ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಆಯುಕ್ತ ಸಂಜಯ್ಬಾರ್ವೆ ಅವರು ಅನೇಕ ಸಂಗತಿಗಳನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದು, ಬಿಹಾರ ಪೊಲೀಸ್ ಹಾಗೂ ಮುಂಬೈ ಪೊಲೀಸರ ನಡುವಿನ ಜಿದ್ದಾಜಿದ್ದಿ ವಿವಾದಕ್ಕೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಬಾರ್ವೆ ಮಾತನಾಡಿ, ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆಯಲ್ಲಿ ತಮ್ಮ ಹೆಸರು ಕೇಳಿಬಂದಿದ್ದರಿಂದ ಸುಶಾಂತ್ ತುಂಬಾ ವಿಚಲಿತರಾಗಿದ್ದರು. ಸುಶಾಂತ್ ಸಾವಿಗೂ 5 ದಿನಗಳ ಮುಂಚೆ ದಿಶಾ ಆತ್ಮಹತ್ಯೆಗೆ ಶರಣಾಗಿದ್ದರು. ಅದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ತನ್ನ ಬಗ್ಗೆ ಏನು ಬರೆದಿದ್ದಾರೆ ಎಂದು ತಿಳಿದುಕೊಳ್ಳಲು ಸುಶಾಂತ್ ಗೂಗಲ್ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಅವರು ಸ್ಕಿಜೋಫ್ರೇನಿಯಾ ಮತ್ತು ಬೈಪೋಲಾರ್ ಡಿಸಾರ್ಡರ್ ಮನೋವ್ಯಾಧಿ ಕುರಿತು ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇದೇನು ಗೂಂಡಾ ರಾಜ್ಯನಾ? ಟೀಮ್ ಕಂಗನಾ ಪ್ರಶ್ನೆ
ಅಂದು ರಾತ್ರಿ ಸಾವಿಗೂ ಮುನ್ನಾ ಎರಡು ಗಂಟೆಗಳ ಕಾಲ ಸುಶಾಂತ್ ಗೂಗಲ್ನಲ್ಲಿ ತಮ್ಮ ಹೆಸರನ್ನು ಹುಡುಕಾಡಿದ್ದಾರೆ. ಅಲ್ಲದೆ, ನೋವಿಲ್ಲದೇ ಸಾಯುವುದು ಹೇಗೆ ಎಂತಲೂ ಸರ್ಚ್ ಮಾಡಿದ್ದಾರೆಂದು ಬಾರ್ವೆ ಹೇಳಿದರು.
ದಿಶಾ ಸಾಯುವ ದಿನದ ರಾತ್ರಿ ಆಕೆಯ ಗಂಡನ ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ದಿಶಾ ಮುಂಜಾನೆ 3 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡ ಸೇರಿ ಪಾರ್ಟಿಯಲ್ಲಿ ಒಟ್ಟು ಐದು ಮಂದಿ ಇದ್ದರು. ಆದರೆ, ಆ ನಾಲ್ವರು ರಾಜಕೀಯ ವ್ಯಕ್ತಿಗಳಲ್ಲ ಎಂದು ಹರಿದಾಡುತ್ತಿರುವ ವದಂತಿಗಳಿಗೆ ಪೊಲೀಸ್ ಆಯುಕ್ತರು ತೆರೆ ಎಳೆದರು.
ಈ ಪ್ರಕರಣದ ತನಿಖೆ ಮಾಡಲು ಇದು ಬಿಹಾರ ಪೊಲೀಸರ ವ್ಯಾಪ್ತಿಯಲ್ಲಿಲ್ಲ. ಈ ಬಗ್ಗೆ ನಾವು ಕಾನೂನು ಅಭಿಪ್ರಾಯವನ್ನು ಎದುರು ನೋಡುತ್ತಿದ್ದೇವೆ. ಪ್ರಕರಣದಲ್ಲಿ ಯಾರೊಬ್ಬರಿಗೂ ನಾವು ಕ್ಲಿನ್ಚಿಟ್ ನೀಡುವುದಿಲ್ಲ. ಆದರೆ, ದೂರುದಾರ ನಮ್ಮ ಬಳಿಯೇ ಬಂದಿಲ್ಲ ಎಂದು ಸುಶಾಂತ್ ತಂದೆಯನ್ನು ಉದ್ದೇಶಿಸಿ ಬಾರ್ವೆ ಮಾತನಾಡಿದರು. ಇದೇ ವೇಳೆ ಬಿಹಾರ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಬಲವಂತವಾಗಿ ಕ್ವಾರಂಟೈನ್ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಯಾವುದೇ ಅಧಿಕಾರಿಯನ್ನು ಕ್ವಾರಂಟೈನ್ ಮಾಡಿರುವುದರಲ್ಲಿ ನಮ್ಮ ಪಾತ್ರವೇನಿಲ್ಲ. ಇದು ಬೃಹನ್ ಮುಂಬೈ ಮುನ್ಶಿಪಲ್ ಕಾರ್ಪೋರೇಷನ್ (ಬಿಎಂಸಿ) ಗೆ ಸೇರಿದ್ದು ಎಂದು ಸ್ಪಷ್ಟನೆ ನೀಡಿದರು.
