ಕಾಂಗ್ರೆಸ್ ಸರ್ಕಾರದ ವಿರುದ್ಧ ಅಭಿಯಾನ — ವಿವಿಧ ಸ್ಥಳಗಳಲ್ಲಿ ಭಿತ್ತಿಚಿತ್ರ ಅಂಟಿಸಿ ಪ್ರತಿಭಟನೆ
ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ನಗರ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ‘ಪೋಸ್ಟರ್ ವಾರ್’ ಅಭಿಯಾನ ನಡೆಸಿದರು. ಉಡುಪಿಯ ವಿವಿಧ ಹದಿನೈದು ಸಾರ್ವಜನಿಕ ಸ್ಥಳಗಳಲ್ಲಿ ‘ಪಿಕ್ ಪಾಕೆಟ್ ಸರ್ಕಾರ’ ಎಂಬ ಭಿತ್ತಿಚಿತ್ರ ಅಂಟಿಸಿ ಪ್ರತಿಭಟಿಸಿದರು.
ಉಡುಪಿಯ ಕರಾವಳಿ ಬೈಪಾಸ್, ಕೆಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ಬಸ್ಗಳಿಗೆ ಪಿಕ್ಪಾಕೆಟ್ ಸರ್ಕಾರ ಹಾಗೂ ಕೊಟ್ಟಿದ್ದಕ್ಕಿಂತ ದೋಚಿದ್ದೇ ಹೆಚ್ಚು ಎಂಬ ಬರಹ ಚಿತ್ರವಿರುವ ಪೋಸ್ಟರ್ ಅಂಟಿಸಿದರು.
ಕಾಂಗ್ರೆಸ್ ಸರ್ಕಾರ ಜನರ ಹಣವನ್ನೇ ಸುಲಿಗೆ ಮಾಡಿ, ಅದನ್ನೇ ಗ್ಯಾರಂಟಿ ಹೆಸರಲ್ಲಿ ಹಂಚಿಕೆ ಮಾಡುತ್ತಿದೆ. ಹಿಂದು ವಿರೋಧಿ ನೀತಿ ಅನುಸರಿಸಿ, ಕೇವಲ ಒಂದೇ ಕೋಮಿನ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದರು.
ಮೋರ್ಚಾದ ಉಪಾಧ್ಯಕ್ಷ ಧನುಷ್ ಬಿ.ಕೆ., ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಪೈ, ಶಿವಪ್ರಸಾದ್, ಕಾರ್ಯದರ್ಶಿ ನಿಖಿಲ್ ಮಡಿವಾಳ ಹಾಗೂ ಸದಸ್ಯರು ಇದ್ದರು.
ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯ
ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ ಕುಂಜಿಬೆಟ್ಟು ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಚೊಂಬು ಕೊಟ್ಟಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಕಳೆದ 60 ವರ್ಷ ಆಡಳಿತ ನಡೆಸಿದ ಇವರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ? ಕಳೆದ 10 ತಿಂಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಎಂದು ಜನತೆಗೆ ತಿಳಿದಿದೆ. ಗ್ಯಾರಂಟಿ ಯೋಜನೆಗೆ ಸೀಮಿತವಾಗಿ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಈವರೆಗೂ ಆಗಿಲ್ಲ. ಹೀಗಿದ್ದರೂ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯ ಸಹಿಸದೆ ಜನತೆಗೆ ಚೊಂಬು ನೀಡಿದ್ದಾರೆ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಜೂನ್ 4ರಂದು ಉತ್ತರ ನೀಡಲಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಕೊಡುತ್ತಿದ್ದ 4 ಸಾವಿರ ರೂ.ವನ್ನು ಸ್ಥಗಿತ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಅದೇ ಹಣವನ್ನು ಗೃಹಲಕ್ಷ್ಮೀ ಹೆಸರಲ್ಲಿ 2 ಸಾವಿರ ರೂ. ನೀಡುತ್ತಿದೆ. ಇನ್ನುಳಿದ 2 ಸಾವಿರ ರೂ.ವನ್ನು ಅವರ ಮತ್ತೊಂದು ಬಿಟ್ಟಿ ಭಾಗ್ಯಗಳಿಗೆ ಬಳಸುತ್ತಿದ್ದಾರೆ. ಜನರ ಹಣವನ್ನೇ ಕೊಳ್ಳೆ ಹೊಡೆದು ಅದನ್ನು ಜನರಿಗೆ ಕೊಟ್ಟಂತೆ ತೋರಿಕೆ ಮಾಡುತ್ತಿದ್ದಾರೆ.
ಗಿರೀಶ್ ಕರಂಬಳ್ಳಿ, ನಗರ ಯುವ ಮೋರ್ಚಾ ಸದಸ್ಯ