ನವದೆಹಲಿ: ಜಗತ್ತಿನಾದ್ಯಂತ ದಾಂಗುಡಿ ಇಟ್ಟಿರುವ ಕರೊನಾ ಹಾವಳಿಗೆ ನಿಯಂತ್ರಣ ಹೇರಲು, ಸಂಕಷ್ಟದಲ್ಲಿರುವ ಸೋಂಕಿತರಿಗೆ ನೆರವಾಗಲು ಇದೀಗ ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡುಲ್ಕರ್ ಕೈಜೋಡಿಸಿದ್ದಾರೆ. ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುವ ಕರೊನಾ ಸೋಂಕಿತರಿಗೆ ಆಮ್ಲಜನಕ ಪೂರೈಸುವ ಸಲುವಾಗಿ ತೆಂಡುಲ್ಕರ್ ಒಂದು ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ.
ಈ ಬಗ್ಗೆ ಅವರೇ ಖುದ್ದು ಹೇಳಿಕೊಂಡಿದ್ದು, ಇದಲ್ಲದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಜತೆಗೂಡುವುದಾಗಿಯೂ ತಿಳಿಸಿದ್ದಾರೆ. ಅಂದರೆ ತಾವು ಒಮ್ಮೆ ಅರ್ಹ ಎನಿಸಿಕೊಂಡ ಬಳಿಕ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನವನ್ನು ಕೂಡ ಮಾಡುವುದಾಗಿ ಸಚಿನ್ ಹೇಳಿದ್ದಾರೆ. ನಾನು ಆಡುವಾಗ ನೀವೆಲ್ಲ ನೀಡಿದ ಬೆಂಬಲ ಅಮೂಲ್ಯವಾದುದು ಹಾಗೂ ಅದರಿಂದ ನಾನು ಯಶಸ್ವಿಯಾದೆ. ಈ ಸಾಂಕ್ರಾಮಿಕ ಪಿಡುಗನ್ನು ಎದುರಿಸುವ ನಿಟ್ಟಿನಲ್ಲೂ ಇಂದು ನಾವೆಲ್ಲರೂ ಜೊತೆಯಾಗಿ ನಿಲ್ಲುವ ಅವಶ್ಯಕತೆ ಇದೆ ಎಂದು ಸಚಿನ್ ಹೇಳಿದ್ದಾರೆ.
ಇದನ್ನೂ ಓದಿ: ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ
ಕರೊನಾ ಎರಡನೇ ಅಲೆ ದೇಶದ ಆರೋಗ್ಯ ವ್ಯವಸ್ಥೆ ಮೇಲೆ ಭಾರಿ ಒತ್ತಡ ಉಂಟು ಮಾಡಿದೆ. ಇಂಥ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮಾಡುವುದು ಅತಿ ಅಗತ್ಯವಾದುದು. ಈ ನಿಟ್ಟಿನಲ್ಲಿ 250 ಮಂದಿ ಉದ್ಯಮಶೀಲರ ಗುಂಪೊಂದು ಮಿಷನ್ ಆಕ್ಸಿಜನ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಆ ದೇಣಿಗೆಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ಸ್ಅನ್ನು ತರಿಸಿ ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡುವ ಕೆಲಸವನ್ನು ಈ ಮಿಷನ್ ಆಕ್ಸಿಜನ್ ಮಾಡಲಿದೆ ಎಂದಿರುವ ಸಚಿನ್, ಮಿಷನ್ ಆಕ್ಸಿಜನ್ ತಂಡಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ಈಕೆಯ ಪ್ರಪ್ರಥಮ ರಕ್ತದಾನವೇ ಅವಿಸ್ಮರಣೀಯ; ಕರೊನಾ ಆತಂಕದಲ್ಲೂ ಇವಳಿಂದ ಉಳಿಯಿತು ಒಂದಲ್ಲ ಎರಡು ಜೀವ!
ಜಗತ್ತಿನಲ್ಲಿನ ಕೋವಿಡ್ ಸಾವುಗಳ ಪೈಕಿ ಕಾಲುಭಾಗದಷ್ಟು ಇಲ್ಲೇ ಆಗಿವೆ!: ಸಮೀಕ್ಷೆಯೊಂದರಿಂದ ಬಹಿರಂಗ