ಬೆಂಗಳೂರು: ಬಿಜೆಪಿಯಲ್ಲಿ ನನೆಗುದಿಗೆ ಬಿದ್ದಿದ್ದ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಹುದ್ದೆಗಳೆರಡಕ್ಕೂ ಆಯ್ಕೆ ಅಂತಿಮ ಆಗಿರುವುದರಿಂದ ಪಕ್ಷದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳಲಿವೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ, ವೀರಶೈವ ಲಿಂಗಾಯತ ಸಮುದಾಯ ಪ್ರಭಾವಿ ನಾಯಕ ಬಿ.ವೈ.ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದ್ದರೆ, ವಿಪಕ್ಷ ನಾಯಕನ ಸ್ಥಾನಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಸಾಮ್ರಾಟ್ ಎಂದೇ ಕರೆಯಲ್ಪಡುವ, ಒಕ್ಕಲಿಗರ ಸಮುದಾಯದ ಪ್ರಭಾವಿ ನಾಯಕ ಆರ್. ಅಶೋಕ ಅವರನ್ನು ಇಂದು ಆಯ್ಕೆ ಮಾಡಲಾಗಿದೆ.
ಈ ಎರಡು ಆಯ್ಕೆಗಳ ಮೂಲಕ ರಾಜ್ಯದ ಎರಡು ಪ್ರಬಲ ಸಮುದಾಯದವರನ್ನು ಸೆಳೆದು ಪಕ್ಷವನ್ನು ಬಲಗೊಳಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವ ಗಳಿಸುವ ತಂತ್ರ ಅಡಗಿದೆ. ಇನ್ನೊಂದೆಡೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತಷ್ಟು ಬಲ ನೀಡುವ ಉದ್ದೇಶವೂ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಅವರನ್ನು ಕೆಳಗಿಳಿಸಿದ್ದರಿಂದ ವೀರಶೈವ ಲಿಂಗಾಯತ ಸಮುದಾಯದ ಹಲವರು ಬೇಸರಗೊಂಡಿದ್ದರು. ಅಲ್ಲದೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವಲ್ಲಿ ಲಿಂಗಾಯತ ಸಮುದಾಯದವರು ಕಾಂಗ್ರೆಸ್ನತ್ತ ಒಲವು ತೋರಿದ್ದು ದೊಡ್ಡ ಪರಿಣಾಮ ಬೀರಿತ್ತು. ಇನ್ನು ಚುನಾವಣೆಗೆ ಸಮೀಪ ಇರುವಾಗಲೂ ಪಕ್ಷದ ಹೈಕಮಾಂಡ್ ಬಿಎಸ್ವೈ ಅವರಿಗೆ ಅಂಥ ಪ್ರಾಮುಖ್ಯತೆ ನೀಡದ್ದೂ ಬಿಜೆಪಿ ಸೋಲಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!
ಆದರೆ ಈಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಅದರಲ್ಲೂ ಬಿಎಸ್ವೈ ಪುತ್ರ ವಿಜಯೇಂದ್ರ ಅವರಿಗೇ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಲಿಂಗಾಯತ ಸಮುದಾಯವನ್ನು ಸೆಳೆಯಲಿರುವುದಲ್ಲದೆ, ಬಿಎಸ್ವೈಗೂ ಬಲ ನೀಡಿದಂತಾಗಿದೆ. ಬಳಿಕ ಇಂದು ಆರ್. ಅಶೋಕ ಅವರಿಗೆ ವಿಪಕ್ಷ ನಾಯಕ ಸ್ಥಾನ ನೀಡಿರುವುದು ಕೂಡ ಬಿಎಸ್ವೈ ಪಾಳಯಕ್ಕೆ ಅನುಕೂಲವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ಒಟ್ಟಿನಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಎಸ್ವೈ ಮಹತ್ವದ ಪಾತ್ರ ವಹಿಸುವಂತೆ ಹೈಕಮಾಂಡ್ ಎರಡು ಪ್ರಮುಖ ಸ್ಥಾನಗಳಿಗೆ ಪ್ರಭಾವಿ ನಾಯಕರನ್ನು ಆಯ್ಕೆ ಮಾಡಿರುವುದು ಯಡಿಯೂರಪ್ಪ ಅವರ ಪ್ರಭಾವಳಿಯನ್ನೂ ಹೆಚ್ಚಿಸಲಿದೆ ಎನ್ನಲಾಗಿದೆ. ಇದರಿಂದ ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಹೆಚ್ಚಿನ ಆಸಕ್ತಿಯಿಂದ ತೊಡಗಿಕೊಳ್ಳುವ ಸಾಧ್ಯತೆಗಳೂ ಗೋಚರಿಸಿವೆ ಎನ್ನಲಾಗುತ್ತಿದೆ.
ಕುತೂಹಲ ಕೆರಳಿಸಿದೆ ಯತ್ನಾಳ್ ಅವರ ಆ ಒಂದು ಸಾಲು; ಏನದು? ಭುಗಿಲೇಳುತ್ತಾ ಭಿನ್ನಮತ?
ವಿಶ್ವಕಪ್ ಕ್ರಿಕೆಟ್ ಫೈನಲ್ನ ಲಾಭ ಪಡೆಯಲು ಮುಂದಾದ ಪಾಲಿಕೆ; ಕೈಗೊಂಡ ಕ್ರಮ ಏನು?