ಗೋಕಾಕ : ಮೊಬೈಲ್ ಬಳಸಿ ಶಿಕ್ಷಣ ನೀಡುವ ವಿನೂತನ ‘ಮಿಸ್ಡ್ ಕಾಲ್ ಮಾಡಿ ಉತ್ತರ ಪಡೆಯಿರಿ’ ಕಾರ್ಯಕ್ರಮ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ಮಿಸ್ಡ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಕಾಕ ವಲಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಅಂತಿಮ ಹಂತದ ಪರೀಕ್ಷೆಗೆ ತಯಾರಾಗಬೇಕು. ಪರಿಣತ ಶಿಕ್ಷಕರು ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಖಾನೆ ಇದ್ದಂತೆ. ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ ಕಾರ್ಯಕ್ರಮ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರೀಕ್ಷೆ ಎದುರಿಸಲು ಸಹಾಯಕ ಎಂದರು.
ಮಮದಾಪುರ ಗ್ರಾಪಂ ಸದಸ್ಯ ಸುರೇಶ ಸನದಿ ಉದ್ಘಾಟಿಸಿದರು. ಡಿವೈಎಸ್ಪಿ ಡಿ.ಎಚ್ ಮುಲ್ಲಾ , ಬಿಇಒಗಳಾದ ಜಿ.ಬಿ.ಬಳಗಾರ, ಅಜಿತ ಮನ್ನಿಕೇರಿ, ಪಿಎಸ್ಐ ಕೆ.ವಾಲಿಕರ, ವಲಯ ಅರಣ್ಯ ಅಧಿಕಾರಿ ಸಂಜೀವ ಸಂಸುದ್ದಿ, ಡಾ.ಮೋಹನ ಕಮತ, ಎಂ.ಬಿ.ಪಾಟೀಲ, ಎಂ.ಎಲ್.ಜನ್ಮಟ್ಟಿ ಉಪಸ್ಥಿತರಿದ್ದರು.