ಬೆಂಗಳೂರು: ವಿಜಯ್ ರಾಘವೇಂದ್ರ ಅಭಿನಯದ ‘ಖುಷಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ‘ಲವ್ ಗುರು’ ಖ್ಯಾತಿಯ ತರುಣ್. ಆ ನಂತರ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದ ಅವರು, ಆ ನಂತರ ಸುಧೀರ್ಘ ಗ್ಯಾಪ್ ತೆಗೆದುಕೊಂಡಿದ್ದರು. ಆ ನಂತರ ಮತ್ತೆ ಬಂದ ಅವರು, ಐದು ವರ್ಷಗಳಿಂದ ಚಿತ್ರಂಗದಿಂದ ನಾಪತ್ತೆಯಾಗಿದ್ದರು.
ಇದನ್ನೂ ಓದಿ: ಅಪ್ಪನ ಪಕ್ಷಕ್ಕೂ ನನಗೂ ಸಂಬಂಧವಿಲ್ಲ … ಕಡ್ಡಿ ತುಂಡು ಮಾಡಿದ ವಿಜಯ್
ಕೋಮಲ್ ಜತೆಗೆ ನಟಿಸಿದ ‘ಗೋವಾ’ ಚಿತ್ರವೇ ಕೊನೆ. ಆ ನಂತರ ತರುಣ್ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ಅವರು ‘ಲವ್ ಗುರು’ ಎಂಬ ವಿಡಿಯೋ ಸಾಂಗ್ ಮೂಲಕ ಮತ್ತೆ ವಾಪಸ್ಸಾಗಿದ್ದಾರೆ.
ಈ ಐದು ವರ್ಷಗಳ ಕಾಲ ತಾನೇನು ಮಾಡಿದೆ ಎಂದು ವಿವರಿಸುವ ತರುಣ್, ‘ಮೊದಲಿನಿಂದ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ, ಸುಮ್ಮನೆ ನಿರ್ದೇಶನಕ್ಕೆ ಇಳಿಯುವುದಕ್ಕೆ ಇಷ್ಟವಿರಲಿಲ್ಲ. ಈ ನಿಟ್ಟಿನಲ್ಲಿ ತುಂಬಾ ಕಲಿಯಬೇಕು ಎಂದನಿಸಿ ವಿದೇಶದ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ನಲ್ಲಿ ಎರಡು ವರ್ಷದ ಕೋರ್ಸ್ ಮಾಡಿದೆ. ಆ ನಂತರ ಒಂದು ಕಥೆ ಮಾಡಿ, ಸುಮಾರು ಒಂದು ತಾಸಿನ ಶೋರೀಲ್ ಮಾಡಿದೆ’ ಎನ್ನುತ್ತಾರೆ ತರುಣ್.
ಈ ಶೋರೀಲ್ ಮಾಡುವ ಸಂದರ್ಭದಲ್ಲಿ ನಮ್ಮಲ್ಲಿ ಬಹಳಷ್ಟು ಟೂಲ್ಸ್ ಇಲ್ಲ ಎಂಬ ವಿಷಯ ಅವರ ಗಮನಕ್ಕೆ ಬಂತಂತೆ. ‘ಬಹಳಷ್ಟು ಟೂಲ್ಸ್ ನಮ್ಮಲ್ಲಿ ಇರದಿರುವುದರಿಂದ ಕೆಲವೊಂದು ಶಾಟ್ಗಳನ್ನು ತೆರೆಯ ಮೇಲೆ ತರುವುದು ಬಹಳ ಕಷ್ಟವಾಗುತಿತ್ತು. ಇದರಿಂದ ಸಮಯ ಮತ್ತು ಹಣ ಎರಡೂ ಖರ್ಚಾಗುತಿತ್ತು. ಸಿನಿಮಾ ಮಾಡುವ ಸಂದರ್ಭದಲ್ಲಿ ಇಂತಹ ಸಮಸ್ಯೆಗಳಾಗಬಾರದು ಎಂದು ಅವರು ಟೂಲ್ಸ್ ಸಂಗ್ರಹಿಸುವ ಕೆಲಸ ಮಾಡಿದೆ. ಕೊನೆಗೆ ಒಂದು ಚಿತ್ರ ಮಾಡುವಷ್ಟು ವಿಶ್ವಾಸ ನನ್ನಲ್ಲಿ ಬಂತು. ಆದರೆ, ಅಷ್ಟರಲ್ಲಿ ಲಾಕ್ಡೌನ್ ಬಂತು’ ಎನ್ನುತ್ತಾರೆ ತರುಣ್.
ಇದನ್ನೂ ಓದಿ: ಕ್ರಿಸ್ಮಸ್ ಅಥವಾ ಸಂಕ್ರಾಂತಿಗೆ ‘ಪೊಗರು’ ಅಬ್ಬರ
ಇದೀಗ ಚಿತ್ರ ನಿರ್ದೇಶನಕ್ಕೆ ಕೈಹಾಕುವುದಕ್ಕೆ ಸಿದ್ಧತೆ ನಡೆಸಿರುವ ಅವರು. ‘ಇಷ್ಟು ದಿನಗಳಲ್ಲಿ ನಾಲ್ಕೈದು ಸ್ಕ್ರಿಪ್ಟ್ಗಳನ್ನು ಮಾಡಿಟ್ಟುಕೊಂಡಿದ್ದೇನೆ. ಅದರಲ್ಲಿ ನನಗಾಗಿ ಬರೆದುಕೊಂಡ ಕಥೆಗಳೂ ಇವೆ. ಬೇರೆಯವರಿಗೆ ಮಾಡಿದ ಕಥೆಗಳೂ ಇವೆ. ಸದ್ಯದಲ್ಲೇ ಅದರಲ್ಲಿ ಒಂದನ್ನು ಫೈನಲ್ ಮಾಡಿ ನಿರ್ದೇಶನಕ್ಕೆ ಕೈಹಾಕುತ್ತೇನೆ. ಇಷ್ಟು ವರ್ಷಗಳ ಗ್ಯಾಪ್ ಆಯಿತು. ಇನ್ನು ಮುಂದೆ ಈ ತರಹದ ಗ್ಯಾಪ್ ಕೊಡುವುದಿಲ್ಲ. ತೆರೆಯ ಹಿಂದೆ ಅಥವಾ ಮುಂದೆ, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ಮನರಂಜಿಸುವ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ.