ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಮಾಜಿ ಬ್ಯಾಟರ್ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ತಮ್ಮ ಬಹುತೇಕ ಐಪಿಎಲ್ ಕೆರಿಯರ್ ಅನ್ನು ಸಿಎಸ್ಕೆ ಜತೆಯಲ್ಲೇ ಕಳೆದ ರೈನಾ ಸಾಕಷ್ಟು ಬಾರಿ ಯಶಸ್ಸಿನ ರುಚಿಯನ್ನು ಕಂಡಿದ್ದಾರೆ.
ಇಡೀ ಐಪಿಎಲ್ ಪಯಣದಲ್ಲಿ ಚೆನ್ನೈ ಬಲಿಷ್ಠ ತಂಡವನ್ನು ಹೊಂದಿದ್ದರು ಸಹ ಆಟಗಾರರಿಂದ ಹೆಚ್ಚಿನದ್ದನ್ನು ಪಡೆಯಲು ಚೆನ್ನೈ ತಂಡದ ಸಂಸ್ಕೃತಿಯು ಕೂಡ ಮ್ಯಾನೇಜ್ಮೆಂಟ್ಗೆ ಸಹಾಯ ಮಾಡಿದೆ. ಆ ಸಂಸ್ಕೃತಿಗಳಲ್ಲಿ ಒಂದು ತಡವಾಗಿ ಪಾರ್ಟಿ ಮಾಡದಿರುವ ನಿಯಮವನ್ನೂ ಒಳಗೊಂಡಿತ್ತು ಎಂದು ಲಲ್ಲಂಟಾಪ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರೈನಾ ಹೇಳಿದ್ದಾರೆ.
ಆರ್ಸಿಬಿ ಸೇರಿದಂತೆ ಇಲ್ಲಿಯವರೆಗೂ ಒಮ್ಮೆಯೂ ಟ್ರೋಫಿ ಜಯಿಸದ ಐಪಿಎಲ್ ಫ್ರಾಂಚೈಸಿಗಳ ವಿರುದ್ಧ ಟೀಕಾಪ್ರಹಾರ ನಡೆಸಿರುವ ರೈನಾ, ಯಾರು ಐಪಿಎಲ್ ಟ್ರೋಫಿ ಗೆದ್ದಿಲ್ಲವೂ ಅವರೆಲ್ಲ ಪಾರ್ಟಿಯಲ್ಲಿ ಮುಳುಗಿರುತ್ತಾರೆ ಎಂದಿದ್ದಾರೆ. ಆದರೆ, ರೈನಾ ಅವರು ಎಲ್ಲಿಯೂ ಆರ್ಸಿಬಿ ಹೆಸರನ್ನು ಉಲ್ಲೇಖಿಸಿಲ್ಲ.
ಚೆನ್ನೈ ಎಂದಿಗೂ ಪಾರ್ಟಿ ಮಾಡಿಲ್ಲ. ಅದಕ್ಕಾಗಿಯೇ ಅವರು ಅತ್ಯಂತ ಯಶಸ್ವಿಯಾದರು. ತಡರಾತ್ರಿವರೆಗೂ ಪಾರ್ಟಿ ಮಾಡುವ 2-3 ತಂಡಗಳಿವೆ. ಅವು ಈವರೆಗೂ ಐಪಿಎಲ್ ಟ್ರೋಫಿ ಜಯಿಸಿಲ್ಲ ಎಂದು ನಗುತ್ತಾರೆ. ಈ ವೇಳೆ ನಿಮ್ಮ ಮಾತ್ರಿ ಅರ್ಥ ಆರ್ಸಿಬಿಯೇ ಎಂದು ಪ್ರಶ್ನೆ ಮಾಡಲಾಗುತ್ತದೆ. ಇಲ್ಲ, ಗೆಲುವು ಕಾಣದ ಕೆಲವು ತಂಡಗಳಿವೆ, ಅವರು ಕಷ್ಟಪಟ್ಟು ಪಾರ್ಟಿ ಮಾಡಿರಬೇಕು ಎಂದು ವ್ಯಂಗ್ಯವಾಡಿದರು.
ನಾವೆಂದು (ಸಿಎಸ್ಕೆ) ಆ ರೀತಿ ಮಾಡಲಿಲ್ಲ. ಹೀಗಾಗಿಯೇ ನಾವು 5 ಐಪಿಎಲ್ ಟ್ರೋಫಿಗಳನ್ನು ಮತ್ತು 2 ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಹೊಂದಿದ್ದೇವೆ. ಮುಂಬೈ ಕೂಡ ಐದು ಬಾರಿ ಟ್ರೋಫಿಯನ್ನು ಜಯಿಸಿದೆ ಎಂದು ರೈನಾ ಹೇಳಿದರು.
