ಬೆಂಗಳೂರು: ಗೋವಾದಲ್ಲಿ ನಾಲ್ಕು ವರ್ಷದ ಹೆತ್ತ ಮಗನನ್ನೇ ಕೊಂದು ಮೃತದೇಹವನ್ನು ಬ್ಯಾಗಿನಲ್ಲಿಟ್ಟುಕೊಂಡು ಬೆಂಗಳೂರಿನತ್ತ ಪರಾರಿಯಾಗುತ್ತಿದ್ದ ವೇಳೆ ಗೋವಾ ಪೊಲೀಸರ ಕೈಗೆ ಸಿಕ್ಕಿಬಿದ್ದ ಎಐ ಸ್ಟಾರ್ಟ್ಅಪ್ ಒಂದರ ಸಿಇಓ ಸುಚನಾ ಸೇಠ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ಸುಚನಾ ಸೇಠ್ ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ. ಐ ಲೈನರ್ ಅಥವಾ ಕಾಜಲ್ ಪೆನ್ಸಿಲ್ ಬಳಸಿ ಟಿಶ್ಯೂ ಪೇಪರ್ ಮೇಲೆ ಡೆತ್ನೋಟ್ ಬರೆಯಲಾಗಿದ್ದು, ಇಡೀ ಪ್ರಕರಣಕ್ಕೆ ಇದು ಮಹತ್ವದ ತಿರುವು ನೀಡಲಿದೆ. ಹರಿದ ಪೇಪರ್ ತುಂಡುಗಳನ್ನು ಜೋಡಿಸಿ, ಅದರಲ್ಲಿರುವ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ. ಈ ಡೆತ್ನೋಟ್ ಸುಚನಾಳ ಮಾನಸಿಕ ಸ್ಥಿತಿ ಏನು ಎಂಬುದನ್ನು ವಿವರಿಸಲಿದೆ ಎಂದು ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ ಗೋವಾ ಪೊಲೀಸರು, ಸುಚನಾ ಸೇಠ್ ಅವರನ್ನು ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಆಕೆ ತಂಗಿದ್ದ ಸರ್ವಿಸ್ ಅಪಾರ್ಟ್ಮೆಂಟ್ಗೆ ಕರೆದೊಯ್ಯುವ ನಿರೀಕ್ಷೆಯಿದೆ. ಪ್ರಕರಣದ ತನಿಖೆಯ ಭಾಗವಾಗಿ ಅಪರಾಧದ ದೃಶ್ಯವನ್ನು ಮರುಸೃಷ್ಟಿಸುವ ಅಗತ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೆತ್ನೋಟ್ನಲ್ಲಿ ಏನು ಬರೆದಿದೆ?
* ವೈವಾಹಿಕ ಜೀವನದ ವೈಫಲ್ಯ ಅಥವಾ ಗಂಡನಿಂದ ಬೇರೆಯಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದೇನೆ.
* ಡಿವೋರ್ಸ್ ಪ್ರಕ್ರಿಯೆ ಇನ್ನೇನು ಆರಂಭವಾಗಲಿದೆ.
* ನ್ಯಾಯಾಲಯವು ಡಿವೋರ್ಸ್ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
* ಗಂಡ ಮತ್ತು ಆತನ ಕುಟುಂಬ ಮಗನನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಕೋರುತ್ತಾರೆ.
* ನನ್ನ ಮಗ ಆತನ ತಂದೆ ಮತ್ತು ತಂದೆಯ ಕುಟುಂಬದೊಂದಿಗೆ ಇರಲು ನಾನು ಬಯಸುವುದಿಲ್ಲ.
* ಹೀಗಾಗಿ ನನ್ನ ಮಗನನ್ನು ನಾನು ಒಳ್ಳೆಯ ಸ್ಥಳಕ್ಕೆ ಕಳುಹಿಸಿದ್ದೇನೆ.
