟಾಮ್ ಕೊಹ್ಲರ್ ಕ್ಯಾಡ್ಮೋರ್ (20) ಉತ್ತಮ ಅಡಿಪಾಯ ಹಾಕಿಕೊಟ್ಟರು. ಆರಂಭಿಕ 3 ಓವರ್ಗಳಲ್ಲಿ ಶಿಸ್ತಿನ ದಾಳಿ ನಡೆಸಿದ ಆರ್ಸಿಬಿ ಪವರ್ ಪ್ಲೇನಲ್ಲಿ ಹೆಚ್ಚು ರನ್ ಬಿಟ್ಟುಕೊಡಲಿಲ್ಲ. ಇವರಿಬ್ಬರು ಮೊದಲ ವಿಕೆಟ್ಗೆ 33 ಎಸೆತದಲ್ಲಿ 46 ರನ್ ಪೇರಿಸಿತು. ಇನಿಂಗ್ಸ್ನ 4ನೇ ಓವರ್ನಲ್ಲಿ ಮ್ಯಾಕ್ಸ್ವೆಲ್, ಕ್ಯಾಡ್ವೋರ್ ಕ್ಯಾಚ್ ಕೈ ಚೆಲ್ಲಿದರು. ಮರು ಓವರ್ನಲ್ಲಿ ಲಾಕಿ ಫರ್ಗ್ಯುಸನ್ ಅವರನ್ನು ಬೌಲ್ಡ್ ಮಾಡಿದರು. ಬಳಿಕ ಜೈಸ್ವಾಲ್ ಜತೆಯಾದ ನಾಯಕ ಸಂಜು ಸ್ಯಾಮ್ಸನ್ (17) ಎರಡನೇ ವಿಕೆಟ್ಗೆ 23 ಎಸೆತದಲ್ಲಿ 35 ರನ್ಗಳಿಸಿ ಚೇಸಿಂಗ್ಗೆ ಬಲ ತುಂಬಿದರು. ಜೋಡಿ ಸವಾಲಾಗುತ್ತಿದ್ದಂತೆ ದಾಳಿಗಿಳಿದ ಕ್ಯಾಮರಾನ್ ಗ್ರೀನ್, ಜೈಸ್ವಾಲ್ ವಿಕೆಟ್ ಪಡೆದರೆ, ಮರು ಓವರ್ನಲ್ಲಿ ಸ್ಯಾಮ್ಸನ್ ಸ್ಟಂಪ್ ಔಟ್ ಆದರು. ಇದರೊಂದಿಗೆ ಆರ್ಸಿಬಿ ಕಂಬ್ಯಾಕ್ ಸೂಚನೆ ನೀಡಿತು.
ಆರ್ಆರ್ ಚೇಸಿಂಗ್ಗೆ ಪರಾಗ್-ಹೆಟ್ಮೆಯರ್ ಬಲ
4ನೇ ವಿಕೆಟ್ಗೆ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜತೆಯಾದ ಧ್ರುವ ಜುರೆಲ್ (8) ಕೆಲ ಹೊತ್ತು ಆಸರೆಯಾದರು. ಇವರಿಬ್ಬರು 19 ಎಸೆತಗಳಲ್ಲಿ 26 ರನ್ಗಳಿಸಿ ಆರ್ಸಿಬಿಗೆ ಒತ್ತಡ ಹೇರಿದರೂ, ಜುರೆಲ್ ರನೌಟ್ ಆದರು. ಆಗ ಪರಾಗ್ ಜತೆಗೂಡಿದ ಇಂಪ್ಯಾಕ್ಟ್ ಪ್ಲೇಯರ್ ಶಿಮ್ರೊನ್ ಹೆಟ್ಮೆಯರ್ (26 ರನ್, 14 ಎಸೆತ, 3 ಬೌಂಡರಿ, 1 ಎಸೆತ) ಚೇಸಿಂಗ್ ಸುಲಭಗೊಳಿಸಿದರು. 25 ಎಸೆತಗಳಲ್ಲಿ 45 ರನ್ ಕಸಿದ ಇವರಿಬ್ಬರು ಆರ್ಸಿಬಿ ಬೌಲರ್ಗಳನ್ನು ದಂಡಿಸಿದರು. ಇನಿಂಗ್ಸ್ನ 18ನೇ ಓವರ್ ಎಸೆದ ಮೊಹಮದ್ ಸಿರಾಜ್ (33ಕ್ಕೆ 2), ಪರಾಗ್, ಹೆಟ್ಮೆಯರ್ ವಿಕೆಟ್ ಪಡೆದು ತಿರುವ ನೀಡಲು ಯತ್ನಿಸಿದರು. ಆದರೆ ಅಂತಿಮ 2 ಓವರ್ನಲ್ಲಿ 13 ರನ್ ಬೇಕಿದ್ದಾಗ ಲಾಕಿ ಫರ್ಗ್ಯುಸನ್ಗೆ 2 ಬೌಂಡರಿ, ಸಿಕ್ಸರ್ ಸಿಡಿಸಿದ ರೋವ್ಮನ್ ಪೊವೆಲ್ (16*) ಕೊನೇ ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.
ಅಶ್ವಿನ್ ಡಬಲ್ ಶಾಕ್
ಕೊಹ್ಲಿ ನಿರ್ಗಮನದ ಬಳಿಕ ಜತೆಯಾದ ಕ್ಯಾಮರಾನ್ ಗ್ರೀನ್ ಹಾಗೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್) ಸ್ಪಿನ್ನರ್ಗಳ ಶಿಸ್ತಿನ ದಾಳಿಯ ಎದುರು ರನ್ಗಳಿಸಲು ಪರದಾಡಿದರು. ಆರ್ಸಿಬಿ 10 ಓವರ್ಗಳಲ್ಲಿ 2 ವಿಕೆಟ್ಗೆ 76 ರನ್ ಸಾಧಾರಣ ಮೊತ್ತ ಕಲೆಹಾಕಿತು. ನಿಧಾನವಾಗಿ ಲಯ ಕಂಡುಕೊಂಡ ಪಾಟೀದಾರ್ ಹಾಗೂ ಗ್ರೀನ್ 3ನೇ ವಿಕೆಟ್ಗೆ 31 ಎಸೆತಗಳಲ್ಲಿ 41 ರನ್ ಕಸಿಯಿತು. 11ನೇ ಓವರ್ನಲ್ಲಿ ಪಾಟೀದಾರ್ ಅವರ ಸುಲಭ ಕ್ಯಾಚ್ ಅನ್ನು ಲಾಂಗ್ ಆನ್ನಲ್ಲಿ ಜುರೆಲ್ ಕೈ ಚೆಲ್ಲಿದರು. ಆರ್ಆರ್ ಬೌಲರ್ಗಳಿಗೆ ಈ ಜೋಡಿ ಸವಾಲಾಗುವ ಮುನ್ನ ಅನುಭವಿ ಆರ್.ಅಶ್ವಿನ್ (19ಕ್ಕೆ 2) ಈ ಜತೆಯಾಟ ಮುರಿದರು. 13ನೇ ಓವರ್ನ ಸತತ ಎಸೆತದಲ್ಲಿ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್ (0) ಡಗೌಟ್ ಸೇರಿದರು. ಉತ್ತಮ ಆರಂಭ ಪಡೆದ ಪಾಟೀದಾರ್, ಆವೇಶ್ ಖಾನ್ಗೆ ವಿಕೆಟ್ ನೀಡಿ ನಿರಾಸೆ ಮೂಡಿಸಿದರು.
ಚರ್ಚೆಗೆ ಗ್ರಾಸವಾದ ತೀರ್ಪು
ಆವೇಶ್ ಖಾನ್ ಎಸೆದ ಇನಿಂಗ್ಸ್ನ 14ನೇ ಓವರ್ 3ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಎಲ್ಬಿಡಬ್ಲ್ಯು ಆದರು. ಆನ್ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಸ್ವತ ಕಾರ್ತಿಕ್ ಸಹ ಅರೆ ಮನಸ್ಸಿನಿಂದ ಡಿಆರ್ಎಸ್ ಮೊರೆ ಹೋದರು. ಆಗ 3ನೇ ಅಂಪೈರ್, ಚೆಂಡು ಬ್ಯಾಟ್ಗೆ ಮೊದಲು ತಾಗಿದೆ ಎಂದು ನಾಟೌಟ್ ತೀರ್ಪಿತ್ತರು. ಇದು ಆಟಗಾರರಿಗೂ ಆಶ್ಚರ್ಯ ಉಂಟು ಮಾಡಿತು. ಈ ತೀರ್ಪಿನ ಬೆನ್ನಲ್ಲೆ ಮಾಜಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಬ್ಯಾಟ್ ಪ್ಯಾಡ್ಗೆ ಬಡಿದಾಗ ಅಲ್ಟ್ರಾ ಎಡ್ಜ್ನಲ್ಲಿ ಕಾಣಿಸಿಕೊಂಡ ಸ್ಪೈಕ್ಅನ್ನೇ ತೃತೀಯ ಅಂಪೈರ್, ಚೆಂಡು ಬ್ಯಾಟ್ಗೆ ತಾಗಿದಾಗ ಬಂದ ಸ್ಪೈಕ್ ಎಂದು ತಪ್ಪಾಗಿ ಗ್ರಹಿಸಿ ನಾಟೌಟ್ ತೀರ್ಪು ನೀಡಿದರು ಎಂದು ದೂರಿದ್ದಾರೆ.
ಮಗಳ ಮೂಲಕ ಶಾಲಾ ಬಾಲಕಿಯರಿಗೆ ಗಾಳ ಹಾಕಿ ವೇಶ್ಯಾವಾಟಿಕೆ! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು