ಬೆಂಗಳೂರು: ಉಡುಪಿಯ ಹಾಸ್ಟೆಲ್ನಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ವಿಡಿಯೋ ಚಿತ್ರಿಕರಣ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ಪರಿಷತ್ ಸದಸ್ಯ ರವಿ ಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿನಿ ಗೌಡ ಅವರು ಅಲಿಮತುಲ್ಲಾ ಶೈಪಾ, ಆಲಿಯಾ, ಶಭನಾಸ್ ಎನ್ನುವ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಡಿಬಾರ್ ಮಾಡಿದ್ದು, ವಿಡಿಯೋ ಮಾಡಿದ ಘಟನೆ ಬಗ್ಗೆ ಸ್ಥಳಿಯ ಶಾಸಕ ಯಶ್ಪಾಲ್ ಸುವರ್ಣ ದೂರು ನೀಡಿದ್ದಾರೆ. ವಿಡಿಯೋ ಮಾಡಿದವರು ಮುಸ್ಲಿಂ ಹೆಣ್ಮಕ್ಕಳು. ವಿಡಿಯೋ ಮಾಡಿದ್ದು ಹಿಂದು ಹುಡುಗಿಯದ್ದು. ಆದರೆ ಈ ವಿಚಾರ ಬೆಳಕಿಗೆ ತಂದಿದ್ದು ರಶ್ಮಿ ಶರ್ಮಾ. ಈಗ ಪೊಲೀಸ್ ರಶ್ಮಿ ಶರ್ಮಾ ಅವರ ಮನೆಗೆ ಹೋಗಿ ಹೆದರಿಸುತ್ತಾರೆ. ರಶ್ಮಿ ಅಪ್ಪನಿಗೆ ಪೊಲೀಸ್ ಹೊಡಿತಾರೆ, ರಶ್ಮಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಎಂದು ತಿಳಿಸಿದರು.
ಅವಳಿಗೆ ಬೆನ್ನುತಟ್ಟಿದ್ದು ಅಲ್ ಖೈದಾ ಉಗ್ರ
ಈ ಮುಸ್ಲಿಂ ಹುಡುಗಿಯರು ವಿಡಿಯೋ ಮಾಡಿ ವಾಟ್ಸ್ ಆಪ್ ಗ್ರೂಪ್ಗೆ ಬಿಟ್ಟಿದ್ದಾರೆ. ಮಂಡ್ಯದಲ್ಲಿ ಮಸ್ಕಾನ್ ಎನ್ನುವ ಹುಡುಗಿ ಅಲ್ಲಾ ಹೋ ಅಕ್ಬರ್ ಎಂದು ಕೂಗಿದ್ಲು. ಅವಳಿಗೆ ಬೆನ್ನುತಟ್ಟಿದ್ದು ಅಲ್ ಖೈದಾ ಉಗ್ರ. ಇವರಿಗೆ ಯಾರು ಸಪೋರ್ಟ್ ಮಾಡಿದ್ದು, ಇನ್ನು ಮುಂದೆ ಹಾಗಾದರೆ ಧರ್ಮಕ್ಕೊಂದು ಶಾಲೆ ಮಾಡಬೇಕಾ ಎಂದು ಪ್ರಶ್ನಿಸಿದರು.
ವಿಡಿಯೋ ಮಾಡಿ ಮುಸ್ಲಿಂ ಹುಡುಗರಿಗೆ ಫಾರ್ವರ್ಡ್
ಹೀಗೆ ವಿಡಿಯೋ ಮಾಡಿದ ವಿದ್ಯಾರ್ಥಿನಿಯರಿಗೆ ತ್ವರಿತಗತಿಯಲ್ಲಿ ನ್ಯಾಯಾಲಯದಡಿ ಶಿಕ್ಷೆ ಆಗಬೇಕು. ಮುಸ್ಲಿಂ ಹುಡುಗಿಯರು ವಿಡಿಯೋ ಮಾಡಿ ಮುಸ್ಲಿಂ ಹುಡುಗರಿಗೆ ಫಾರ್ವರ್ಡ್ ಮಾಡಿದ್ದಾರೆ. ಈ ಸರ್ಕಾರ ಬಂದಮೇಲೆ ಈ ರೀತಿ ಆಗುತ್ತಿದೆ. ಅವರಿಗೆ ಒಂದು ರೀತಿ ಧೈರ್ಯ ಬಂದಿದೆ. ಈ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಫೇಕ್ ನ್ಯೂಸ್ ನೆಪದಲ್ಲಿ ರಶ್ಮಿ ದನಿ ಅಡಗಿಸುವ ಪ್ರಯತ್ನ ನಡೀತಿದೆ. ರಶ್ಮಿ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಮಹಮದ್ ಜುಬೇರ್ ಮತ್ತು ಪ್ರತೀಕ್ ಸಿನ್ಹಾ ರನ್ನು ಫೇಕ್ ನ್ಯೂಸ್ ಪತ್ತೆಗೆ ನೇಮಿಸಿಕೊಳ್ಳಲಾಗಿದೆ. ಇವರಿಬ್ಬರ ಆಲ್ಟ್ ನ್ಯೂಸ್ ವೆಬ್ಸೈಟ್ ಮೇಲೆ ಫೇಕ್ ನ್ಯೂಸ್ ಹಬ್ಬಿಸುವ ಗಂಭೀರ ಆರೋಪ ಇದೆ ಎಂದು ತೇಜಸ್ವಿನಿ ಗೌಡ ದೂರಿದರು.
ಬಿಜೆಪಿಯಿಂದ ಹೋರಾಟ
ಉಡುಪಿ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು. ಆ ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಆರೋಪಿಗಳ ಬಗ್ಗೆ ಸಾಫ್ಟ್ ಕಾರ್ನರ್ ತೋರುತ್ತಿದೆ. ಇದು ಸರಿಯಲ್ಲ. ಈ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇದೆ. ಉಡುಪಿ ಪ್ರಕರಣ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ ತೇಜಸ್ವಿನಿ ಗೌಡ ತಮ್ಮ ಮುಖವನ್ನ ಯಾರಿಗೂ ತೋರಿಸಬಾರದೆಂದು ಬುರ್ಖಾ ಧರಿಸುವ ಯುವತಿಯರು ಹಿಂದು ಯುವತಿಯರ ವಿಡಿಯೋ ಮಾಡ್ತಾರೆ ಎಂದ್ರೆ ಅವರ ಸಂಸ್ಕೃತಿ ಏನು?, ಗಂಡುಮಕ್ಕಳು ಏನಾದ್ರು ಈ ಕೆಲಸ ಮಾಡಿದ್ರೆ ಮರಣದಂಡನೆಗೆ ಒತ್ತಾಯ ಮಾಡ್ತಿದ್ವಿ. ಈ ಪ್ರಕರಣ ಸಾಬೀತಾದ್ರೆ ಆ ಯುವತಿಯರಿಗೂ ಮರಣದಂಡನೆ ನೀಡಬೇಕು ಎಂದರು.
ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ
ಇದೇ ಸಂದರ್ಭದಲ್ಲಿ ಮಾತನಾಡಿದ ಭಾರತಿ ಮುಗ್ಧಂ ಉಡುಪಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೀತಿದೆ
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಘಟನೆ ನಡೆದು ನಾಲ್ಕೈದು ದಿನವಾದರೂ ಇನ್ನೂ ಕಾಂಗ್ರೆಸ್ ನ ಮಹಿಳಾ ಶಾಸಕಿಯರು ಇದರ ಬಗ್ಗೆ ಮಾತಾಡಿಲ್ಲ ಎಂದರು.
ಆ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಿ
ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಆಲಿಯಾ, ಶೈಫಾ, ಶಬನಾಜ್ ಈ ಮೂವರೂ ಒಬ್ಬ ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಿ ಬೇರೆಯವರಿಗೆ ಕಳಿಸಿದ್ದಾರೆ. ವಿಡಿಯೋ ಕ್ಯಾಮೆರಾ ಇಟ್ಟಿರೋದು ಬಾತ್ ರೂಂ ನಲ್ಲಿ. ಇದನ್ನ ಬೇರೆಯವರಿಗೆ ಕಳಿಸಿದ್ದಾರೆ. ಒಂದು ವೇಳೆ ಇದೇ ಘಟನೆ ಉಲ್ಟಾ ಆಗಿದ್ದಿದ್ರೆ ಸರ್ಕಾರ ಏನ್ ಮಾಡ್ತಿತ್ತು?. ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ವಿದ್ಯಾರ್ಥಿನಿ ವಿಡಿಯೋ ಮಾಡಿದ್ದಿದ್ರೆ ಆಗ ಪರಿಸ್ಥಿತಿ ಹೇಗಿರ್ತಿತ್ತು ಅಂತ ಸರ್ಕಾರ ಅರ್ಥ ಮಾಡ್ಕೋಬೇಕು. ಈ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ಮೂವರು ವಿದ್ಯಾರ್ಥಿನಿಯರನ್ನ ಸಸ್ಪೆಂಡ್ ಮಾಡಿದ್ದಾರೆ. ಅದು ಸಾಕಾಗಲ್ಲ. ಆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. 27 ಕ್ಕೆ ರಾಜ್ಯಾದ್ಯಂತ ಮಹಿಳಾ ಘಟಕದಿಂದ ಹೋರಾಟ ಮಾಡ್ತೀವಿ. ಆ ಮೂವರು ವಿದ್ಯಾರ್ಥಿನಿಯರನ್ನ ಬಂಧಿಸಬೇಕು. ಯಾರ್ಯಾರಿಗೆ ಕಳುಹಿಸಿದ್ದಾರೆ, ಅದನ್ನೆಲ್ಲ ತನಿಖೆಮಾಡಬೇಕು. ಮುಸ್ಲಿಂ ವಿದ್ಯಾರ್ಥಿನಿಯರ ವಿಡಿಯೋ ಹರಿಬಿಟ್ಟಿದ್ರೆ ರಾಜ್ಯದ ಪರಿಸ್ಥಿತಿ ಏನಾಗ್ತಿತ್ತು. ಪರಮೇಶ್ವರ್ ಸಭೆ ಮಾಡಿ ಕೇವಲ ವಿಡಿಯೋ ಹೆಚ್ಚು ಹರಡದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಆದರೆ ವಿಡಿಯೋ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಗನಸಖಿ ಆತ್ಮಹತ್ಯೆ ಪ್ರಕರಣ: ಗೋಪಾಲ್ ಗೋಯಲ್ ಕಂಡಾ ದೋಷಮುಕ್ತ, ಯಾರು ಈ ಗೀತಿಕಾ ಶರ್ಮಾ?