ಬೆಂಗಳೂರು: ಸ್ವಾಯತ್ತ ಸಂಸ್ಥೆಗಳ ಮೇಲೆ ಆರೋಪ ಮಾಡುವುದರಿಂದ ಕಾಂಗ್ರೆಸ್ ನವರು ಗೆಲ್ಲುತ್ತೇವೆ ಎಂದು ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಹತಾಶೆಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗ, ಇಡಿ, ಐಟಿ, ಸಿಬಿಐ ಮೇಲೂ ಇವರಿಗೆ ಗೌರವವಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿಗೂ ಧಿಕ್ಕಾರ ಹೇಳುವವರು. ಯಾವುದೇ ಸ್ವಾಯತ್ತ ಸಂಸ್ಥೆ ಮೇಲೆ ನಂಬಿಕೆಯಿಲ್ಲವೆಂದು ತೋರಿಸಿಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ವಯಸ್ಸಾಗಿದೆ, ಬೇಡ ಅಂದ್ರೂ ಈ ಶಾಸಕರಿಗೆ ಟಿಕೆಟ್ ಕೊಟ್ಟ ಕಾಂಗ್ರೆಸ್!
ಸ್ವಾಯತ್ತ ಸಂಸ್ತೆಗಳು ತಮ್ಮ ಜವಾಬ್ದಾರಿ ನಿರ್ವಹಿಸಲು ಮುಂದಾದರೆ ಕಾಂಗ್ರೆಸ್ ನಾಯಕರಿಗೆ ಸಮಸ್ಯೆ ಏನು ? ಹಿಂದೆಲ್ಲ ಎಷ್ಟು ಹಗರಣಗಳಾದವು. ಬ್ಯಾಂಕ್ ಗಳ ಎನ್ ಪಿಎ ಮೊತ್ತ ಏರಲು ಯಾರು ಕಾರಣ? ಎಂದು ದೇಶದ ಜನರು ಅರಿತಿದ್ದಾರೆ ಎಂದು ಡಾ.ಕೆ.ಸುಧಾಕರ್ ತಿವಿದರು.
ಸ್ಟಾರ್ ಪ್ರಚಾರಕ
ಚಿತ್ರನಟ ಸುದೀಪ್ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರು. ಚಿತ್ರನಟರು ಚುನಾವಣೆಯಲ್ಲಿ ಪ್ರಚಾರ ಮಾಡುವುದು, ಸ್ಪರ್ಧಿಸಿ ರಾಜಕೀಯ ಅಧಿಕಾರ ಪಡೆಯುವುದು ಹೊಸದೇನಲ್ಲ. ಕಾಂಗ್ರೆಸ್ ಪಕ್ಷವೂ ಸಿನಿಮಾ ನಟಿಯರನ್ನು ಮಂತ್ರಿ ಮಾಡಿದ ಉದಾಹರಣೆಯಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಆಡಳಿತ, ಅಭಿವೃದ್ಧಿ ಕಾರ್ಯಗಳು, ರಾಜ್ಯ ಸರ್ಕಾರದ ಸಾಧನೆಗಳನ್ನು ಮೆಚ್ಚಿ, ಬೇರೆ ಪಕ್ಷಗಳ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎಂದು ಡಾ.ಕೆ.ಸುಧಾಕರ್ ಸಮರ್ಥಿಸಿಕೊಂಡರು.