ಕರೀಂನಗರ : ಕೋವಿಡ್ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಹಾಕಿದ ಸ್ವಾಬ್ ಸ್ಟಿಕ್ ಮುರಿದು ಸಿಕ್ಕಿಹಾಕಿಕೊಂಡು ಹಿಂಸೆ ನೀಡಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಯವರಿಗೆ ಕೋವಿಡ್ ಪರೀಕ್ಷೆ ಆಯೋಜಿಸಿ ಮೊದಲು ತಾವೇ ಪರೀಕ್ಷೆ ಮಾಡಿಸಿಕೊಂಡು ಮಾದರಿಯಾಗಲು ಹೊರಟ ಸರ್ಪಂಚ್ ಒಬ್ಬರು, ಹೀಗೆ ನರಕಯಾತನೆ ಅನುಭವಿಸಿದ್ದಾರೆ.
ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದಲ್ಲಿರುವ ವೆಂಕಟರೋಪಲ್ಲಿ ಪಂಚಾಯಿತಿಯ ಅಧ್ಯಕ್ಷ ಜುವಾಜಿ ಶೇಖರ್ ಅವರು, ಶುಕ್ತವಾರದಂದು ಹಳ್ಳಿಯಲ್ಲಿ ಕರೊನಾ ರಾಪಿಡ್ ಆ್ಯಂಟಿಜನ್ ಟೆಸ್ಟ್ ಶಿಬಿರವನ್ನು ಆಯೋಜಿಸಿದ್ದರು. ಸ್ಥಳೀಯ ಗೋಪಾಲ್ರಾವ್ಪೇಟ್ನ ಪ್ರಾಥಮಿಕ ಆರೋಗ್ಯ ಕೇಂದ್ರದವರು ಇದನ್ನು ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ: ಹೆಂಡತಿ ಇಲ್ಲದ ಸಮಯದಲ್ಲಿ ಮಗಳನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ… ಆಸ್ಪತ್ರೆಯಲ್ಲಿ ಬಯಲಾಯಿತು ರಹಸ್ಯ!
ಕೇಂದ್ರದ ಸಿಬ್ಬಂದಿ ಶೇಖರ್ ಅವರ ಮೂಗಿಗೆ ಸ್ವಾಬ್ ಸ್ಟಿಕ್ ಹಾಕಿದಾಗ ಅದು ಮೂಗಿನೊಳಗೇ ಮುರಿದುಹೋಯಿತು. ತದನಂತರ ನರ್ಸ್ ಮತ್ತು ವೈದ್ಯರು ಏನೂ ಮಾಡಲು ಸಾಧ್ಯವಾಗದಾಗ ಅವರನ್ನು ಕರೀಂನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಮೂಗಿನಿಂದ ಜಾರಿ ಗಂಟಲಲ್ಲಿ ಸಿಲುಕಿಕೊಂಡಿದ್ದ ಆ ಕಡ್ಡಿಯನ್ನು ಅಲ್ಲಿನ ವೈದ್ಯರು ಎಂಡೋಸ್ಕೋಪಿ ಮಾಡಿ ತೆಗೆದರು ಎನ್ನಲಾಗಿದೆ.
ಅಷ್ಟೂ ಹೊತ್ತು ಭಾರೀ ನೋವು ಅನುಭವಿಸಿದ ಶೇಖರ್ ಅವರು, ಚೇತರಿಸಿಕೊಂಡ ಮೇಲೆ, ಗ್ರಾಮದ ಕೇಂದ್ರದಲ್ಲಿರುವ ವೈದ್ಯಕೀಯ ಸಿಬ್ಬಂದಿ ಅಗತ್ಯ ಕೌಶಲ್ಯ ಮತ್ತು ತರಬೇತಿ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಕರೊನಾ ಔಷಧಿ, ಅಗತ್ಯವಸ್ತುಗಳ ಮೇಲೆ ಜಿಎಸ್ಟಿ ಕಡಿತ; ಯಾವುದಕ್ಕೆ ಎಷ್ಟೆಷ್ಟು ಇಲ್ಲಿದೆ ವಿವರ