ಬೆಂಗಳೂರು: 2020-21ನೇ ಶೈಣಿಕ ಸಾಲಿನ ಪದವಿ ಮತ್ತು ಸ್ನಾತಕೋತ್ತರ ತರಗತಿಯನ್ನು ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ತಾಲೀಮು ಆರಂಭಿಸಿದೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅ.20ರಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರಥಮ ಸಭೆಯನ್ನು ನಡೆಸಲಿದ್ದು, ಈ ಹಂತದಲ್ಲಿ ಕಾಲೇಜು ಆರಂಭ ಸೂಕ್ತವೇ? ಸಾಧ್ಯವೇ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಈ ಸಂಬಂಧ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಕಾಲೇಜು ಆರಂಭಿಸುವ ಕುರಿತು ಸರ್ಕಾರದ ನಿಲುವು ಏನಾಗಿರಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಕಷ್ಟು ಹಂತದ ತಯಾರಿ ಬೇಕಾಗುತ್ತದೆ. ಮೊದಲ ಸಭೆ ಮಂಗಳವಾರ ನಡೆಸುತ್ತಿದ್ದೇವೆ, ಮುಂದೆ ಹಲವು ಸುತ್ತಿನ ಸಭೆ ನಡೆಸಲಾಗುತ್ತದೆ ಎಂದರು.
ಈ ಹಂತದಲ್ಲಿ ತರಗತಿ ಆರಂಭದ ಬಗ್ಗೆ ಅನಿಶ್ಚಿತತೆ ಇದೆ. ಅಧಿಕಾರಿಗಳು, ತಜ್ಞರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಬೇಕಾಗುತ್ತದೆ. ಬಳಿಕ ಮುಖ್ಯಕಾರ್ಯದರ್ಶಿ ಹಂತದಲ್ಲಿ ಸಭೆ ನಡೆಸಬೇಕಾಗುತ್ತದೆ ಎಂದು ವಿವರಿಸಿದ ಡಿಸಿಎಂ, ನವೆಂಬರ್ನಲ್ಲಿ ಕಾಲೇಜು ಆರಂಭಿಸುವ ಗುರಿ ಇದ್ದರೂ ಯಾವುದೇ ತರಾತುರಿ ಮಾಡಲ್ಲ. ಪರಿಸ್ಥಿತಿ ಅವಲೋಕಿಸಿ, ಸಾಧಕ, ಬಾಧಕ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.
ಈಗಾಗಲೇ ಆನ್ಲೈನ್ ಮೂಲಕ ತರಗತಿಗಳು ನಡೆಯುತ್ತಿದ್ದರೂ ಅವು ಸ್ಥಳೀಯ ವಾತಾವರಣಕ್ಕೆ ಪರಿಣಾಮಕಾರಿಯಾಗಿಲ್ಲ. ಅದರಲ್ಲೂ ವೃತ್ತಿ ಶಿಕ್ಷಣ ಕೋರ್ಸ್ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಸಮಸ್ಯೆಯೊಡ್ಡಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾಲೇಜು ಆರಂಭಕ್ಕೆ ಪರ್ಯಾಯ ಮಾರ್ಗ ಹುಡುಕಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳಿಗೆ ಪದವಿ ಅಂತಿಮ ವರ್ಷ ಮುಖ್ಯ, ಒಂದೊಮ್ಮೆ ಅದು ಪರಿಪೂರ್ಣವಾಗಿ ಮುಗಿಯದೇ ಇದ್ದರೆ ವಿದ್ಯಾರ್ಥಿಗಳ ಔದ್ಯೋಗಿಕ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಈ ಕಾರಣಕ್ಕೆ ಸರ್ಕಾರ ಕೂಡ ಚಿಂತಿತವಾಗಿದೆ.
ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್ ಪತ್ನಿ!