ತಡರಾತ್ರಿ ಪಾರ್ಟಿಗಳು ನಡೆಯುವ ಕೆಲವು ಫ್ರಾಂಚೈಸಿಗಳ ಸಂಸ್ಕೃತಿಯನ್ನು ರೈನಾ ಬಹಿರಂಗಪಡಿಸಿದರು. ಅಂತಹ ಟ್ರೆಂಡ್ಗಳೊಂದಿಗೆ ತಂಡವು ಐಪಿಎಲ್ ಅನ್ನು ಹೇಗೆ ತಾನೆ ಗೆಲ್ಲುತ್ತದೆ ಎಂದು ಪ್ರಶ್ನಿಸಲು ರೈನಾ ಹಿಂಜರಿಯಲಿಲ್ಲ. ನೀವು ತಡರಾತ್ರಿಯವರೆಗೆ ಪಾರ್ಟಿ ಮಾಡಿದರೆ, ನೀವು ಬೆಳಿಗ್ಗೆ ಹೇಗೆ ಆಡುತ್ತೀರಿ? ಮೇ-ಜೂನ್ನ ಬಿಸಿಲಿ ಶಾಖದಲ್ಲಿ, ನೀವು ರಾತ್ರಿಯಿಡೀ ಪಾರ್ಟಿ ಮಾಡಿದರೆ ನೀವು ಮಧ್ಯಾಹ್ನದ ಆಟಗಳನ್ನು ಹೇಗೆ ಆಡುತ್ತೀರಿ? ಎಂದು ರೈನಾ ಪ್ರಶ್ನೆ ಮಾಡಿದರು.
ನಮ್ಮ ಇಡೀ ತಂಡವು ತಡರಾತ್ರಿಯವರೆಗೆ ಪಾರ್ಟಿ ಮಾಡದಿರುವ ಬಗ್ಗೆ ಬದ್ಧರಾಗಿದ್ದೆವು. ನಾವು ಸಹ ಭಾರತಕ್ಕಾಗಿ ಆಡುತ್ತಿದ್ದೇವೆ ಎಂಬುದನ್ನು ನೆನಪಿನಲ್ಲಿಡಿ. ನಾನು ಚೆನ್ನಾಗಿ ಆಡದಿದ್ದರೆ, ನನ್ನ ನಾಯಕ ನನ್ನನ್ನು ಏಕೆ ಆಯ್ಕೆ ಮಾಡುತ್ತಾರೆ? ನಾನೀಗ ಮುಕ್ತನಾಗಿದ್ದೇನೆ ಮತ್ತು ನಾನು ನಿವೃತ್ತಿ ಹೊಂದಿದ್ದೇನೆ. ಹೀಗಾಗಿ ನಾನೀಗ ಪಾರ್ಟಿ ಮಾಡಬಹುದು ಎಂದು ರೈನಾ ಹೇಳಿದರು. ಈ ಮೂಲಕ ಆಟದ ಮೇಲೆ ಪ್ರಭಾವ ಬೀರುವಂತಹ ಪಾರ್ಟಿಯ ಅವಶ್ಯಕತೆ ಇಲ್ಲ ಎಂದರು.
ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಅಗ್ರ ರನ್ ಗಳಿಸಿದವರಲ್ಲಿ ಒಬ್ಬರಾದ ರೈನಾ, ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ತಮ್ಮ ವೃತ್ತಿಜೀವನವನ್ನು ಆನಂದಿಸುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಏಪ್ರಿಲ್ 21) ಈಡನ್ ಗಾರ್ಡ್ನ್ಸ್ನಲ್ಲಿ ನಡೆದ ಐಪಿಎಲ್ 2024ರ 36 ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 1 ರನ್ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದುಬರಲು ಮತ್ತೊಮ್ಮೆ ವಿಫಲವಾಗಿದೆ. ಪ್ಲೇ ಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.
ಆರ್ಸಿಬಿ ತಂಡದ ವಿಲ್ ಜಾಕ್ಸ್ ಹಾಗೂ ರಜತ್ ಪಾಟಿದಾರ್ ಅರ್ಧಶತಕದ ಕೊಡುಗೆ, ಸ್ಪಿನ್ ಬೌಲರ್ ಕರಣ್ ಶರ್ಮಾ ಮಿಂಚಿನ ಬ್ಯಾಟಿಂಗ್ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ ಒಂದು ರನ್ ಅಂತರದಿಂದ ವಿರೋಚಿತ ಸೋಲು ಅನುಭವಿಸಿದೆ. ಕೆಕೆಆರ್ ನೀಡಿದ 223 ರನ್ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 221 ರನ್ ಗಳಿಸಿ ಆಲೌಟಾಯಿತು. (ಏಜೆನ್ಸೀಸ್)
ವಿರಾಟ್ ಕೊಹ್ಲಿ ಔಟ್ ಎಂಬ ತೀರ್ಪು: ಅಂಪೈರ್ಗಳ ವಿರುದ್ಧ ಗುಡುಗಿದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರು
ನಾನು ಮೂರು ಮದ್ವೆಯಾಗಿದ್ರೂ ಈತನೊಂದಿಗೆ ಮಾತ್ರ ತುಂಬಾ ಖುಷಿಯಾಗಿದ್ದೀನಿ! ನಟಿ ಲಕ್ಷ್ಮೀ ಓಪನ್ ಟಾಕ್