ಟೋಕಿಯೋ: ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸೋತ ಬಳಿಕ ಮಾತನಾಡಿದ ವಿಶ್ವದ ನಂ 1 ಬ್ಯಾಡ್ಮಿಂಟನ್ ಆಟಗಾರ್ತಿ ತೈಪೆ ದೇಶದ ತೈ ತ್ಸು ಯಿಂಗ್, ಪದಕ ಪಡೆದ ಬಳಿಕ ಭಾರತದ ಪಿ.ವಿ ಸಿಂಧು ಆಡಿದ ಮಾತುಗಳು ನನ್ನ ಕಣ್ಣಂಚಿನಲ್ಲಿ ನೀರು ತರಿಸಿತು ಎಂದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಯಿಂಗ್ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯುಫೀ ವಿರುದ್ಧ 18-21, 21-19, 18-21 ಸೆಟ್ಗಳಿಂದ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಇದನ್ನೂ ಓದಿ: ಒಲಿಂಪಿಕ್ಸ್ ನಲ್ಲಿ ಸಿಂಧು ಐತಿಹಾಸಿಕ ಸಾಧನೆ, ಕಂಚಿನ ಪದಕ ಗೆದ್ದ ಮುತ್ತಿನನಗರಿ ಹುಡುಗಿ
ಪಂದ್ಯದ ಬಳಿಕ ನನ್ನ ಪ್ರದರ್ಶನದ ಬಗ್ಗೆ ನನಗೆ ತೃಪ್ತಿ ಇತ್ತು. ಆ ವೇಳೆ ಸಿಂಧು ಓಡಿ ಬಂದು ನನ್ನನ್ನು ಅಪ್ಪಿಕೊಂಡರು, ನನ್ನ ಮುಖವನ್ನು ನೋಡಿಕೊಂಡು, ನಿಮಗೆ ಇಂದಿನ ದಿನ ತೃಪ್ತಿಕರವಾಗಿಲ್ಲ. ಇದು ನಿಮ್ಮ ದಿನವಲ್ಲ ಎಂದು ತಿಳಿದುಕೊಳ್ಳಿ ಎಂದರು. ನಂತರ ನನ್ನ ಭುಜವನ್ನು ಹಿಡಿದು, ನಿಮ್ಮ ಬಗ್ಗೆ ಎಲ್ಲಾ ತಿಳಿದಿದೆ ಅಂತ ಹೇಳಿದರು ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಯಿಂಗ್ ಬರೆದುಕೊಂಡಿದ್ದಾರೆ.
ಸಿಂಧು ಅವರ ನೈಜ ಮಾತುಗಳು ನನ್ನ ಕಣ್ಣಲ್ಲಿ ನೀರು ಬರುವಂತೆ ಮಾಡಿತು. ನಾನು ತುಂಬಾ ದುಃಖಿತಳಾದೆ, ಏಕೆಂದರೆ ನಾನು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಸಿಂಧು ಬಗ್ಗೆ ತೈ ತ್ಸು ಯಿಂಗ್ ಬರೆದುಕೊಂಡಿದ್ದಾರೆ.