ನವದೆಹಲಿ: ಕರಣ್ ನಾಯರ್…. ವಿರೇಂದ್ರ ಸೆಹ್ವಾನ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಭಾರತದ ಬ್ಯಾಟ್ಸ್ಮನ್. ರಣಜಿ, ಸೇರಿದಂತೆ ದೇಶೀಯ ಕ್ರಿಕೆಟ್ನಲ್ಲಿ ತನ್ನ ಸಾಮರ್ಥ್ಯ ಏನು ಎಂಬುದನ್ನು ತೋರಿಸಿ ಟೀಂ ಇಂಡಿಯಾಗೆ ಎಂಟ್ರಿ ಪಡೆದುಕೊಂಡ ಕರ್ನಾಟಕದ ಪ್ರತಿಭೆ. ಈತ ರಾಷ್ಟ್ರೀಯ ತಂಡದಲ್ಲೂ ತನ್ನ ಸ್ಥಾನ ಖಾಯಂ ಮಾಡಿಕೊಳ್ಳುತ್ತಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ.
ಭವಿಷ್ಯದ ಕ್ರಿಕೆಟ್ ತಾರೆ ಎಂದು ಕ್ರಿಕೆಟ್ ಪ್ರಿಯರಿಂದ ಕರೆಸಿಕೊಂಡಿದ್ದ ಕರುಣ್ ನಾಯರ್ 2016ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 303 ರನ್ ಗಳಿಸಿ ಮಿಂಚಿದ್ದರು. ಆದರೆ ಮುಂದಿನ ದಿನಗಳಲ್ಲಿ ಕರಣ್ ನಾಯರ್ ತಂಡದಿಂದ ದೂರವಾದರು. ಮತ್ಯಾವತ್ತೂ ಅಂತಾರಾಷ್ಟ್ರೀಯ ತಂಡದಲ್ಲಿ ಅವಕಾಶ ಲಭಿಸಲೇ ಇಲ್ಲ. ಆಯ್ಕೆ ಸಮಿತಿಯೂ ಕರುಣ್ ನಾಯರ್ನತ್ತ ತಿರುಗಿಯೂ ನೋಡಿಲ್ಲ. ಆರಂಭದಲ್ಲಿ ಐಪಿಎಲ್ನಲ್ಲಿ ಸದ್ದು ಮಾಡಿದ್ದ ಕರುಣ್, ನಂತರ ಅಲ್ಲೂ ಮಂಕಾದರು. ತನ್ನ ಸಾಮರ್ಥ್ಯವನ್ನು ಮತ್ತೆ ಸಾಭೀತು ಮಾಡಿಕೊಳ್ಳಲು ಪರದಾಡುವಂತಾಯಿತು.
ಸದ್ಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ತಂಡದ ಆಯ್ಕೆ ಪ್ರಕಿಯೆ ಅಂತಿಮ ಹಂತದಲ್ಲಿದೆ. ಇದೀಗ ಕರುಣ್ ನಾಯರ್ ಭಾವನಾತ್ಮಕವಾಗಿ ಟ್ವೀಟ್ ಒಂದನ್ನು ಮಾಡಿದ್ದಾರೆ. ‘ಡಿಯರ್ ಕ್ರಿಕೆಟ್… ನನಗೆ ಇನ್ನೊಂದು ಅವಕಾಶ ನೀಡಿ’ ಎಂದು ಟ್ವೀಟ್ ಮೂಲಕ ಬರೆದುಕೊಂಡಿದ್ದಾರೆ. ಕರಣ್ ನಾಯರ್ ಮಾಡಿರುವ ಟ್ವೀಟ್ಗೆ ಸಾಕಷ್ಟು ಜನರು ಪ್ರತಿಕ್ರಿಯಸಿದ್ದಾರೆ. ಅಲ್ಲದೇ ಕ್ರಿಕೆಟ್ ಪ್ರೇಮಿಗಳು ಕರಣ್ ನಾಯರ್ಗೆ ಇನ್ನೊಂದು ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ. ಕರುಣ್ ನಾಯರ್ ಒಟ್ಟು 6 ಟೆಸ್ಟ್ ಹಾಗೂ 2 ಏಕದಿನ ಪಂದ್ಯಗಳನ್ನಾಡಿದ್ದಾರೆ.
Dear cricket, give me one more chance.🤞🏽
— Karun Nair (@karun126) December 10, 2022
ಕೆಲ ವರ್ಷಗಳಿಂದ ಕರುಣ್ ನಾಯರ್ ಐಪಿಎಲ್ ಹಾಗೂ ದೇಶೀಯ ಟೂರ್ನಿಗಳಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲ್ಲ. ಹೀಗಾಗಿ ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದ ಕರುಣ್, ಅಲ್ಲೂ ಅವಕಾಶ ಕಳೆದುಕೊಳ್ಳುಂತಾಯಿತು. ಇದರಿಂದಾಗಿ ಇತ್ತೀಚೆಗೆ ಮುಕ್ತಾಯವಾದ ಸಯ್ಯದ್ ಅಲಿ ಮುಷ್ತಾಕ್ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲೂ ಅವಕಾಶ ವಂಚಿತರಾಗಿದ್ದರು. (ಏಜೆನ್ಸೀಸ್)