ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ಆಕ್ಸಿಜನ್ ದುರಂತ ರಾಷ್ಟ್ರವ್ಯಾಪಿ ಸದ್ದು ಮಾಡಿತ್ತು. ಆಕ್ಸಿಜನ್ ಸಿಗದ ಕಾರಣ 24 ಜನ ಕಣ್ಮುಚ್ಚಿದರು. ಇದೀಗ ಆ ನೋವಿನ ಮನೆಗಳ ಕಣ್ಣೀರೊರೆಸುವ ಕೆಲಸಕ್ಕೆ ‘ಕಿಚ್ಚ’ ಸುದೀಪ್ ಮುಂದಾಗಿದ್ದಾರೆ. ಸುದೀಪ್ ಅವರು ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ಆರಂಭಿಸಿರುವುದು ಗೊತ್ತಿರುವ ವಿಚಾರ. ಈಗಾಗಲೇ ರಾಜ್ಯದ ಹಲವೆಡೆಗಳಲ್ಲಿನ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಉದ್ಧಾರಕ್ಕೆ ಶ್ರಮಿಸುತ್ತಿದ್ದಾರೆ. ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. 24 ಕುಟುಂಬಗಳ ಪೈಕಿ ಅವಶ್ಯಕತೆ ಇರುವ 12 ಮನೆಗಳ ಸಂಪೂರ್ಣ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ವಹಿಸಿಕೊಂಡಿದ್ದು, ಅವಶ್ಯಕ ವಸ್ತುಗಳನ್ನು ಪೂರೈಸಲು ಮುಂದಾಗಿದೆ. ಅದೇ ರೀತಿ ಈ 12 ಕುಟುಂಬಗಳಲ್ಲಿ ಕೆಲ ಮಕ್ಕಳ ವಿದ್ಯಾಭ್ಯಾಸಕ್ಕೂ ಟ್ರಸ್ಟ್ ನೆರವಿನ ಹಸ್ತ ಚಾಚಲಿದೆ. ಇದೆಲ್ಲದರ ಬಗ್ಗೆ ಟ್ರಸ್ಟ್ನ
ಸದಸ್ಯ ರಮೇಶ್ ಎಂಬುವವರು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ. ‘ಘಟನೆ ನಡೆದ ಮರುದಿನವೇ ಚಾಮರಾಜನಗರಕ್ಕೆ ತೆರಳಿ ಪರಿಸ್ಥಿತಿ ಗಮನಿಸಿ, 24 ಮನೆಗಳಿಗೆ ಭೇಟಿ ನೀಡಿದ್ದೇವೆ. ಅವುಗಳಲ್ಲಿ 12 ಕುಟುಂಬಗಳ ಸ್ಥಿತಿ ಗಂಭೀರವಾಗಿರುವುದರಿಂದ, ಅವುಗಳ ಜವಾಬ್ದಾರಿಯನ್ನು ಟ್ರಸ್ಟ್ ವಹಿಸಿಕೊಂಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡಲಿದೆ’ ಎಂದಿದ್ದಾರೆ.
ನಟಿ ಸೋನುಗೆ ಸಹಾಯ: ‘ಬಿಗ್ ಬಾಸ್’ ಮಾಜಿಸ್ಪರ್ಧಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ನಟ ಕಿಚ್ಚ ಸುದೀಪ್ ನೆರವಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ವಾರದ ಹಿಂದೆ ಬಾಗಲಕೋಟೆಯ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಅವರಿವರ ಬಳಿ ಹಣ ಹೇಳಿದ್ದರೂ, ಯಾರೂ ನೀಡಿರಲಿಲ್ಲ. ಕೊನೆಗೆ ಸುದೀಪ್ ಅವರ ಬೆನ್ನಿಗೆ ನಿಂತು ಸಹಾಯ ಮಾಡಿದ್ದಾರೆ.
ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!