ಇನ್ನು ಬಿಹಾರದ ಪಟನಾದಲ್ಲಿ ಸುಶಾಂತ್ ಕುಟುಂಬ ಎಫ್ಐಆರ್ ದಾಖಲಿಸಿರುವ ಬಗ್ಗೆ ಮಾತನಾಡಿದ ಪೊಲೀಸ್ ಆಯುಕ್ತರು, ಜೂನ್ 16ರಂದು ಸುಶಾಂತ್ ಕುಟುಂಬ ನಮಗೆ ನೀಡಿರುವ ಹೇಳಿಕೆಯಲ್ಲಿ ಯಾರ ಮೇಲೆಯೂ ಸಂಶಯವಿಲ್ಲ ಎಂದಿದ್ದಾರೆ. ಅವರ ಹಸ್ತಾಕ್ಷರವೂ ಇದೆ ಎಂದು ತಿಳಿಸಿದರು.
ರಿಯಾ ಚಕ್ರವರ್ತಿ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಸುಶಾಂತ್ ಸಾಯುವ ಆರು ದಿನಗಳಿಗೂ ಮುಂಚೆ ಜೂನ್ 8ರಂದು ರಿಯಾ ಸುಶಾಂತ್ ಮನೆ ಬಿಟ್ಟು ಹೋಗಿದ್ದರು. ಏಕೆಂದರೆ ಆಕೆಯು ಸಹ ಖಿನ್ನಳಾಗಿದ್ದಳು. ಅವಳ ಮನಸ್ಥಿತಿ ಸರಿಯಿರಲಿಲ್ಲ. ರಿಯಾ ನಂತರ ಸುಶಾಂತ್ ಮನೆಗೆ ಬಂದಿದ್ದ ಆತನ ಸಹೋದರಿ ಜೂನ್ 13ರಂದು ಮನೆ ಬಿಟ್ಟಿದ್ದಳು. ಏಕೆಂದರೆ ಅವರ ಮಗಳಿಗೆ ಪರೀಕ್ಷೆ ಇರುವುದರಿಂದ ಮನೆ ಬಿಟ್ಟಿದ್ದರು. ಹೀಗಂತೆ ಅವರು ಹೇಳಿಕೆ ನೀಡಿದ್ದಾರೆ ಎಂದು ಬಾರ್ವೆ ತಿಳಿಸಿದರು.
ರಿಯಾ ಹಾಗೂ ಸುಶಾಂತ್ ನಡುವಿನ ಸಂಬಂಧದ ಬಗ್ಗೆ ಪರಿಶೀಲಿಸಲಾಗುತ್ತಿದೆ. ರಿಯಾ, ಸುಶಾಂತ್ ಕುಟುಂಬದೊಂದಿಗೆ ಮನಸ್ತಾಪವನ್ನು ಹೊಂದಿದ್ದರು. ಎರಡು ಬಾರಿ ರಿಯಾ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಇಬ್ಬರ ನಡುವಿನ ಸಂಬಂಧ, ಮಾನಸಿಕ ಸ್ಥಿತಿ ಸೇರಿದಂತೆ ಎಲ್ಲದರ ಬಗ್ಗೆ ಪ್ರಶ್ನಿಸಿದ್ದೇವೆ. ಇದಕ್ಕೆ ರಿಯಾ ನೀಡಿರುವ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಸುಶಾಂತ್ ಕುಟುಂಬದ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅವರು ನಮಗೆ ಲಭ್ಯವಾಗುತ್ತಿಲ್ಲ ಎಂದಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: VIDEO| ಆಗಸದಲ್ಲೇ ಇಂಧನ ತುಂಬುವ ವಿಡಿಯೋ ರಫೇಲ್ಗೆ ಸಂಬಂಧಿಸಿದ್ದಲ್ಲ, ಸತ್ಯಾಂಶವೇ ಬೇರೆ!
ಸುಶಾಂತ್ ಪ್ರಕರಣದ ತನಿಖೆಗೆ ಆಗಮಿಸಿದ ಬಿಹಾರದ ಐಪಿಎಸ್ ಅಧಿಕಾರಿಗೆ ಶಾಕ್ ಕೊಟ್ಟ ಮುಂಬೈ ಅಧಿಕಾರಿಗಳು!