ಬೆಂಗಳೂರು: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ಸೇಂಟ್ ಜೋಸೆಫರ ಕಾನ್ವೆಂಟ್ ಗಲ್ರ್ಸ್ ಹೈಸ್ಕೂಲ್ನ ಐ.ಪಿ. ತನ್ಮಯಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯಕ್ಕೆ ಟಾಪರ್ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಖುಷಿ ತಡೆಯಲಾಗದೆ ತನ್ಮಯಿ ಆನಂದಬಾಷ್ಪ ಸುರಿಸಿದರು. ಮಾರ್ಚ್-ಏಪ್ರಿಲ್ನಲ್ಲಿ ಪರೀಕ್ಷೆ ನಡೆಯುವ ಹುಮ್ಮಸ್ಸಿನಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದ ತನ್ಮಯಿ ಕರೊನಾ ಲಾಕ್ಡೌನ್ ವೇಳೆ ದಿನಕ್ಕೆರಡು ತಾಸು ಓದುತ್ತಿದ್ದರಷ್ಟೆ. ಆ ಸಮಯದಲ್ಲಿ ಮನೆಯವರೊಂದಿಗೆ ಕಾಲಕಳೆಯುತ್ತ ಇದ್ದೆ ಎನ್ನುವ ತನ್ಮಯಿ, ‘ಎಕ್ಸಾಂ ಡೇಟ್ ಅಧಿಕೃತ ಆದ ಬಳಿಕ ಮತ್ತೊಮ್ಮೆ ಎಲ್ಲವನ್ನೂ ಪುನರ್ಮನನ ಮಾಡಿಕೊಂಡೆ. ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದದ್ದು ಖುಷಿಯಾಗಿದೆ’ ಎಂದು ವಿಜಯವಾಣಿಗೆ ತಿಳಿಸಿದರು.
ಇದನ್ನೂ ಓದಿರಿ ಎಸ್ಎಸ್ಎಲ್ಸಿ ಟಾಪರ್ ಧೀರಜ್ ರೆಡ್ಡಿಗೆ ಲಾಕ್ಡೌನ್ ಸಮಯವೇ ವರವಾಯ್ತು!
‘ಕರೊನಾ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದಾಗುವ ಆತಂಕ ಎದುರಾಗಿತ್ತು. ಪರೀಕ್ಷೆ ನಡೆಯದಿದ್ದರೆ ನಿಜಕ್ಕೂ ತುಂಬಾ ಬೇಸರವಾಗುತಿತ್ತು. ಕೊನೆಗೂ ಎಕ್ಸಾಂ ನಡೆದದ್ದು ಖುಷಿ ವಿಚಾರ. ನಾನು ಚೆನ್ನಾಗಿಯೇ ಓದಿದ್ದರೂ ಪರೀಕ್ಷೆಗೆ ಹೋಗುವ ಮೊದಲೆರಡು ದಿನ ಕರೊನಾ ಭಯ ಕಾಡುತ್ತಿತ್ತು. ದೇವರ ದಯೆ ಎಲ್ಲವೂ ಸಲೀಸಾಗಿ ನಡೆಯಿತು. ನನ್ನ ಈ ಸಾಧನೆಗೆ ಶಿಕ್ಷಕರು ಮತ್ತು ಪಾಲಕರ ಸಹಕಾರ ಹೆಚ್ಚಾಗಿದೆ. ಮನೆಯಲ್ಲಿ ನನ್ನ ಓದಿಗೆ ಅಪ್ಪ-ಅಮ್ಮ ನಿತ್ಯವೂ ಕಾಳಜಿ ವಹಿಸುತ್ತಿದ್ದರು’ ಎಂದು ತನ್ಮಯಿ ಹೇಳಿದರು.
ತನ್ಮಯ ತಂದೆ ಇ.ಎಸ್. ಪ್ರಸನ್ನ ವಸ್ತಾರೆ ಗ್ರಾಮದ ಉಪ ತಹಸೀಲ್ದಾರ್ ಆಗಿದ್ದು, ತಾಯಿ ಸಂಧ್ಯಾ ಡಿ.ಎಲ್. ಮಲ್ಲಂದೂರು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ. ಮುಂದೆ ಡಾಕ್ಟರ್ ಆಗುವ ಕನಸುಕಟ್ಟಿಕೊಂಡಿದ್ದಾರೆ ತನ್ಮಯಿ. ಇವರ ಸಾಧನೆಗೆ ಪಾಲಕರು ಮತ್ತು ಶಾಲೆಯಲ್ಲಿ ಸಂಭ್ರಮ ಮನೆಮಾಡಿದೆ.