ಮೈಸೂರು: ಇಲ್ಲೊಬ್ಬ ಶಿಕ್ಷಕ ಕ್ಷುಲಕ ಕಾರಣಕ್ಕೆ ಸ್ಟೀಲ್ ಸ್ಕೇಲ್ ನಿಂದ ವಿದ್ಯಾರ್ಥಿಗೆ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಎಚ್.ಡಿ ಕೋಟೆ ನಗರದಲ್ಲಿ ನಡೆದಿದೆ.
ಎಚ್.ಡಿ.ಕೋಟೆ ಪಟ್ಟಣದಲ್ಲಿರುವ ಶಾಂತಿಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 8ನೇ ತರಗತಿಯ ಅಮೃತ್ ಬಿಡುವಿನ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ಸಿದ್ದರಾಜು ಸ್ಟೀಲ್ ಸ್ಕೇಲ್ನಿಂದ ಥಳಿಸಿದ್ದಾರೆ.
ಇದರಿಂದಾಗಿ ಅಮೃತ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದರೆ ಶಿಕ್ಷಕ ಸಿದ್ದರಾಜು ಪೋಷಕರಿಗೆ ಕರೆ ಮಾಡಿ ಅಮೃತ್ ಕಟರ್ನಿಂದ ಕೈ ಕಟ್ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ.
ಸದ್ಯ ಗಾಯಾಳು ಅಮೃತ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನ ನಡೆದ ನಂತರ ಶಾಲೆಗೆ ತಾಲೂಕು ಶಿಕ್ಷಣಾಧಿಕಾರಿ ಉದಯಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈಗ ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.