ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವುದನ್ನು, ದ್ವೇಷ ಮತ್ತು ರಾಷ್ಟ್ರದ್ರೋಹದ ಸಂದೇಶಗಳನ್ನು ರವಾನಿಸುವುದನ್ನು ತಡೆಯಲು ಕಾರ್ಯತಂತ್ರ ರೂಪಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಕೇಂದ್ರ ಸರ್ಕಾರಕ್ಕೆ ಮತ್ತು ಟ್ವಿಟರ್ಗೆ ಸುಪ್ರೀಂ ಕೋರ್ಟ್ ನೋಟೀಸು ಜಾರಿಗೊಳಿಸಿದೆ.
ಟ್ವಿಟರ್ ಮತ್ತಿತರ ಸಾಮಾಜಿಕ ಮಾಧ್ಯಮಗಳ ದುರ್ಬಳಕೆಯ ಬಗ್ಗೆ ಬಿಜೆಪಿ ನಾಯಕ ವಿನೀತ್ ಗೊಯೆಂಕಾ ಈ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಶುಕ್ರವಾರ ನೋಟೀಸ್ ಜಾರಿ ಮಾಡಿದ್ದು, ಈ ಬಗ್ಗೆ ಸಲ್ಲಿಸಲಾಗಿರುವ ಇನ್ನಿತರ ಅರ್ಜಿಗಳೊಂದಿಗೆ ವಿಚಾರಣೆ ನಡೆಸುವುದಾಗಿ ಹೇಳಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಶಾಶ್ವತ ರದ್ದು ಮಾಡಿ ಟ್ವಿಟರ್ ಕೊಟ್ಟ ಕಾರಣ ಹೀಗಿದೆ…
ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಎದುರಾಳಿಗಳ ತೇಜೋವಧೆ ಮಾಡಲು ಬಳಸುತ್ತಿವೆ. ಸರಕಾರಿ ಸಂಸ್ಥೆಗಳ ಮತ್ತು ಪ್ರತಿಷ್ಠಿತ ಜನರ ಹೆಸರಲ್ಲಿ ಸಾವಿರಾರು ನಕಲಿ ಟ್ವಿಟರ್ ಹ್ಯಾಂಡಲ್ಗಳು ಮತ್ತು ಫೇಸ್ಬುಕ್ ಅಕೌಂಟ್ಗಳು ಜನರಿಗೆ ಸುಳ್ಳು ಮಾಹಿತಿ ಹರಡುತ್ತಿವೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕಾನೂನು ಮತ್ತು ಕಾರ್ಯತಂತ್ರದ ಅಗತ್ಯವಿದೆ ಎಂದು ಈ ಅರ್ಜಿಯಲ್ಲಿ ಹೇಳಲಾಗಿದೆ.
ಸುಳ್ಳು ಸುದ್ದಿಯೇ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವೂ ಸೇರಿದಂತೆ ದೇಶದಲ್ಲಿ ಅನೇಕ ಗಲಭೆಗಳಿಗೆ ಕಾರಣವಾಗಿದೆ ಎಂದಿರುವ ಅರ್ಜಿದಾರರು, ನಕಲಿ ಟ್ವಿಟರ್ ಹ್ಯಾಂಡಲ್ ಮತ್ತು ಬೋಗಸ್ ಫೇಸ್ಬುಕ್ ಅಕೌಂಟ್ಗಳನ್ನು ಅದಕ್ಕಾಗಿ ಬಳಸಲಾಗುತ್ತಿದೆ ಎಂದಿದ್ದಾರೆ. ಪ್ರಸ್ತುತ ಭಾರತದಲ್ಲಿ 35 ಮಿಲಿಯನ್ ಟ್ವಿಟರ್ ಹ್ಯಾಂಡಲ್ಗಳು ಮತ್ತು 350 ಮಿಲಿಯನ್ ಫೇಸ್ಬುಕ್ ಅಕೌಂಟ್ಗಳಿದ್ದು, ಇವುಗಳಲ್ಲಿ ಶೇ.10 ರಷ್ಟು ನಕಲಿಯಾಗಿವೆ ಎಂದಿದ್ದಾರೆ.
ಇದನ್ನೂ ಓದಿ: ದೀಪ್ ಸಿಧು ಫೇಸ್ಬುಕ್ ಖಾತೆ ನಡೆಸುತ್ತಿದ್ದಾಳೆ ಒಬ್ಬ ವಿದೇಶೀ ಸ್ನೇಹಿತೆ !
ಉದಾಹರಣೆಗೆ ಗೃಹ ಸಚಿವಾಲಯವು ಸಿಖ್ಸ್ ಫಾರ್ ಜಸ್ಟೀಸ್ ಎಂಬ ಸಂಘಟನೆಯನ್ನು ಯುಎಪಿಎ ಕಾನೂನಿನ ಅಡಿ ಭಾರತ ಸರ್ಕಾರ 2019 ರ ಜುಲೈ 10 ರಂದು ನಿಷೇಧಿಸಿದೆ. ಆದರೆ ಟ್ವಿಟರ್ನಲ್ಲಿ ಅದು ಇನ್ನೂ ರಾಷ್ಟ್ರದ್ರೋಹ ಮತ್ತು ಅಪರಾಧಿಕ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ ಎಂದೂ ಆಪಾದಿಸಿರುವ ಅರ್ಜಿದಾರರು, ಆ್ಯಂಟಿ ಇಂಡಿಯಾ ಟ್ವೀಟ್ಗಳನ್ನು ಗೊತ್ತಿದ್ದೂ ಪ್ರಮೋಟ್ ಮಾಡುತ್ತಿರುವ ಟ್ವಿಟರ್ ಮತ್ತು ಅದರ ಪ್ರತಿನಿಧಿಗಳ ಮೇಲೆ ಕ್ರಮ ಕೈಗೊಳ್ಳಲು, ಶಿಕ್ಷೆ ವಿಧಿಸಲು ಸೂಕ್ತ ಕಾನೂನು ರಚಿಸಬೇಕು ಎಂದಿದ್ದಾರೆ.(ಏಜೆನ್ಸೀಸ್)