ಪಣಜಿಯ ಅಪಾರ್ಟ್ವೆುಂಟ್ ಒಂದರಲ್ಲಿ ತಂಗಿದ್ದ ಸುಚನಾ, ಮಗುವನ್ನು ಕೊಂದು ಶವವನ್ನು ಬ್ಯಾಗಿನಲ್ಲಿರಿಸಿ ಕೊಂಡು ಬೆಂಗಳೂರಿನತ್ತ ಪಲಾಯನ ಮಾಡುತ್ತಿದ್ದಾಗ ಗೋವಾ ಪೊಲೀಸರು ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಆಕೆಯನ್ನು ಕಳೆದ ಸೋಮವಾರ ಬಂಧಿಸಿದರು. ಸುಚನಾ ಉಳಿದುಕೊಂಡಿದ್ದ ಉತ್ತರ ಗೋವಾದ ಕಾಂಡೋಲಿಂನ ಸರ್ವಿಸ್ ಅಪಾರ್ಟ್ವೆುಂಟ್ನ ಕೊಠಡಿಯಲ್ಲಿ ಕಫ ಸಿರಪ್ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಕಫ ಸಿರಪ್ನ ಒಂದು ಚಿಕ್ಕ, ಹಾಗೂ ದೊಡ್ಡ ಬಾಟಲಿ ಸಿಕ್ಕಿವೆ. ಆಕೆ ಅಪಾರ್ಟ್ವೆುಂಟ್ಗೆ ಹೋಗುವಾಗ ತನ್ನ ಲಗೇಜ್ನಲ್ಲಿ ಕಫ ಸಿರಪ್ನ ಒಂದು ಬಾಟಲಿ ಒಯ್ದಿದ್ದಳು. ನಂತರ, ಗಂಟಲು ಕೆರೆತ ಇರುವುದರಿಂದ ಇನ್ನೊಂದು ಬಾಟಲಿ ಬೇಕೆಂದು ಸ್ವಾಗತಕಾರರ ಬಳಿ ತರಿಸಿಕೊಂಡಿದ್ದಳು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುಚನಾ ಪಶ್ಚಿಮ ಬಂಗಾಳ ಮೂಲದವಳಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸುಚನಾ ಪತಿ ಕೇರಳದವರಾಗಿದ್ದು, ಪ್ರಸ್ತುತ ಇಂಡೋನೇಷ್ಯಾದಲ್ಲಿದ್ದಾರೆ. 2010 ರಲ್ಲಿ ವಿವಾಹವಾಗಿದ್ದು, ಅವರಿಗೆ 2019 ರಲ್ಲಿ ಗಂಡುಮಗು ಜನಿಸಿತ್ತು. 2020ರಲ್ಲಿ ತನ್ನ ಪತಿಯಿಂದ ಸುಚನಾ ಸೇಠ್ ವಿಚ್ಛೇದನ ಪಡೆದಿದ್ದಳು. ಆ ಬಳಿಕ ಪ್ರತಿ ರವಿವಾರ ತನ್ನ ಪುತ್ರನನ್ನು ನೋಡಲು ಸುಚನಾ ಸೇಠ್ ಪತಿಗೆ ಕೋರ್ಟ್ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪತಿಯು ತನ್ನ ಪುತ್ರನನ್ನು ಭೇಟಿಯಾಗಲು ಪ್ರಾರಂಭಿಸಿದರೆ, ಆತನ ಮೇಲೆ ಪತಿ ಹಿಡಿತ ಸಾಧಿಸಬಹುದು ಎಂದು ಸುಚನಾ ಭಯಭೀತಳಾಗಿದ್ದಳು. ಹೀಗಾಗಿ ತನ್ನ ಪುತ್ರನನ್ನು ಭೇಟಿಯಾಗಲು ಪತಿ ಬರುವುದಕ್ಕೂ ಮುಂಚಿತವಾಗಿಯೇ ಪುತ್ರನನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)
ಹೆತ್ತ ಮಗನನ್ನೇ ಕೊಂದ ಸಿಇಓ ಸುಚನಾ ಸಿಕ್ಕಿಬೀಳಲು ಪೊಲೀಸರಿಗೆ ನೆರವಾಯ್ತು ಟ್ರಾಫಿಕ್ ಜಾಮ್!