ಚೆನೈ:ಸಮಾಜ ಸೇವೆ ಮಾಡಲು ತಮಿಳು ನಟರು ಸದಾ ಮುಂದೆ ಇರುತ್ತಾರೆ. ಎಂಜಿಆರ್, ರಜನಿಕಾಂತ್ ರಿಂದ ಹಿಡಿದು ಇಂದಿನ ಬಹುತೇಕ ಎಲ್ಲಾ ತಮಿಳು ಸ್ಟಾರ್ ನಟರದ್ದು ಕೊಡು ಗೈ ಎಂದೇ ಹೇಳಬೇಕು. ದಳಪತಿ ವಿಜಯ್ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಅನೇಕ ರೀತಿಗಳಲ್ಲಿ ಸಹಾಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರ ಒಂದು ಕೆಲಸದಿಂದ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ಹೌದು, ನಟ ವಿಜಯ್ ತಮ್ಮ ಅಭಿಮಾನಿಗಳ ಸಂಘ ‘ವಿಜಯ್ ಮಕ್ಕಳ್ ಇಯಕ್ಕಂ‘ ಮೂಲಕ ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ, ಇದೀಗ ದಳಪತಿ ವಿಜಯ್ ನಿರ್ಗತಿಕರಿಗೆ, ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಶಾಲೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಕುರಿತ ಸುದ್ದಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ. ವಿಜಯ್ ಚೆನೈನ ತಿರುಪೋರೂರಿನಲ್ಲಿ ಶಾಲೆಯನ್ನು ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ. ಶ್ರೀಘ್ರದಲ್ಲೇ ವಿಜಯ್ ಅವರು ಈ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ. ತಮ್ಮ ಉಚಿತ ಹೋಟೆಲ್ ಮೂಲಕ ಬಡವರಿಗೆ ಊಟವನ್ನು ಕೊಡಿಸುತ್ತಿರುವ ನಟ ವಿಜಯ್, ಈಗ ಉಚಿತವಾಗಿ ಶಿಕ್ಷಣ ಕೊಡಲು ಸಹ ಮುಂದಾಗಿದ್ದಾರೆ. ಇದಕ್ಕೆ, ನಟನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ, ಮತ್ತೊಂದೆಡೆ ನಟ ವಿಜಯ್ ಇದನ್ನೆಲ್ಲಾ ನಟ ಸೂರ್ಯ ಅವರಿಗೆ ಪೈಪೊಟಿಯಾಗಿ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಅಂದಹಾಗೆ,ನಟ ಸೂರ್ಯ ಸೇವಾಕಾರ್ಯಗಳಲ್ಲಿ ಇತರ ನಾಯಕ ನಟರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಪತ್ನಿ ಜ್ಯೋತಿಕಾ, ತಮ್ಮ ನಟ ಕಾರ್ತಿ ಜೊತೆ ಸೇರಿ ‘ಅಗರಂ‘ ಫೌಂಡೇಶನ್ ಸ್ಥಾಪಿಸಿದ್ದಾರೆ. ತಮ್ಮ ಫೌಂಡೇಶನ್ ಮೂಲಕ ಹಿಂದುಳಿದ ಪ್ರದೇಶಗಳಲ್ಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದೊಡ್ಡಮಟ್ಟದಲ್ಲಿ ಶ್ರಮಿಸುತ್ತಿದ್ದಾರೆ. ಅದರ ಜೊತೆಗೆ ತಮಿಳಿನಾಡಿನಲ್ಲಿ 400ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲೇ, ನಟ ವಿಜಯ್ ಅವರ ಮಾಸ್ ಸಿನಿಮಾಗಳಿಗೂ ಮತ್ತು ಸೂರ್ಯನ ವಿಭಿನ್ನ ಚಿತ್ರಗಳಿಗೂ ಪೈಪೊಟಿ ಎಂಬ ವಿಚಾರ ತಿಳಿದಿದೆ. ಹೀಗಾಗಿ, ಕೇವಲ ಸಿನಿಮಾಗಳಲ್ಲಿ ಮಾತ್ರ ಅಲ್ಲದೇ, ತಮ್ಮ ಸೇವಾಕಾರ್ಯಗಳ ಮೂಲಕ ಕೂಡ ತಮಿಳು ಚಿತ್ರರಂಗದಲ್ಲಿ ವಿಜಯ್ ಮತ್ತು ಸೂರ್ಯ ಒಬ್ಬರ ಮೇಲೊಬ್ಬರು ನಂಬರ್ 1 ಪಟ್ಟಕ್ಕೆ ಕಾಂಪಿಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.